ಪೊಳಲಿ: ಮನಸ್ಸಿನ ಅಭಿಲಾಷೆ ಪೂರೈಸಿದ ಪೊಳಲಿ ದೇವಿಗೆ ರಾಯಚೂರು ಸ್ಟೇಷನ್ ರೋಡ್ ನಿವಾಸಿ ಎಸ್.ಡಿ. ಸತೀಶ್ ಕುಮಾರ್ ಅವರು ದೇವಿಗೆ 300 ಗ್ರಾಂ ತೂಕದ ಚಿನ್ನದ ಆಭರಣವನ್ನೇ ದೇವಿಗೆ ಸಮರ್ಪಿಸಿದ್ದಾರೆ. `24 ವರ್ಷಗಳ ಮುಂಚೆ ರಾಯಚೂರಲ್ಲಿ ಅಪ್ಪನಿಗೆ ಕಿರಾಣಿ ಅಂಗಡಿ ಇತ್ತು. ನಮ್ಮ ತಂದೆ ದಿ| ಎಸ್.ಡಿ. ಈಶ್ವರಯ್ಯ ಅವರಿಗೆ ಐದು ಗಂಡು, ಒಬ್ಬರು ಹೆಣ್ಣು ಮಗಳಿದ್ದಾರೆ. ಜೀವನ ನಡೆಸುವುದೇ ಒಂದು ಕಷ್ಟ. 30 ವರ್ಷಗಳ ಮುಂಚೆ ನನ್ನ ಗೆಳೆಯನಾಗಿರುವ ಪೊಳಲಿ ರಾಧಾಕೃಷ್ಣ ರೈ ಅವರು ನನ್ನ ಬಾಲ್ಯದ ಗೆಳೆಯರಾಗಿದ್ದು, ಒಮ್ಮೆ ನಾನು ಅವರ ಮನೆಗೆ ಹೋಗಿದ್ದೆ. ಆಗ ಅವರು ಪೊಳಲಿ ದೇವಸ್ಥಾನದ ಕಾರಣಿಕದ ಬಗ್ಗೆ ತಿಳಿಸಿದರು.
ಪೊಳಲಿಗೆ ಆಗಮಿಸಿ ಶ್ರೀ ರಾಜರಾಜೇಶ್ವರಿ ದೇವಿಗೆ ಪ್ರಾರ್ಥನೆ ಸಲ್ಲಿಸಿ ಊರಿನಲ್ಲಿ ದೇವರ ಹೆಸರಲ್ಲೇ ಬ್ಯಾಂಕ್ ಸಾಲ ಮಾಡಿ ಒಂದು ಮೆಡಿಕಲ್ ಶಾಪ್ ತೆರೆದೆವು. ಪ್ರತಿದಿನ ದೇವರಲ್ಲಿ ಪ್ರಾರ್ಥಿಸಿ ಆದಾಯದಲ್ಲಿ ಶೇ.10 ಅನ್ನು ದೇವರ ಹೆಸರಲ್ಲಿ ತೆಗೆದಿರುಸುತ್ತಿದ್ದೆವು. ವ್ಯಾಪಾರ ವೃದ್ಧಿಯಾದ ಮೇಲೆ ದೇವರ ಹೆಸರಲ್ಲಿ ದಿನಕ್ಕೆ 200ರಂತೆ ತೆಗೆದಿಟ್ಟು ಆ ಹಣದಿಂದ ಸುಮಾರು 300 ಗ್ರಾಂ.ನ ಚಿನ್ನದ ಪವನ ಸರವನ್ನು ಶ್ರೀದೇವಿಗೆ ಒಪ್ಪಿಸಿದ್ದೇನೆ. ಪೊಳಲಿ ದೇವರ ಪ್ರಾರ್ಥನೆ ಮಾಡಿದ ಬಳಿಕ ನಮ್ಮ ಕುಟುಂಬಕ್ಕೆ ಒಳಿತಾಗಿದೆ. ನನ್ನ ಮಕ್ಕಳ ಓದು ಹಾಗೂ ಉದ್ಯೋಗದಲ್ಲಿ ಒಳಿತಾಗಿದ್ದು, ಇದೆಲ್ಲಾಶ್ರೀದೇವರ ಕೃಪೆಯಿಂದಷ್ಟೇ ಸಾಧ್ಯವಾಗಿದೆ ಎಂದು ನನ್ನ ಭಾವನೆ.
ಆವತ್ತಿನಿಂದ ಈವತ್ತಿನವರೆಗೆ ಪ್ರತೀ ಮೂರು ತಿಂಗಳಿಗೊಮ್ಮೆ ಕುಟುಂಬ ಸಮೇತರಾಗಿ ದೇವರ ದರ್ಶನ ಮಾಡಿ ತೆರಳುತ್ತಿದ್ದೇವೆ. ನಮ್ಮ ಇಡೀ ಕುಟುಂಬಕ್ಕೆ ಪೊಳಲಿ ದೇವರಿಂದ ಒಳಿತಾಗಿದೆ. ನಂಬಿದವರನ್ನು ಎಂದಿಗೂ ಕೈ ಬಿಡುವುದಿಲ್ಲ ಎನ್ನುವುದಕ್ಕೆ ನಾನೇ ಪ್ರತ್ಯಕ್ಷ ಉದಾಹರಣೆ. ಪೊಳಲಿ ಇದೀಗ ನವೀಕರಣಗೊಂಡು ಬ್ರಹ್ಮಕಲಶೋತ್ಸವ ನಡೆದಿದೆ. ಈ ಬ್ರಹ್ಮಕಲಶೋತ್ಸವಕ್ಕೆ ನಾವೂ ಭಾಗಿಯಾಗಿರುವುದು ನಮ್ಮ ಭಾಗ್ಯವೆಂದೇ ನನ್ನ ಭಾವನೆ. ಇಲ್ಲಿನ ಅಲಂಕಾರ, ಗುಡಿಯ ಸೌಂದರ್ಯ, ವಾಸ್ತುಶಿಲ್ಪ, ದೇವರ ಮೃಣ್ಮಯ ಮೂರ್ತಿಯನ್ನು ಕಣ್ತುಂಬಿಕೊಂಡರೆ ನಮ್ಮೆಲ್ಲ ಪಾಪ ನಾಶವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
