ಬರೋಡಾದ ನಿರಾಶ್ರಿತರಿಗೆ ನೆರವಾದ ಉದ್ಯಮಿ ಶಶಿಧರ ಬಿ.ಶೆಟ್ಟಿ
ಬರೋಡ : ಗುಜರಾತ್ ರಾಜ್ಯದ ಬರೋಡ ನಿವಾಸಿ, ಶಶಿ ಕೇಟರಿಂಗ್ ಸರ್ವಿಸ್ನ ಮಾಲಕ, ಗುಜರಾತ್ ತುಳು ಸಂಘ ಬರೋಡ ಅಧ್ಯಕ್ಷ, ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ಗುಜರಾತ್ ರಾಜ್ಯ ಘಟಕದ ಪ್ರಧಾನ ಸಂಘಟಕ ಶಶಿಧರ ಬಿ.ಶೆಟ್ಟಿಯವರು ಅತಿವೃಷ್ಟಿಯಿಂದ ಬರೋಡಾದ ಸುಮಾರು 30-40 ಸಾವಿರ ಜನರ ವಾಸ್ತವ್ಯದ ಜಲಾವೃತ ಪ್ರದೇಶಗಳಿಗೆ ತೆರಳಿ ನಿರಾಶ್ರಿತರಿಗೆ ಆಹಾರ ಪೋಟ್ಟಣ, ಲಕ್ಷಾಂತರ ಲೀಟರ್ ನೀರು ಬಾಟಲಿ ನೀಡಿ ಅಭಯಹಸ್ತ ಚಾಚಿ ಮಾನವೀಯತೆ ಮೆರೆದರು.
ಬರೋಡಾದ ಪ್ರತಿಷ್ಠಿತ ಉದ್ಯಮಿ, ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಗುರುವಾಯನಕೆರೆ(ಸದ್ಯ ಬೆಳ್ತಂಗಡಿ ಶಕ್ತಿನಗರ ಮೂಲತಃ) ಶಶಿಧರ ಶೆಟ್ಟಿ ತನ್ನ ಮಿತ್ರವೃಂದ, ಸಹದ್ಯೋಗಿ ಬಳಗವನ್ನೊಳಗೊಂಡ ಸೇವಾ ಸೈನಿಕರೊಂದಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ಸ್ಥಾನೀಯ ಅಗ್ನಿಶಾಮಕ ದಳ, ಪೋಲಿಸ್ ಮುಖ್ಯಸ್ಥರ ಸಹಯೋಗದೊಂದಿಗೆ ವಿದ್ಯುಚ್ಛಕ್ತಿ ಕಡಿತಗೊಂಡ ಸ್ಥಳಗಳಿಗೂ ವಿಶೇಷ ಬೆಳಕಿನ ಸಹಾಯ ಪಡೆದು ಬೋಟುಗಳಲ್ಲಿ ಹಗಲಿರುಳೆನ್ನದೆ ಕೋಸ್ಟ್ಗಾರ್ಡ್ ದೋಣಿಗಳಲ್ಲಿ ಸ್ವತಃ ಮನೆಮನೆಗಳಿಗೆ ಸಾಗಿ ಸಹಾಯಸ್ತ ಚಾಚಿದರು.
ಸಾವಿರಾರು ನೌಕರರ ಧನಿಯಾಗಿರುವ ಶಶಿಧರ್ ಶೆಟ್ಟಿ ಸ್ವತಃ ನೀರು ಬಾಟಲಿಗಳನ್ನು ಹೆಗಲಿಗೇರಿಸಿಕೊಂಡು, ತುಳು-ಕನ್ನಡಿಗರ ಒಗ್ಗೂಡಿಸಿ ನಿರಾಶ್ರಿರ ಶಿಬಿರಗಳಿಗೆ ಧಾವಿಸಿದರು. ಇವರೊಂದಿಗೆ ಬರೋಡ ಸಂಸದ ರಂಜನ್ಬೆನ್ ಧನಂಜಯ್ ಭಟ್, ಸ್ಥಳೀಯ ಶಾಸಕರು, ರಿಫೈನರಿ, ಕೈಗಾರಿಕೋದ್ಯಮ, ಕಂಪೆನಿಗಳ ಸಹಕಾರ, ಆದೇಶಾನುಸಾರ ನೀರು, ಚಹಾ, ತಿಂಡಿತಿನಿಸು, ಉಪಹಾರಗಳ ಸಾವಿರಾರು ಆಹಾರ ಪೋಟ್ಟಣ ಸಿದ್ಧಪಡಿಸಿ ಸರಕು ವಾಹನಗಳಲ್ಲಿ ತುಂಬಿಸಿ ಮನೆಮನೆಗೆ ತಲುಪಿಸುವಲ್ಲಿ ಕಾರ್ಯನಿರತರಾದರು. ಸೇವೆಯೊಂದಿಗೆ ಮಾನವೀಯತೆ ಮೆರೆದರು. ಮಧನ್ ಕುಮಾರ್ ಸೇರಿದಂತೆ ಅನೇಕರು ಸಹಕರಿಸಿದರು.


