ಕಟೀಲು ಶ್ರೀ ದುರ್ಗಾಪರಮೆಶ್ವರೀ ದೇವಸ್ಥಾನದಲ್ಲಿ ಜನವರಿ 22 ರಿಂದ ಮಾರ್ಚ್ 3 ರರವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದ್ದು ಅದರ ಪೂರ್ವಭಾವಿಯಾಗಿ ಭರದ ಸಿದ್ದತೆ ನಡೆಯುತ್ತಿದೆ. ಕಟೀಲು ಸಿತ್ಲ ಬೈಲ್ ನಲ್ಲಿ ಅನ್ನಸಂತರ್ಪಣೆಗೆ ಜಾಗ ನಿಗದಿಪಡಿಸಿದ್ದು ಸಮತಟ್ಟುಗೊಳಿಸುವ ಕೆಲಸ ನಡೆಯುತ್ತಿದೆ, ನೂರಾರು ಸಂಘ ಸಂಸ್ಥೆಯ ಕಾರ್ಯಕರ್ತರು ಕಟೀಲು ಸುತ್ತ ಮುತ್ತ ಸ್ವಚ್ಚತೆ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಪ್ರತೀ ಭಾನುವಾರ ಕಾರ್ಯಕರ್ತರ ಸಂಖ್ಯೆ ಹೆಚ್ಚಾಗುತ್ತಿದೆ,

ಕಟೀಲು ಪದವೀಪೂರ್ವ ಕಾಲೇಜಿನಿಂದ 300, ಪದವಿ ಕಾಲೇಜಿನಿಂದ 350, ಎರಡು ಭಾನುವಾರ ಪರಿಸರದ ಗ್ರಾಮಗಳ ಸಂಘಸಂಸ್ಥೆಗಳ ಐನೂರಕ್ಕೂ ಹೆಚ್ಚು ಸದಸ್ಯರು, ಕಟೀಲು ದೇವಳದ ಸುತ್ತಮುತ್ತಲ ಅಂಗಡಿಯವರು, ರಿಕ್ಷಾ ಚಾಲಕ ಮಾಲಕರು, ಕಟೀಲು ದೇಗುಲದ ಸಿಬಂದಿಗಳು, ಉಪ್ಪಳದ ಕೊಂಡೆವೂರು ಸ್ವಾಮಿಗಳ ನೇತೃತ್ವದಲ್ಲಿ ನೂರ ಇಪ್ಪತ್ತೈದು ಮಂದಿ ಹೀಗೆ ಇದುವರೆಗೆ ಒಂದು ಸಾವಿರದ ಐನೂರು ಮಂದಿ ಸ್ವಯಂಸೇವಕರಾಗಿ ಕರಸೇವೆ ಮಾಡಿದ್ದಾರೆ. ಭೋಜನ ಶಾಲೆಯ 30 ಸಿಬಂದಿಗಳು ದಿನಂಪ್ರತಿ ಬೆಳಿಗ್ಗೆ 8.30ರಿಂದ 11ಗಂಟೆಯ ತನಕ ಶ್ರಮದಾನ ಮಾಡಿ ಸ್ವಚ್ಛತೆ ಮಾಡುತ್ತಿದ್ದಾರೆ.
ಉದ್ಯಮಿಗಳಿಂದ ಉಚಿತ ಜೆಸಿಬಿ
ಈವರೆಗೆ ಐದು ಜೆಸಿಬಿಗಳು, ಎರಡು ಹಿಟಾಚಿಗಳು, 56 ಟಿಪ್ಪರ್ಗಳು ಹನ್ನೊಂದು ದಿನಗಳಿಂದ ಸಮತಟ್ಟುಗೊಳಿಸುವ ಕೆಲಸದಲ್ಲಿ ತೊಡಗಿದ್ದು, ಕೆಲವರು ಉಚಿತವಾಗಿ ನೀಡಿದರೆ, ಇನ್ನು ಕೆಲವರು ಕೇವಲ ಡಿಸೀಲ್ ಹಾಕಿಸಿ ಕೆಲಸ ನಡೆಸುತ್ತಿದ್ದಾರೆ. ಸುಮಾರು ಆರು ಎಕರೆಯ ಸಿತ್ಲ ಬೈಲು ಸಮತಟ್ಟು ಗೊಳ್ಳುತ್ತಿದ್ದು, ಈ ಸ್ಥಳ ಭೋಜನ ಶಾಲೆ ಅನ್ನಸಂತರ್ಪನೆ, ಉಪಾಹಾರಕ್ಕೆ, ಅಡುಗೆಕೋಣೆಗೆ ಬಳಕೆಯಾಗಲಿದೆ. ಅನ್ನಪೂರ್ಣ ಭೋಜನ ಶಾಲೆಯ ಹಿಂಬದಿ ಹತ್ತು ದಿನಗಳಿಂದ ಸಮಪಟ್ಟು ಮಾಡುವ ಕೆಲಸ ಆಗುತ್ತಿದೆ. ರಿಕ್ಷಾ ಪಾರ್ಕ್ ಬಳಿಯಿಂದ ಕುದ್ರುಗೆ ಮತ್ತು ಕುದ್ರುವಿನಿಂದ ಭೋಜನ ಶಾಲೆಗೆ ಹೋಗಲು ಹೋಗಲು ನದಿ ಮೂಲಕ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಭಕ್ತರ ಸುರಕ್ಷತೆಯ ದೃಷ್ಟಿಯಿಂದ ಕುದ್ರು ಮತ್ತು ಕುದ್ರುವಿನಿಂದ ಬೋಜನಾ ಶಾಲೆಗೆ ಹೋಗುವ ಶಾಶ್ವತ ಸೇತುವೆಯ ಎರಡೂ ಬದಿಯಲ್ಲಿ ಮೆಟಲ್ ಗ್ರಿಲ್ ತಡೆಗೋಡೆಯನ್ನು ಮಾಡಲಾಗಿದೆ. ವಾಹನ ಪಾರ್ಕಿಂಗ್ಗೆ 20ಕ್ಕೂ ಹೆಚ್ಚು ಎಕರೆಯಷ್ಟು ಭೂಮಿ ವ್ಯವಸ್ಥೆಗೊಳ್ಳಲಿದೆ. ವಿವಿಧ ಕಾಮಗಾರಿಗಳು ಭರದಿಂದ ಸಾಗಿದೆ.
ಕೋಟಿಜಪಯಜ್ಞ ಅಭಿಯಾನ
ಬ್ರಹ್ಮಕಲಶೋತ್ಸವಕ್ಕೂ ಮುಂಚೆ ಭಕ್ತರೆಲ್ಲರೂ ಸೇರಿ ಆರಾಧಿಸುವ ಮಹತ್ವಾಕಾಂಕ್ಷೆಯನ್ನಿರಿಸಿ, ಕೋಟಿಜಪಯಜ್ಞ ಅಭಿಯಾನವನ್ನು ದೇವಳದ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಈ ದೃಷ್ಟಿಯಲ್ಲಿ, ಮಾರ್ಕಂಡೇಯಪುರಾಣದಲ್ಲಿ ಉದ್ಧರಿಸಲ್ಪಟ್ಟ ದೇವೀಮಾಹಾತ್ಮ್ಯೆಯ ಸ್ತುತಿಶ್ಲೋಕವೊಂದನ್ನು ಭಕ್ತರೆಲ್ಲರೂ ಸೇರಿ ಕೋಟಿಸಂಖ್ಯೆಗಳಲ್ಲಿ ಜಪಿಸುವುವ ಬಗ್ಗೆ ಸಂಕಲ್ಪಿಸಲಾಗಿದೆ. “ಸಪ್ತಶತೀ” ಎಂಬುವುದಾಗಿ ಕರೆಯಲ್ಪಡುವ ಏಳುನೂರು ಮಂತ್ರಗಳಿರುವ, ದೇವಿಯ ಪರಾಕ್ರಮವನ್ನು, ವೈಭವವನ್ನು, ಅನುಗ್ರಹವನ್ನು ಕೊಂಡಾಡುವ “ದೇವೀಮಾಹಾತ್ಮ್ಯಮ್” ಎಂಬ ಗ್ರಂಥದಲ್ಲಿ ಉದ್ಧರಿಸಲ್ಪಟ್ಟ “ಜ್ಞಾನಿನಾಮಪಿ ಚೇತಾಂಸಿ…..” ಈ ಮೊದಲಾದ ಸಪ್ತಶ್ಲೋಕಗಳು ವಿಶೇಷ ಫಲವನ್ನು ಕೊಡುವಂತಹದ್ದು ಎಂದು ತಂತ್ರಗ್ರಂಥಗಳಲ್ಲಿ ಹೇಳಲ್ಪಟ್ಟಿದ್ದು ಆ ಏಳುಮಂತ್ರಗಳಲ್ಲಿಯೂ ಪ್ರಸಿದ್ಧವಾದ
ಸರ್ವಮಂಗಲಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ | ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋಸ್ತು ತೇ || ಈ ಮಂತ್ರವನ್ನೇ ನಾಮಕೋಟಿಜಪಯಜ್ಞಕ್ಕಾಗಿ ನಿಶ್ಚಯಿಸಲಾಗಿದೆ. ಡಿಸೆಂಬರ್ 5 ರಂದು ಶ್ರೀ ಕ್ಷೇತ್ರದಲ್ಲಿ ನಡೆಯಲಿರುವ ಋಕ್ಸಂಹಿತಾ ಯಾಗದ ದಿನದಂದು ಈ ಮಂತ್ರದ ದೀಕ್ಷೆಯನ್ನು ನೀಡಿ ಪ್ರತಿನಿತ್ಯ ಭಕ್ತರು ಯಥಾಶಕ್ತಿ ಮಾಡಿಕೊಂಡು ಬಂದು 2020 ಫೆಬ್ರವರಿ 2 ರಂದು ಶ್ರೀಕ್ಷೇತ್ರದಲ್ಲಿ ಕೋಟಿಜಪಯಜ್ಞದಲ್ಲಿ ಬ್ರಹ್ಮಾರ್ಪಣ ಮೂಲಕ ಪ್ರಸಾದವನ್ನು ಪಡೆಯಬಹುದಾಗಿದೆ.

ಡಿಸೆಂಬರ್ 15 ರಂದು ಬೆಳಿಗ್ಗೆ 9.00 ಗಂಟೆಗೆ ಎಕ್ಕಾರು ಹಾಗೂ ಕಿನ್ನಿಗೋಳಿಯ ಮೂರುಕಾವೇರಿಯಿಂದ ದೇವಳದವರೆಗೆ ಪಾದಯಾತ್ರೆ ಮೂಲಕ ಸಾಗಿಬಂದು ಮೂಲಸ್ಥಾನ ಭ್ರಾಮರೀವನದಲ್ಲಿ ಸೇರಿ ಅಲ್ಲಿ ಮಂತ್ರವಿಧಿಯನ್ನು ನೀಡಲಾಗುತ್ತದೆ, ಭಕ್ತರು ಯಾವುದೇ ಧಾರ್ಮಿಕ ಕೇಂದ್ರಗಳನ್ನು ಅಥವಾ ಮನೆಗಳಲ್ಲಿ ಈ ಜಪವನ್ನು ಮಾಡಬಹುದಾಗಿದೆ.ದೂರದ ಊರಿನ ಭಕ್ತರು ಶ್ರೀ ಕ್ಷೇತ್ರಕ್ಕೆ ಬರಲು ಅನನುಕೂಲ ಆದಲ್ಲಿ ಸಮೀಪದ ಧಾರ್ಮಿಕ ಕೇಂದ್ರದಲ್ಲಿ ದೀಕ್ಷೆಯನ್ನು ಪಡೆದು ಅನುಷ್ಠಾನ ಕೈಗೊಳ್ಳಬಹುದಾಗಿದೆ. ಡಿಸೆಂಬರ್ 1 2019ರಿಂದ ದೇವಳದ ಬ್ರಹ್ಮಕಲಶೋತ್ಸವ ಕೌಂಟರಿನಲ್ಲಿ ರೂ. 50/-ನ್ನು ನೀಡಿ ಜಪಾರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಬಹುದಾಗಿದ್ದು. ಶ್ರೀ ಕ್ಷೇತ್ರದಿಂದ ನಿಗದಿಪಡಿಸಿದ ಸ್ಥಾನೀಯ ಕೇಂದ್ರಗಳಲ್ಲಿಯೂ ನೋಂದಣಿ ವ್ಯವಸ್ಥೆ ಮಾಡಲಾಗುತ್ತದೆ. ಸಂಘ ಸಂಸ್ಥೆಗಳು, ವಿದ್ಯಾಸಂಸ್ಥೆಗಳು ತಮ್ಮ ತಮ್ಮ ಕೇಂದ್ರಗಳಲ್ಲಿ ಸಾಮೂಹಿಕವಾಗಿ ಈ ಸತ್ಕಾರ್ಯದಲ್ಲಿ ಕೈಜೋಡಿಸಲು ಅವಕಾಶವಿದೆ.
ಜಪದ ನಿಯಮಗಳು
ಜಪವನ್ನು ಪ್ರಾರಂಭಿಸಿ ಜಪಸಮಾಪ್ತಿ ಆಗಿ ಕೋಟಿಜಪಯಜ್ಞ ಮುಗಿಯುವವರೆಗೆ ಶಾಖಾಹಾರಿಗಳಾಗಿರಬೇಕಾಗುತ್ತದೆ. ಶುಕ್ರವಾರದಂದು ಭೋಜನ ಸೇವನೆಯ ನಿಯಮದಲ್ಲಿರಬೇಕು. ಫಲಾಹಾರ ಮಾಡಬಹುದು. ಹೆಂಗಳೆಯರು ರಜಸ್ವಲೆಯಾಗುವ ಸಂದರ್ಭ ನಾಲ್ಕು ದಿನ ಜಪಮಾಡದೆ ಐದನೇ ದಿನ ಮುಂದುವರಿಸಬೇಕು.



