ಕಟೀಲು: ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಗುರುವಾರ ರಾತ್ರ್ರಿ ನಡೆದ `ಕೃಷ್ಣ ಕೃಷ್ಣ ಶ್ರೀಕೃಷ್ಣ’ ಯಕ್ಷಗಾನ ಪ್ರಸಂಗ ನಡೆಯುತ್ತಿದ್ದು, ಸಭೆಯ ನಡುವೆಯಿಂದ ಬಂದ ಕೃಷ್ಣಸರ್ಪ (ಮರಿನಾಗ) ಸಂಚಾರ ಕುತೂಹಲಕ್ಕೆ ಕಾರಣವಾಯಿತು.

ಗುರುವಾರ ಯಕ್ಷಗಾನ ನಡೆಯುವ ಸಂದರ್ಭ ರಾತ್ರಿ 10.30ರವೇಳೆಗೆ ಸಭೆಯ ಮಧ್ಯೆಯಿಂದ ಬಂದ ಕೃಷ್ಣಸರ್ಪ ರಂಗಸ್ಥಳದಡಿಗೆ ಸೇರಿದ್ದು, ಕೆಲ ನಿಮಿಷಗಳು ಕಲಾವಿದರು, ಪ್ರೇಕ್ಷಕರು ಗಾಬರಿಗೊಳ್ಳುವಂತಾಯಿತು. 11.30ರವೇಳಗೆ ರಂಗಸ್ಥಳದ ಅಡಿಯಿಂದ ಬಂದ ಕೃಷ್ಣಸರ್ಪ ಬಳಿಕ ರಸ್ತೆಯಲ್ಲಿ ನಿಂತಿದ್ದ ಕಾರಿನ ಚಕ್ರದಡಿ ಅವಿತು ಕುಳಿತಿತ್ತು. ಬಳಿಕ ನಿಧಾನವಾಗಿ ಕೃಷ್ಣಸರ್ಪವನ್ನು ಕಾರಿನ ಅಡಿಯಿಂದ ತೆಗೆದಿದ್ದು, ಕಟೀಲು ಕ್ಷೇತ್ರದ ವೇದಮೂರ್ತಿ ಲಕ್ಷ್ಮೀ ನಾರಾಯಣ ಆಸ್ರಣ್ಣ ಅವರು ಗಂಧ ಹಾಕಿ, ಅವರ ಸಲಹೆಯಂತೆ ಕುದ್ರು ನಾಗಬನಕ್ಕೆ ಸುರಕ್ಷಿತವಾಗಿ ಬಿಡಲಾಯಿತು. ಕೃಷ್ಣ ಪ್ರಸಂಗವನ್ನು ನೋಡಲು ಅದೇ ಹೆಸರಿನ ನಾಗ ಬಂದಿದ್ದು ಕಾಕತಾಳೀಯ.
ಮರಿನಾಗನ ನಡೆಯನ್ನು ಮೂಡುಬಿದಿರೆ ಯಕ್ಷಮೇನಕಾದ ಸದಾಶಿವ ರಾವ್ ನೆಲ್ಲಿಮಾರ್ ತಮ್ಮ ಮೊಬೈಲ್ನಲ್ಲಿ ಚಿತ್ರೀಕರಿಸಿದ್ದಾರೆ.
