ಪೊಳಲಿ :ಧರ್ಮದ ನಿಜವಾದ ಅರ್ಥ ಗೊತ್ತಿಲದ್ಲದೆ ಮಾತನಾಡುವುದು ಸಮಂಜಸವಲ್ಲ. ವಿವೇಕ ಮತ್ತು ಚಿಂತನಶೀಲರಾಗಿ ಧರ್ಮ ಅನುಸರಿಸಬೇಕು. ಹುಟ್ಟುವಾಗ ಯಾರೂ ಪಂಡಿತರಾಗಿರುವುದಿಲ್ಲ. ಅಭ್ಯಾಸ ಬಲದಿಂದ ಏನನ್ನೂ ಸಾಧಿಸಬಹುದು. ಧರ್ಮಾನುಸರಣೆಗೂ ಈ ಮಾತು ಅನ್ವಯಿಸುತ್ತದೆ. ಈ ದೃಷ್ಟಿಯಲ್ಲಿ ರಾಮಕೃಷ್ಣ ಆಶ್ರಮದಲ್ಲಿ ವ್ಯವಸ್ಥೆಗೊಳಿಸಲಾದ ಶ್ರೀ ದೇವಿ ಭಾಗವತ ಔಚಿತ್ಯಪೂರ್ಣವಾಗಿದೆ ಎಂದು ವೇದಮೂರ್ತಿ ಕೋಡಿಮಜಲು ಅನಂತಪದ್ಮನಾಭ ಉಪಾಧ್ಯಾಯ ಉದ್ಘಾಟನಾ ಸಮಾರಂಭದಲ್ಲಿ ಹೇಳಿದರು.

ಅವರು ಬುಧವಾರ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಹತ್ತಿರದಲ್ಲಿರುವ ರಾಮಕೃಷ್ಣ ತಪೋವನದಲ್ಲಿ ಜು. 31ರಿಂದ ಆಗಸ್ಟ್ 6ರವರೆಗೆ ನಡೆಯಲಿರುವ ಶ್ರೀದೇವಿ ಭಾಗವತ ಪ್ರವಚನದ ಕುರಿತು ಅವರು ನುಡಿದರು.
ಉದ್ಯಮಿ ಸೇಸಪ್ಪ ಕೋಟ್ಯಾನ್ ಪಚಿನಡ್ಕ ದೀಪ ಬೆಳಗಿಸಿ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಹಾಗೂ ವೆಂಕಟೇಶ್ ನಾವಡ , ಸುಬ್ರಾಯ ಕಾರಂತ ಮತ್ತಿತರರು ಉಪಸ್ಥಿತರಿದ್ದರು. ಆಗಸ್ಟ್ 6ರವರೆಗೆ ಪ್ರತಿದಿನ ಸಂಜೆ 6ರಿಂದ ರಾತ್ರಿ 8 ಗಂಟೆಯವರೆಗೆ ವೇದಮೂರ್ತಿ ಕೋಡಿಮಜಲು ಅನಂತಪದ್ಮನಾಭ ಉಪಾಧ್ಯಾಯರು ಶ್ರೀ ದೇವಿ ಪ್ರವಚನ ನಡೆಸಿಕೊಡಲಿದ್ದಾರೆ.


