ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪ್ರಕರಣ: ಧೋನಿ, ರೈನಾ ಮೇಲೆ ಸಂಶಯದ ತೂಗುಗತ್ತಿ
ಸುದ್ದಿ9ಮುಂಬೈ: ಜಸ್ಟಿಸ್ ಮುಕುಲ್ ಮುದ್ಗಲ್ ನೇತೃತ್ವದ ವಿಚಾರಣಾ ಸಮಿತಿಯ ವರದಿಯು ಹೊರಬೀಳುತ್ತಿದ್ದಂತೆ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಜಾಲದಲ್ಲಿ ಭಾರತದ ಮತ್ತಷ್ಟು ಆಟಗಾರರು ಶಾಮೀಲಾಗಿರುವ ಬಗ್ಗೆ ಗುಮಾನಿಗಳು ಎದ್ದಿವೆ. ಮುಖ್ಯವಾಗಿ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯವನ್ನು ಫಿಕ್ಸ್ ಮಾಡುವಲ್ಲಿ ಸಹಕರಿಸಿದ್ದರು ಎಂಬ ಆಘಾತಕಾರಿ ಅಂಶವನ್ನು ವರದಿಯು ಬಯಲು ಮಾಡಿದೆ.
ಕ್ರೈಂ ಬ್ರಾಂಚ್ ಅಧಿಕಾರಿಯು ಮುದ್ಗಲ್ ಸಮಿತಿಗೆ ನೀಡಿದ ವರದಿಯಲ್ಲಿ ಬಂಧಿತ ಬುಕ್ಕಿ ಕಿಟ್ಟಿ ಅಲಿಯಾಸ್ ಉತ್ತಮ್ ಜೈನ್ ಫಿಕ್ಸಿಂಗ್ನಲ್ಲಿ ಧೋನಿ ಕೂಡಾ ಭಾಗಿಯಾಗಿರುವ ಬಗ್ಗೆ ತಿಳಿಸಿದ್ದ ಬಗ್ಗೆ ಉಲ್ಲೇಖಿಸಲಾಗಿತ್ತು. ಚೆನ್ನೈ ಸೂಪರ್ ಕಿಂಗ್ಸ್ ನಾಯಕನಾಗಿರುವ ಧೋನಿ 2013ರ ಮೇ 12ರಂದು ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯವನ್ನು ಫಿಕ್ಸ್ ಮಾಡಿದ್ದರು ಎಂದು ಉತ್ತಮ್ ಜೈನ್ ಆರೋಪಿಸಿದ್ದ. ಇದೇ ವೇಳೆ ಮತ್ತೊರ್ವ ಆಟಗಾರ ಸುರೇಶ್ ರೈನಾ ಕೂಡಾ ಫಿಕ್ಸಿಂಗ್ ಜಾಲದಲ್ಲಿ ಸಕ್ರಿಯನಾಗಿದ್ದಾನೆ ಎಂದು ಉತ್ತಮ್ ಬಹಿರಂಗಪಡಿಸಿದ್ದ. ಈ ಬಗ್ಗೆ ಸಮಗ್ರ ತನಿಖೆಯ ಅವಶ್ಯಕತೆಯಿದೆ ಎಂದು ಮುದ್ಗಲ್ ವರದಿಯಲ್ಲಿ ತಿಳಿಸಲಾಗಿದೆ.

