ಬಜ್ಪೆ: ಹೋಬಳಿ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯು ಇಲ್ಲಿನ ಜೋಕಟ್ಟೆ ಸರಕಾರಿ ಶಾಲೆಯಲ್ಲಿ ಗುರುವಾರ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಮಂಗಳೂರು ಉತ್ತರ ವಲಯ, ಸರಕಾರಿ ಪ್ರೌಢಶಾಲೆ ಜೋಕಟ್ಟೆ ಇದರ ಸಹಯೋಗದಲ್ಲಿ ನಡೆದ ಕಾರ್ಯಕ್ರಮವನ್ನು ಜೋಕಟ್ಟೆ ಗ್ರಾ.ಪಂ. ಅಧ್ಯಕ್ಷ ಶೇಕುಂಞ ಅವರು ಉದ್ಘಾಟಿಸಿದರು.
ಬಳಿಕ ಮಾತಾಡಿದ ಶೇಕುಂಞ ಅವರು, `ಮಕ್ಕಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಕೊಳ್ಳಬೇಕು. ಇದರಿಂದ ಮಕ್ಕಳ ಸರ್ವಾಂಗೀಣ ಬೆಳವಣಿಗೆ ಸಾಧ್ಯವಾಗುತ್ತದೆ. ಮಕ್ಕಳನ್ನು ಹೆತ್ತವರು ಬೆಳೆಸುವಾಗಲೇ ಅವರಿಗೆ ಸನ್ನಡತೆ ಬೋಧಿಸಿದರೆ ಅವರು ಬೆಳೆಯುತ್ತ ಹಾದಿ ತಪ್ಪುವುದನ್ನು ತಡೆಯಬಹುದು’ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯ ರಿತೇಶ್ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯ ಮರಿಯಾ ಲವೀನಾ ವೇಗಸ್, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ಉದ್ಯಮಿ ಅಬ್ದುಲ್ ರಶೀದ್ ಜೋಕಟ್ಟೆ, ಹಾಜಿ ಜೆ.ಮುಹಮ್ಮದ್, ಟಿ.ಎ.ಖಾದರ್, ಉದ್ಯಮಿ ಅಬ್ದುಲ್ ರಶೀದ್, ಹಾಜಿ ಟಿ.ಅಲಿಯಬ್ಬ, ಬಿ.ಎಸ್.ಹುಸೇನ್ ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಮಕ್ಕಳಿಂದ ನಾನಾ ಪ್ರತಿಭಾ ಪ್ರದರ್ಶನ ನಡೆಯಿತು. ಶಾಲಾ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.







