ಕೈಕಂಬ : ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದಲ್ಲಿ ಶನಿವಾರ ಕಾಲಾವಧಿ ಬಂಡಿ ಜಾತ್ರೆಯ ಪ್ರಯುಕ್ತ ದೈವ ಪಾತ್ರಿಗಳಿಂದ ದರ್ಶನ, ಅಭಯ ಪ್ರದಾನ, ಗರಡೆ ಆರೋಹಣ(ಧ್ವಜಾರೋಹಣ), ಕಂಚೀಲು ಸೇವೆ ಮತ್ತು ಉರುಳು ಸೇವೆ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಪ್ರಾತಃಕಾಲ ೫ ಗಂಟೆಗೆ ಬದಿನ ಮನೆಯಿಂದ ವೈದ್ಯನಾಥ ಪಾತ್ರಿ ಚಂದ್ರಹಾಸ ಕೌಡೂರು ಮತ್ತು ಧೂಮಾವತಿ ಪಾತ್ರಿ ತನಿಯಪ್ಪ ಪೂಜಾರಿಯವರ ದರ್ಶನದೊಂದಿಗೆ ದೈವಸ್ಥಾನಕ್ಕೆ ಭಂಡಾರ ಆಗಮನವಾಯಿತು. ಗಡಿಕಾರ ಪ್ರಮೋದ್ ಕುಮಾರ್ ರೈ, ತಂತ್ರಿ ವಾಸುದೇವ ಭಟ್, ಗುತ್ತಿನ ಯಜಮಾನರು, ದೈವದ ಚಾಕರಿ ಸಿಬ್ಬಂದಿ, ಭಂಡಾರ ಮನೆ ಕುಟುಂಬಿಕರು, ಊರಿನ ಭಕ್ತರು ಜೊತೆಯಲ್ಲಿದ್ದರು.
ಧ್ವಜಾರೋಹಣದ ಬಳಿಕ ನಡೆದ ಕಂಚೀಲು ಸೇವೆ ಮತ್ತು ಉರುಳು ಸೇವೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ದೈವ ಭಕ್ತರು ಪಾಲ್ಗೊಂಡಿದ್ದರು. ಮಧ್ಯಾಹ್ನ ೧ ಗಂಟೆಯಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಮಂಗಳೂರುನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿ ದೈವಸ್ಥಾನಕ್ಕೆ ಆಗಮಿಸಿ, ದೈವಗಳಿಂದ ಪ್ರಸಾದ ಸ್ವೀಕರಿಸಿದರು.
ರಾತ್ರಿ ೮ಕ್ಕೆ ಶ್ರೀ ಮೈಸಂದಾಯ ಹಾಗೂ ರಾತ್ರಿ ೧೦ರಿಂದ ಶ್ರೀ ವೈದ್ಯನಾಥ ದೈವಗಳ ನೇಮೋತ್ಸವ ಜರುಗಿತು. ಮುಂಜಾನೆ `ಬಂಡಿ’ ರಥೋತ್ಸವ, ಅಭಯ ಪ್ರದಾನ ನಡೆಯಿತು.
