ಕುಪ್ಪೆಪದವು: ಕುಪ್ಪೆಪದವು ಗ್ರಾಮ ಪಂಚಾಯತ್ ಮಟ್ಟದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ(20ಅಂಶ ಕಾರ್ಯಕ್ರಮವು ಸೇರಿದಂತೆ )ಪ್ರಗತಿ ಪರಿಶೀಲನಾ(ಕೆಡಿಪಿ )ಸಭೆಯು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಲೀಲಾವತಿ ಯವರ ಅಧ್ಯಕ್ಷತೆಯಲ್ಲಿ, ಇಲ್ಲಿನ ರಾಜೀವ ಗಾಂಧಿ ಸಭಾಭವನದಲ್ಲಿ ಶನಿವಾರ ನಡೆಯಿತು, ಇಪ್ಪತ್ತೆರಡು ಇಲಾಖೆಗಳ ಅಧಿಕಾರಿಗಳಿಗೆ ಸಭೆಯ ನೋಟೀಸು ನೀಡಿದ್ದರೂ, ಪ್ರಮುಖ ಇಲಾಖೆಗಳಾದ ಕೃಷಿ, ತೋಟಗಾರಿಕೆ, ನೀರಾವರಿ, ಪಂಚಾಯತ್ ರಾಜ್ ಇಂಜಿನೀಯರಿಂಗ್ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು ಮತ್ತು ಪಂಚಾಯತ್ ಉಪಾಧ್ಯಕರು, ಕೆಲವು ಸದಸ್ಯರು ಗೈರು ಹಾಜರಾಗಿದ್ದರು.
ಪರಿಸರ ರಕ್ಷಿಸಿ :ಸಭೆಯಲ್ಲಿ ಮಾತನಾಡಿದ ಅರಣ್ಯ ರಕ್ಷಕ ಕ್ಯಾತಲಿಂಗ ಸಿದ್ರಾಮ “ಪಂಚಾಯತ್ ಮಟ್ಟದಲ್ಲಿರುವ ಜೀವವೈವಿಧ್ಯ ನಿರ್ವಹಣಾ ಸಮಿತಿಗಳು ನಿಷ್ಕ್ರೀಯ ವಾಗಿವೆ, ಪರಿಸರ ಸಂರಕ್ಷಣೆಗೆ ಪಂಚಾಯತ್ ಯಾವುದೇ ಕ್ರಮಗಳನ್ನು ಹಮ್ಮಿಕೊಳ್ಳುವುದಿಲ್ಲ, ಈ ಬಗ್ಗೆ ಗಮನಹರಿಸುವಂತೆ ಕೋರಿದರು, ಅರಣ್ಯ ಬೆಳೆಸಲು ಇಲಾಖೆ ಕಡಿಮೆ ದರದಲ್ಲಿ ಗಿಡಗಳನ್ನು ವಿತರಿಸುತ್ತಿದೆ ಅವುಗಳನ್ನು ನೆಟ್ಟು ಬೆಳೆಸಿ, ಪರಿಸರ ಸಂರಕ್ಷಣೆಯೋಂದಿಗೆ ಆದಾಯವನ್ನೂ ಗಳಿಸಬಹುದು ಎಂದರು,
ಶಾಲೆಗೆ ಕಂಪ್ಯೂಟರ್ ಕೊಡಿ : ಕಲ್ಲಾಡಿ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಸುರೇಖಾ ಅವರು ಮಾತನಾಡಿ ಶಾಲೆಗಳಿಗೆ ಸಂಭಂದ ಪಟ್ಟ ಸುಮಾರು ಹದಿಮೂರು ಸೇವೆಗಳು ಆನ್ ಲೈನ್ ನಲ್ಲೆ ಮಾಡಬೇಕಾಗಿರುವದರಿಂದ, ಕಂಪ್ಯೂಟರ್ ವ್ಯವಸ್ಥೆ ಅತೀ ಅಗತ್ಯ, ಸದ್ಯ ಖಾಸಗಿ ಸೈಬರ್ ಕೇಂದ್ರಗಳಲ್ಲಿ ಈ ಕೆಲಸಗಳನ್ನು ಮಾಡುತ್ತಿದ್ದೇವೆ, ಇದು ತುಂಬಾ ಸಮಸ್ಯೆಯಾಗಿದೆ, ಶಾಲೆಗಳಿಗೆ ಕಂಪ್ಯೂಟರ್ ಗ ಳನ್ನು ಒದಗಿಸಿಕೊಡಿ, ಇಲ್ಲವೇ ಪಂಚಾಯತ್ ಕಚೇರಿಯಲ್ಲಾದರೂ ವ್ಯವಸ್ಥೆ ಮಾಡಿದರೆ, ಈ ಭಾಗದ ಶಾಲೆಗಳು ಇವುಗಳನ್ನು ಬಳಸಿಕೊಳ್ಳಬಹುದಾಗಿದೆ ಎಂದರು, ಸಭೆಯಲ್ಲಿ ಮಾತನಾಡಿದ ಅಧಿಕಾರಿಗಳು, ತಾವು ಮಾತನಾಡಿದ ನಂತರ ಸಭೆಯಿಂದ ತೆರಳುತ್ತಿದ್ದರು ಇದಕ್ಕೆ ಪಂ. ಸದಸ್ಯ ಅಬೂಬಕ್ಕರ್ ಕಲ್ಲಾಡಿ ಆಕ್ಷೇಪ ವ್ಯಕ್ತಪಡಿಸಿದರು, ಕುಪ್ಪೆಪದವು ಪ್ರಾ. ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ, ಕಂದಾಯ, ಪಶುಇಲಾಖೆ, ಮೆಸ್ಕಾಂ, ಆಹಾರಇಲಾಖೆ,ಶಿಕ್ಷಣಇಲಾಖೆ ಹಾಲು ಉತ್ಪಾದಕರ ಸಂಘ, ಗ್ರಂಥಾಲಯ ಇಲಾಖೆಗಳ ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು, ಸಭೆಗೆ ಗೈರಾದ ಅಧಿಕಾರಿಗಳ ಬಗ್ಗೆ ಸೂಕ್ತಕ್ರಮಕ್ಕಾಗಿ ಇಲಾಖಾ ಮುಖ್ಯಸ್ಥರಿಗೆ ಪತ್ರ ಬರೆಯಲು ಸಭೆಯಲ್ಲಿ ನಿರ್ಣಯಿಸಲಾಯಿತು, ಪಂ. ಅಭಿವೃದ್ಧಿ ಅಧಿಕಾರಿ ಸವಿತ ಮಂದೋಲಿಕರ್ ಸಭೆಯನ್ನು ನಿರ್ವಹಿಸಿದರು.
ಸಭೆಯಲ್ಲಿ ಕೇಳಿಬಂದ ಬೇಡಿಕೆಗಳು :ಕುಪ್ಪೆಪದವು ಅರಮನೆ ಪ್ರೌಢಶಾಲೆಗೆ ಆವರಣಗೋಡೆ ನಿರ್ಮಾಣ, ಎಡಪದವಿನಲ್ಲಿ ವಿದ್ಯುತ್ ಬಿಲ್ ಪಾವತಿಗೆ ವ್ಯವಸ್ಥೆ, ಹಾಲು ಉತ್ಪಾದಕರ ಸಂಘದ ಬಳಿ ಚರಂಡಿ ನಿರ್ಮಾಣ.

