ಕ್ರಿಕೆಟ್ ಆಟಗಾರರಿಗೆ ಭೂಗತ ನಂಟು: ತರಾಟೆಗೆ ತೆಗೆದುಕೊಂಡ ಸಮಿತಿ
ಸುದ್ದಿ9ಮುಂಬೈ: ಕ್ರಿಕೆಟ್ ಆಟಗಾರರು, ಆಡಳಿತಗಾರರು, ರಾಜಕಾರಣಿಗಳಿಗೆ ಭೂಗತ ಜಗತ್ತು ಮತ್ತು ಭಯೋತ್ಪಾದಕದ ಜೊತೆ ನಿಕಟ ಸಂಬಂಧವಿದೆ ಎಂಬುದು ಸ್ಪಷ್ಟವಾಗಿದೆ ಈ ರೀತಿಯ ಅನೈತಿಕ ಕಾರ್ಯಗಳಲ್ಲಿ ತೊಡಗಿರುವವರನ್ನು ಕೂಡಲೇ ಶಿಕ್ಷೆಗೆ ಒಳಪಡಿಸಬೇಕೆಂದು ಸವರ್ೋಚ್ಛ ನ್ಯಾಯಾಲಯ ನೇಮಿಸಿದ್ದ ತ್ರಿಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.
ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಜಾಲದಲ್ಲಿ ಶಾಮೀಲಾಗಿರುವ ಹಲವರನ್ನು ಬಂಧಿಸಲಾಗಿದೆ. ಆದರೆ ಇದರ ಮುಖ್ಯ ಸೂತ್ರದಾರರು ಭೂಗತ ಪಾತಕಿಗಳಾದ ದಾವೂದ್ ಇಬ್ರಾಹಿಂ ಮತ್ತು ಚೋಟಾ ಶಕೀಲ್ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ಈ ಇಬ್ಬರು ಪಾತಕಿಗಳ ಆದೇಶದಂತೆ ಐಪಿಎಲ್ನಲ್ಲಿ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ನಡೆಯುತ್ತದೆ ಎಂದು ಸಮಿತಿ ಹೇಳಿದೆ. ಇದೇ ವೇಳೆ ಪ್ರಕರಣದ ತನಿಖೆ ನಡೆಸಿದ ಪೊಲೀಸರನ್ನು ಕೂಡಾ ತರಾಟೆಗೆ ತೆಗೆದುಕೊಂಡ ಸಮಿತಿ ಪಾಕಿಸ್ತಾನದ ಅಂಪೈರ್ ಅಸದ್ ರವೂಫ್ ಸ್ಪಾಟ್ ಫಿಕ್ಸಿಂಗ್ನಲ್ಲಿ ಶಾಮೀಲಾಗಿದ್ದಾರೆ ಎಂದು ಸ್ಪಷ್ಟವಾಗಿ ಮಾಹಿತಿಯಿದ್ದರೂ ಆತನನ್ನು ಸ್ವದೇಶಕ್ಕೆ ತೆರಳಲು ಬಿಟ್ಟಿದ್ದಾದರೂ ಯಾಕೆ ಎಂದು ಪ್ರಶ್ನಿಸಿದೆ. ಪೊಲೀಸರ ಈ ರೀತಿಯ ಉದಾಸೀನ ಪ್ರವೃತ್ತಿಯೇ ಫಿಕ್ಸಿಂಗ್ ಇಷ್ಟೊಂದು ವಿರಾಟ ರೂಪ ಪಡೆಯಲು ಕಾರಣ ಎಂದು ಮುದ್ಗಲ್ ಸಮಿತಿ ಖಾರವಾಗಿ ನುಡಿದಿದೆ. ಫಿಕ್ಸಿಂಗ್ ಎಂಬುದು ಒಂದು ಬೃಹತ್ ಜಾಲವಾಗಿದ್ದು ಇದರಲ್ಲಿ ಸಾವಿರಾರು ಕೋಟಿ ಮೊತ್ತದ ಹಣ ಚಲಾವಣೆಯಾಗುತ್ತದೆ. ಇದರಲ್ಲಿ ಸ್ವಲ್ಪ ಮೊತ್ತ ಭಯೋತ್ಪಾದಕರಿಗೆ ಹೋಗುತ್ತದೆ. ಈ ಹಣದಿಂದ ಭಯೋತ್ಪಾದಕರು ದೇಶದೆಲ್ಲೆಡೆ ಬಾಂಬ್ ಸ್ಫೋಟದಂತ ವಿನಾಶಕಾರಿ ಕಾರ್ಯಗಳನ್ನು ನಡೆಸುತ್ತಾರೆ ಎಂದು ಪೀಠ ತಿಳಿಸಿದೆ. ಕಳೆದ ವರ್ಷ ಮೇ 15ರಂದು ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯ ಫಿಕ್ಸ್ ಆಗಿದೆ ಎಂಬುದು ಪೊಲೀಸರಿಗೆ ಮೂರುದಿನದ ಮೊದಲೇ ತಿಳಿದಿತ್ತು. ಅಂಪೈರ್ ಅಸಾದ್ ರವೂಫ್ ದೂರವಾಣಿಯ ಕದ್ದಾಲಿಕೆಯಿಂದ ಈ ಸತ್ಯ ಬೆಳಕಿಗೆ ಬಂದಿತ್ತು ಆದರೂ ಪೊಲೀಸರು ಅದನ್ನು ತಡೆಯುವ ನಿಟ್ಟಿನಲ್ಲಿ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ ಎಂದು ನ್ಯಾಯವಾದಿ ಮುಕುಲ್ ಮುದ್ಗಲ್ ನೇತೃತ್ವದ ಸಮಿತಿ ಆರೋಪಿಸಿದೆ.

