ಮುಂಬಯಿ: ನಾಟಕಗಳು ಸಂಸ್ಕೃತಿಯ ಭವಿಷ್ಯ ಉಜ್ವಲಗೊಳಿಸುವುದರ ಜೊತೆಗೆ ಸಂಸ್ಕಾರಯುತ ಬದುಕು ರೂಪಿಸುತ್ತದೆ. ಕಲಾಮಾತೆಯ ಪರಿಪೂರ್ಣವಾದ ಅನುಗ್ರಹದೊಂದಿಗೆ ಇಂತಹ ಸಾಧನೆ ಸಿದ್ಧಿಯಾಗಿದ್ದು ಅಭಿನಂದನೀಯ. ನಾಟಕ ಸ್ಪರ್ಧೆಯಂತಹ ಚಿಂತನೆ ಮಹಾರಾಷ್ಟ್ರದಲ್ಲಿ ತುಳು ಭಾಷೆಯನ್ನು ಉಳಿಸಿ ಬೆಳೆಸಲು ಪ್ರೋತ್ಸಾಹದಾಯಕವಾಗಿದೆ. ಇದಕ್ಕೆ ತ್ರಿಮೂರ್ತಿ ಕಲಾವಿದರ ರಂಗ ಗೌರವವೇ ಸಾಕ್ಷಿಯಾಗಿದೆ ಎಂದು ನಾಡಿನ ಹೆಸರಾಂತ ಪುರೋಹಿತ ಡಾ| ಎಂ.ಜೆ ಪ್ರವೀಣ್ ಭಟ್ ಹೇಳಿದರು.

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಸಾಂಸ್ಕøತಿಕ ಉಪಸಮಿತಿ ಅಸೋಸಿಯೇಶನ್ನ ಸ್ಥಳೀಯ ಸಮಿತಿಗಳಿಗೆ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದ ಗುರು ನಾರಾಯಣ ಸಭಾಗೃಹದಲ್ಲಿ ಶುಕ್ರವಾರ ಆಯೋಜಿಸಿರುವ ಶ್ರೀ ಗುರು ನಾರಾಯಣ ತುಳು ನಾಟಕ ಸ್ಪರ್ಧೆ-2018ನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಉಪಾಧ್ಯಕ್ಷ ಶಂಕರ ಡಿ.ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಬಿಲ್ಲವ ಸಮಾಜವು ಎಂದಿಗೂ ಜಾತಿಭೇದವಿಲ್ಲದೆ ಪ್ರತಿಭಾನ್ವೇಷಣೆ ಮಾಡಿದೆ. ಎಲ್ಲಾ ವರ್ಗದ ಪ್ರತಿಭೆಗಳಿಗೆ ಅವಕಾಶ ಒದಗಿಸಿ ಪ್ರಕಾಶಿಸುವಂತಿದೆ. ಇದರ ಶ್ರೇಯಸ್ಸು ಕಲಾಭಿಮಾನಿಗಳಿಗೆ ಸಲ್ಲುತ್ತದೆ. ಜಾತಿಭೇದ ಸಲ್ಲದು ಎನ್ನುವ ಗುರುನಾರಾಯಣರ ಸಂದೇಶಕ್ಕೆ ಈ ಸಂಸ್ಥೆ ಬದ್ಧವಾಗಿ ಮುನ್ನಡೆಯುತ್ತಿದೆ. ಆದ್ದರಿಂದ ಮಾತೃಭೂಮಿಯ ಸಂಸ್ಕೃತಿ, ಭಾಷಾಭಿಮಾನ ಕರ್ಮಭೂಮಿಯಲ್ಲಿ ಉಳಿದು ಬೆಳೆಯುತ್ತಿದೆ ಎಂದು ಎಲ್.ವಿ ಅವಿೂನ್ ಅಭಿಪ್ರಾಯಪಟ್ಟರು.
ಸುರೇಶ್ ಕಾಂಚನ್ ಮಾತನಾಡಿ, ಬಿಲ್ಲವರ ಈ ಸಂಸ್ಥೆ ಎಲ್ಲಾ ಸಮುದಾಯ, ಸಮಾಜಕ್ಕೂ ಮಾದರಿಯಾಗಿ ನಿಂತಿದೆ. ಎಲ್ಲಾ ಸಮಾಜದವರನ್ನೂ ಪ್ರೇರೆಪಿಸುತ್ತಾ ಬಂಧುಗಳನ್ನಾಗಿ ಬೆಸೆಯುತ್ತಿದ್ದಾರೆ. ನಾಟಕೋತ್ಸವ ಮೂಲಕ ಸಮಾಜ, ಕಲಾವಿದರು, ಕಲಾಭಿಮಾನಿಗಳಿಗೆ ಪ್ರೋತ್ಸಾಹ ನೀಡಿ ಸರ್ವರನ್ನೂ ಒಗ್ಗೂಡಿಸುತ್ತಿರುವುದು ಸ್ತುತ್ಯರ್ಹ ಎಂದರು.
ಮಹಾನಗರದಲ್ಲಿನ ಸಂಘಸಂಸ್ಥೆಗಳಲ್ಲಿ ನಾಯಕತ್ವ, ಸಾಂಘಿಕ ಶಕ್ತಿ ಮತ್ತು ಒಳ್ಳೆ ಜನರ ಒಗ್ಗೂಡುವಿಕೆಯೇ ಬಿಲ್ಲವರ ಅಸೋಸಿಯೇಶನ್ನ ಆಸ್ತಿಯಾಗಿದೆ. ಕಲೆ-ಸಂಸ್ಕೃತಿಯನ್ನು ಸದಾ ಎತ್ತಿಹಿಡಿದ ಸಂಸ್ಥೆ. ಕಳೆದ ಎರಡು ವರ್ಷಗಳಿಂದ ತುಳು ನಾಟಕ ಸ್ಪರ್ಧೆನಡೆಸಿ ತುಂಬಾ ಅನುಭವಸ್ಥಗೊಂಡಿದ್ದು 3ನೇ ವರ್ಷದಲ್ಲಿ ನಾಟಕದೊಂದಿಗೆ ಭಾಷೆ ಬೆಳೆಸುತ್ತಾ ಸಂಸ್ಕೃತಿಯನ್ನು ಉಳಿಸುವ ಶಕ್ತಿ ವೃದ್ಧಿಸಿದೆ. ಇದು ಚರಿತ್ರೆಯಾಗುತ್ತಿದೆ. ನಾಟಕದಿಂದ ಸಂಸ್ಕೃತಿಯ ಮೂಲ ತಿಳಿಯುವುದು. ಆದ್ದರಿಂದ ಬಿಲ್ಲವರು ಭವಿಷ್ಯತ್ತಿನಲಿ ವ್ಯಾಪ್ತಿಮೀರಿ ಎಲ್ಲಾ ಕಲಾವಿದರಿಗೆ ಸ್ಪರ್ಧೆ ನಡೆಸಿ, ಕಲಾವಿದರಿಗೂ ಒಂದೇ ಜಾತಿ ಎನ್ನುವುದನ್ನು ಸಿದ್ಧಿಸಲಿ ಎಂದು ಪಾಲೆತ್ತಾಡಿ ಆಶಯ ವ್ಯಕ್ತಪಡಿಸಿದರು.
ರಾಮಚಂದ್ರ ಗಾಣಿಗ ಮಾತನಾಡಿ ಬಿಲ್ಲವರದ್ದು ಮತ್ತು ನಮ್ಮ ದೋಸ್ತಿ ಬಹು ಹಳೆಯದ್ದು. ಆದುದರಿಂದ ನಮ್ಮಲ್ಲಿನ ಮಾನವೀಯತೆಯೇ ದೊಡ್ಡದು. ಅವರ ಪ್ರೋತ್ಸಾಹಕ್ಕೆ ನಾನು ಪ್ರಭಾವಿತನಾಗಿದ್ದೇನೆ. ನನ್ನ ಅಣ್ಣ ಸ್ವರ್ಗೀಯ ಆನಂದ ಗಾಣಗರೂ ರಾಜ್ಯೋತ್ಸವ ಪುರಸ್ಕೃತ ನಾಟಕ ಕಲಾವಿದ. ನನ್ನ ಪರಿವಾರವೇ ರಂಗಭೂಮಿಯಂತಿದೆ ಎಂದು ತಿಳಿಸಿದರು.
ಗೌ| ಪ್ರ| ಕಾರ್ಯದರ್ಶಿ ಧನಂಜಯ ಶಾಂತಿ ಪ್ರಸ್ತಾವಿಕ ನುಡಿಗಳನ್ನಾಡಿ ಜನಮಾನಸಕ್ಕೆ ಬಿಲ್ಲವ ಸಮಾಜದ ಮೇರು ಸಂಸ್ಥೆಯಾದ ಈ ಅಸೋಸಿಯೇಶನ್ ಒಂದು ಜಾತಿಗೆ ಸೇರಿದ್ದರೂ ಇಂದು ಜಾತಿ ಮೀರಿ ಸೇವೆಯಲ್ಲಿರುವ ಸಂಸ್ಥೆ. ಜಯ ಸಿ.ಸುವರ್ಣ ಅವರ ಪರಿಶ್ರಮದ ಫಲವಾಗಿದೆ ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಬೆಳೆದು ನಿಂತಿದ್ದು ಇಂತಹ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಅವರ ವಿಶೇಷ ಕೊಡುಗೆಯಿದೆ. ಆದುದರಿಂದಲೇ ಅಸೋಸಿಯೇಶನ್ ಬಂಗಾರದ ಸಸ್ಥೆಯಾಗಿಯೇ ಬೆಳೆದು ನಿಂತಿದೆ ಎಂದರು.
ಅಸೋಸಿಯೇಶನ್ನ ಉಪಾಧ್ಯಕ್ಷರೂ ಮತ್ತು ಸಾಂಸ್ಕøತಿಕ ಉಪಸಮಿತಿ ಕಾರ್ಯಾಧ್ಯಕ್ಷ ದಯಾನಂದ ಆರ್.ಪೂಜಾರಿ ಸ್ವಾಗತಿಸಿ ಬಿಲ್ಲವರ ಅಸೋಸಿಯೇಶನ್ 31,000 ಸದಸ್ಯತ್ವವನ್ನು ಹೊಂದಿದ್ದು, ಕೇಂದ್ರ ಕಛೇರಿ ಮತ್ತು 22 ಸ್ಥಳೀಯ ಸಮಿತಿಗಳನ್ನು ಹೊಂದಿದ್ದು ಆ ಪಯ್ಕಿ 18 ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಇಪ್ಛಿಸಿದ್ದರೂ 15ತಂಡಗಳ ಆಯ್ಕೆ ನಡೆಸಲಾಯಿತು ಎಂದರು.
ನಾಡಿನ ಪ್ರತಿಷ್ಠಿತ ಹಾಗೂ ಹೆಸರಾಂತ ರಂಗಕರ್ಮಿಗಳಾದ ಲಕ್ಷ್ಮಣ ಕಾಂಚನ್, ನಾರಾಯಣ ಶೆಟ್ಟಿ ನಂದಳಿಕೆ ಮತ್ತು ಅಶೋಕ್ಕುಮಾರ್ ಕೊಡ್ಯಡ್ಕ ಅವರಿಗೆ ವೀಳೆದೆಲೆ, ಅಡಿಕೆ, ಪಿಂಗಾರ, ಶ್ರೀಫಲ, ಸ್ಮರಣಿಕೆ, ಸನ್ಮಾನಪತ್ರ, ಫಲಪುಷ್ಪಗಳನ್ನಿತ್ತು ಶಾಲು ಹೊದಿಸಿ ಮೈಸೂರು ಪೇಟ ಧರಿಸಿ ಸಂಪ್ರದಾಯಿಕವಾಗಿ `ರಂಗ ಗೌರವ’ ಪ್ರದಾನಿಸಿ ಅಭಿನಂದಿಸಲಾಯಿತು.

ಅಸೋಸಿಯೇಶನ್ನ ಯುವಾಭ್ಯುದಯ ಸಮಿತಿ ಕಾರ್ಯಾಧ್ಯಕ್ಷ ನಾಗೇಶ್ ಎಂ. ಕೋಟ್ಯಾನ್, ಸೇವಾದಳದ ದಳಪತಿ ಗಣೇಶ್ ಜಿ.ಪೂಜಾರಿ, ಹೆಸರಾಂತ ರಂಗಕರ್ಮಿಗಳಾದ ಡಾ| ಭರತ್ಕುಮಾರ್ ಪೊಲಿಪು, ಮೋಹನ್ ಮಾರ್ನಾಡ್, ಓಂದಾಸ್ ಕಣ್ಣಾಂಗಾರ್ ಸೇರಿದಂತೆ ಅಸೋಸಿಯೇಶನ್ನ ಹಲವು ಸ್ಥಳೀಯ ಸಮಿತಿಗಳ ಮುಖ್ಯಸ್ಥರು ಹಾಗೂ ಪದಾಧಿಕಾರಿಗಳು ಹಾಜರಿದ್ದು ಸ್ಪರ್ಧಿಗಳನ್ನು ಪ್ರೋತ್ಸಾಹಿಸಿದರು. ಅಸೋಸಿಯೇಶನ್ನ ಪದಾಧಿಕಾರಿಗಳು ಮಧಾಂತರದಲ್ಲಿ ಉಪಸ್ಥಿತ ಪ್ರಾಯೋಜಕರರು, ನಾಟಕಕಾರರು, ನಿರ್ದೇಶಕರು, ಕಲಾವಿದರನ್ನು ಸ್ಮರಣಿಕೆ, ಪುಷ್ಪಗುಪ್ಛವನ್ನಿತ್ತು ಅಭಿವಂದಿಸಿದರು.
ಸಂಜೆ ನಾಟಕದ ಸ್ಪರ್ಧೆಯ ಪ್ರಥಮ ಪ್ರದರ್ಶನವಾಗಿ ಎನ್.ಎಂ ಸನಿಲ್, ಉಮೇಶ್ ಪೂಜಾರಿ ಕೊಪ್ಪ ಮತ್ತು ತೋನ್ಸೆ ಸಂಜೀವ ಪೂಜಾರಿ ಪ್ರಾಯೋಜಕತ್ವದಲ್ಲಿ ಚೆಂಬೂರು ಸ್ಥಳೀಯ ಸಮಿತಿ ತಂಡವು ರವಿಕುಮಾರ್ ಕಡೆಕಾರ್ ಕಥೆ ರಚಿಸಿ ಸಂಭಾಷಿಸಿದ ಸತೀಶ್ ಎರ್ಮಾಳ್ ನಿರ್ದೇಶಿಸಿದ `ಕನಕನ ಕನ’ ನಾಟಕ ಪ್ರದರ್ಶಿಸಿತು. ದ್ವಿತೀಯ ಪ್ರದರ್ಶನ ವಾಗಿ ಸ್ವರ್ಗೀಯ ಎಂ.ಅಪ್ಪಣ್ಣ ಪರಿವಾರ, ಕೃಷ್ಣ ಎಂ.ಪೂಜಾರಿ ನೆರೂಲ್ ಮತ್ತು ಜಗದೀಶ್ ಸಿ.ಕೌಡೂರು ಪ್ರಾಯೋಜಕತ್ವದಲ್ಲಿ ನವಿಮುಂಬಯಿ ಸ್ಥಳೀಯ ಸಮಿತಿ ತಂಡವು ಪ್ರಕಾಶ್ ಧರ್ಮನಗರ ಕಥೆ ರಚಿತ ಸತೀಶ್ ಎರ್ಮಾಳ್ ಸಂಭಾಷಣೆಗೈದು ಅನಿಲ್ಕುಮಾರ್ ಹೆಗ್ಡೆ ನಿರ್ದೇಶಿಸಿದ `ಏರೆಗ್ಲಾ ಪನೊಡ್ಚಿ’ ನಾಟಕ ಹಾಗೂ ತೃತೀಯ ಪ್ರದರ್ಶನವಾಗಿ ಜಗನ್ನಾಥ್ ವಿ.ಕೋಟ್ಯಾನ್, ರಾಮ ಜಿ.ಸುವರ್ಣ ಮತ್ತು ಗಂಗಾಧರ್ ಕೋಟ್ಯಾನ್ ಪ್ರಾಯೋಜಕತ್ವ ದಲ್ಲಿ ಗೋರೆಗಾಂವ್ ಸ್ಥಳೀಯ ಸಮಿತಿ ತಂಡವು ಸಮೀರ್ ಪೆಣ್ಕರ್ ಕಥೆ ರಚನೆಯ ಲತೇಶ್ ಪೂಜಾರಿ ಸಂಭಾಷಣೆ ಹಾಗೂ ಲತೇಶ್ ಕುಮಾರ್ ನಿರ್ದೇಶಿಸಿದ `ಈದಿ’ ನಾಟಕ ಪ್ರದರ್ಶಿಸಿದರು.

ಏಕತಾಸು ಕಾಲಾವಧಿ ನಾಟಕ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ, ಭಾರತ್ ಬ್ಯಾಂಕ್ನ ನಿರ್ದೇಶಕರುಗಳಾದ ಎಲ್.ವಿ ಅವಿೂನ್ ಮತ್ತು ಗಂಗಾಧರ್ ಜೆ.ಪೂಜಾರಿ, ಸಮಾಜ ಸೇವಕರೂ ಮತ್ತು ಉದ್ಯಮಿಗಳಾದ ರಾಮಚಂದ್ರ ಎಂ. ಗಾಣಿಗ, ಸುರೇಶ್ ಆರ್.ಕಾಂಚನ್ ಉಪಸ್ಥಿತರಿದ್ದರು.
ಅಕ್ಷಯ ಮಾಸಿಕದ ಸಂಪಾದಕ ಹರೀಶ್ ಹೆಜ್ಮಾಡಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆಗೈದರು.





