ಪ್ರಸಾದ ಕೊಂಡು ಹೋದ ನಂತರ ಮನೆಮನೆಯಲ್ಲಿ ಪುದ್ದರ್! ಸುದ್ದಿ9ಪೊಳಲಿ: ಪೊಳಲಿ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಗುರುವಾರ ತೆನೆಹಬ್ಬ ಆಚರಿಸಲಾಯ್ತು. ಈ ಆಚರಣೆ ದೇವಸ್ಥಾನದ ಸಂಪ್ರದಾಯದಲ್ಲಿ ವಿಶಿಷ್ಠವಾಗಿದ್ದು, ಹಲವಾರು ಸಂಪ್ರದಾಯ, ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವಂತಿತ್ತು. ವೈದಿಕ ಆಚರಣೆ ಹಾಗೂ ತುಳುನಾಡು ಸಂಪ್ರದಾಯಕ್ಕೆ ಒಂದಕ್ಕೊಂದು ಕೊಂಡಿಯಾಗಿ ಆಚರಿಸಲ್ಪಟ್ಟ ಈ ಆಚರಣೆಯನ್ನು ಪೊಳಲಿಯಲ್ಲಿ ಶತಶತಮಾನಗಳ ಕಾಲ ಆಚರಿಸಲ್ಪಡುತ್ತಾ ಬರಲಾಗುತ್ತಿದೆ. ಪೊಳಲಿಯಲ್ಲಿ ದೇವಸ್ಥಾನದಲ್ಲಿ ತೆನೆಹಬ್ಬ ಆಚರಿಸುವುದೆಂದು ತಿಳಿದಾಗ ಊರವರೆಲ್ಲಾ ಖುಷಿಪಡುತ್ತಾರೆ. ಯಾಕೆಂದರೆ ಆದಿನ ಊರವರೇ ಸೇರಿ ಬೆಳೆಸಿದ ತರಕಾರಿ, ಬಾರಿ ಬೆಳೆದ ಹೊಸಕ್ಕಿಯ ಊಟ ಹಾಗೂ ಹೊಸ ಬೆಳ್ತಕ್ಕಿಯಿಂದ ಮಾಡಿದ ಪಾಯಸ ಸವಿಯುವ ಕಾರ್ಯಕ್ರಮವಿರುತ್ತದೆ. ಮುಖ್ಯವಾಗಿ ಪೊಳಲಿ ದೇವಸ್ಥಾನದ ಚೆಂಡಿನ ಗದ್ದೆಯಲ್ಲಿ ಭತ್ತ ಬೆಳೆಯಲಾಗುತ್ತದೆ. ಆದರೆ ಈ ಬಾರಿ ಭತ್ತದ ಸಸಿ ಬಲಿಯದ ಕಾರಣ ಬೇರೆ ಗದ್ದೆಯಿಂದ ತೆನೆಗಳನ್ನು ತರಲಾಯ್ತು. ಇದರ ಜೊತೆಗೆ ದಡ್ಡಲ್ ಮರದ ನಾರಿನಂತಹಾ ಸಿಪ್ಪೆ, ಮಾವಿನ ಎಲೆ ಹಾಗೂ ಹಲಸಿನ ಮರದ ಎಲೆಯನ್ನು ಕೂಡಾ ತರಲಾಗುತ್ತದೆ. ಇವುಗಳನ್ನು ತಂದು ದೇವಸ್ಥಾನದ ಪ್ರಾಂಗಣದ ಮುಂದೆ ಇಡಲಾಗುತ್ತದೆ. ನಂತರ ಇದನ್ನು ದೇವಸ್ಥಾನದಲ್ಲಿ ಚೆಂಡೆ ಬಡಿಯುವ ವ್ಯಕ್ತಿ ಅದನ್ನು ತಲೆಯ ಮೇಲೆ ಇಟ್ಟು ದೇವಸ್ಥಾನದ ಕೊಡಿಮರದ ಹತ್ತಿರ ತಂದು ಇಡುತ್ತಾರೆ.
ಆ ಬಳಿಕ ಪೊಳಲಿ ದೇವಸ್ಥಾನದ ಅರ್ಚಕರೊಬ್ಬರು ಬಂದು ಅದಕ್ಕೆ ವೈದಿಕ ರೀತಿಯಲ್ಲಿ ಪೂಜೆ ಸಲ್ಲಿಸುತ್ತಾರೆ. ನಂತರ ದೇವಸ್ಥಾನಕ್ಕೆ ಬಲಿ ಸೇವೆ ಮಾಡುವ ವಟು ಬಂದು ಅದನ್ನು ತಲೆಯ ಮೇಲೆ ಹೊರುತ್ತಾರೆ. ಈ ವೇಳೆ ಜಾತ್ರೆಯ ವೇಳೆ ನಡಯುವಂತೆಯೇ ಒಂದು ಸುತ್ತು ಬಲಿಸೇವೆ ನಡೆಯುತ್ತದೆ. ಈವೇಳೆ ಚೆಂಡವಾದನ, ಟಾಸೆ, ವಾದ್ಯ ಮುಂತಾದವುಗಳ ಬಡಿತದೊಂದಿಗೆ ದೇವಸ್ಥಾನದ ಹೊರಾಂಗಣದಲ್ಲಿ ಒಂದು ಸುತ್ತು ಬಲಿ ಸೇವೆ ನಡೆಯುತ್ತದೆ. ಇದಕ್ಕೆ ದೇವಸ್ಥಾನದ ಆಡಳಿತ ಮೊಕ್ತೇಸರರು, ಗುತ್ತಿನವರು, ಊರ ಭಕ್ತರು ಕೂಡಾ ಹೆಜ್ಜೆ ಹಾಕುತ್ತಾರೆ. ಹೀಗೆ ಒಂದು ಸುತ್ತ ಬಲಿ ಸೇವೆ ನಡೆ ಬಳಿಕ ಬಲಿ ಸೇವೆ ದೇವಸ್ಥಾನದ ಒಳಾಂಗಣ ಪ್ರವಶೇಶಿಸುತ್ತದೆ. ಅಲ್ಲಿ ಮತ್ತೊಂದು ಸುತ್ತು ಬಂದು ಆ ಬಳಿಕ ತನೆಯನ್ನು ತಲೆಯಿಂದ ಇಳಿಸಿ ದೇವಸ್ಥಾನದ ಪ್ರಧಾನ ಅರ್ಚಕರು ಅದನ್ನು ರಾಜರಾಜೇಶ್ವರಿ ದೇವಿಯ ಮುಂಬಾಗದಲ್ಲಿ ಇಟ್ಟು ಪೂಜೆ ವಿಧಿ-ವಿಧಾನಗಳನ್ನು ನೆರವೇರಿಸುತ್ತಾರೆ. ನಂತರ ತೆನೆಯನ್ನು ದೇವರ ಉಡಿಯಲ್ಲಿ ಇಟ್ಟು ಮತ್ತೊಮ್ಮೆ ಪೂಜೆ ಸಲ್ಲಿಸುತ್ತಾರೆ. ಎಲೆಹಾಕಿ ಕೂತುಕೊಂಡಿರುತ್ತಾರೆ ಜನರು: ದೇವಸ್ಥಾನದಲ್ಲಿ ಪೂಜೆ ಆದ ಬಳಿಕ ತೆನೆಯನ್ನು ಬಂದಿರುವಂಹಾ ಭಕ್ತರಿಗೆ ಹಂಚುವ ಕ್ರಮವಿರುತ್ತದೆ. ಅದಕ್ಕಾಗಿ ಮೊದಲೇ ದೇವಸ್ಥಾನದ ಹೊರಾಂಗಣ ಹಾಗೂ ಒಳಾಂಗಣದ ಸುತ್ತ ಎಲೆಇಟ್ಟು ಕಾಯುತ್ತಿರುತ್ತಾರೆ. ಇದಕ್ಕೆ ತನ್ನ ಮನೆಯಲ್ಲಿ ಬೆಳೆದ ತರಕಾರಿ, ವೀಲ್ಯದೆಲೆ, ಅಡಿಕೆ ಇಟ್ಟುಕೊಂಡಿರುತ್ತಾರೆ. ಪೂಜೆ ನಡೆದ ಬಳಿಕ ತೆನೆಯನ್ನು ಹಂಚುವ ಕ್ರಮ ಇರುವುದರಿಂದ ಈ ರೀತಿ ಜನರು ಮೊದಲೇ ಸಿದ್ಧತೆ ಮಾಡಿಕೊಂಡಿರುತ್ತಾರೆ. ತೆನೆಯನ್ನು ಗರ್ಭಗುಡಿಯಲ್ಲಿರುವ ಬ್ರಾಹ್ಮಣರಿಗೆ ಮೊದಲು ಹಂಚಲಾಗುತ್ತದೆ. ನಂತರ ಬ್ರಾಹ್ಮಣರು ಪ್ರಸಾದ ಹಾಗೂ ತೆನೆಯನ್ನು ಹಿಡಿದುಕೊಂಡು ಅದನ್ನು ಮೊದಲೇ ಎಲೆ ಹಾಕಿಕೊಂಡು ಕಾಯುತ್ತಿರುವ ಭಕ್ತರ ಎಲೆಗಳಿಗೆ ಊಟ ಬಡಿಸಿದಂತೆ ಬಡಿಸುತ್ತಾರೆ. ನಂತರ ಮತ್ತೊಂದು ಪೂಜೆ ನಡೆದ ಬಳಿಕ ಪುರೋಹಿತರು ಆ ಪ್ರಸಾದವನ್ನು ಹಿಡಿದುಕೊಂಡು ಹೋಗುವಂತೆ ಸೂಚನೆ ನೀಡುತ್ತಾರೆ. ಆ ಬಳಿಕ ಭಕ್ತರು ಅದನ್ನು ಮನೆಗೆ ತೆಗೆದುಕೊಂಡು ಹೋಗುತ್ತಾರೆ. ದೇವಸ್ಥಾನದಲ್ಲೂ ಪುದ್ದರ್ ಆಚರಣೆ: ಮಧ್ಯಾಹ್ನದ ಪೂಜೆ ನಡೆದ ಬಳಿಕ ದೇವಸ್ಥಾನದ ಲೆಕ್ಕದಲೂ ಪುದ್ದರ್ ಆಚರಿಸಲಾಗುತ್ತದೆ. ಈ ವೇಳೆ ತರಕಾರಿಯಿಂದ ಮಾಡಿದ ಊಟವಿರುತ್ತದೆ. ಅಲ್ಲದೆ ದೇವರಿಗೆ ಅಪರ್ಿಸಿದ ನೈವೇದ್ಯವನ್ನು ಊರವರಿಗೆ ಹಂಚಲಾಗುತ್ತದೆ. ಕೆಲವರು ಈ ನೈವೇದ್ಯವನ್ನು ಕೂಡಾ ಮನೆಗೆ ಕೊಂಡುಹೋಗುತ್ತಾರೆ. ಪೊಳಲಿ ದೇವಸ್ಥಾನದಲ್ಲಿ ಪುದ್ದರ್ ನಡೆದ ಬಳಿಕ ಪೊಳಲಿಯ ಸಾವಿರ ಸೀಮೆಗೆ ಸಂಬಂಧಪಟ್ಟ ಊರಿನಲ್ಲಿ ಪುದ್ದರ್ ಆಚರಿಸಬಹುದು. ಮನೆಯಲ್ಲಿ ಪುದ್ದರ್(ಹೊಸಕ್ಕಿ ಊಟ) ಸಂಭ್ರಮ: ದೇವಸ್ಥಾನದಲ್ಲಿ ಪ್ರಸಾದವಾಗಿ ಸಿಕ್ಕ ತೆನೆಯನ್ನು ಹಿಡಿದುಕೊಂಡು ಭಕ್ತರು ಮನೆಗೆ ಹೋಗುತ್ತಾರೆ. ಅದನ್ನು ತುಳಸಿಕಟ್ಟೆ, ತೆಂಗಿನ ಮರ ಮನೆಯ ಐಶ್ವರ್ಯ ಕೊಡುವ ವಸ್ತುಗಳಾದ ಹಣದ ಡಬ್ಬಿ, ಮನೆಯ ಹೊಸ್ತಿಲು ಮುಂತಾದುವುಗಳಿಗೆ ಕಟ್ಟಲಾಗುತ್ತದೆ. ಅದರ ತೆನೆಯಲ್ಲಿರು ಭತ್ತದ ಕಾಳನ್ನು ತೆಗೆದು ಅದನ್ನು ಹಳೆ ಅಕ್ಕಿಗೆ ಸೇರಿಸಿ ಪುದ್ದರ್ ಮಾಡಲಾಗುತ್ತದೆ. ಪುದ್ದರ್ ವೇಳೆ ಮನೆಯಲ್ಲಿ ಊರಲ್ಲೇ ಬೆಳೆದ ತರಕಾರಿಗಳಾದ ಮುಳ್ಳುಸೌತೆ, ಬೆಂಡೆಕಾಯಿ, ಹೀರೆ, ಅರಿವೆ, ಒಂದೇಲಗ, ಬೆಳ್ತಕ್ಕಿ ಪಾಯಸ ಮುಂತಾದುವುಗಳ ರುಚಿರುಚಿಯಾದ ತರಕಾರಿ ಊಟ ಸಿದ್ಧಪಡಿಸಲಾಗುತ್ತದೆ. ಈ ಊಟ ವಿಶೇಷ ರೀತಿಯ ಪರಿಮಳದಿಂದ ಕೂಡಿರುತ್ತದೆ ಎಂದು ಭಕ್ತರ ಅಭಿಪ್ರಾಯವಾಗಿದೆ. ವಿಶೇಷವಾಗಿ ಸಾಗುವಳಿದಾರರ ಮನೆಯಲ್ಲಿ ವಿಶೇಷವಾಗಿ ಆಚರಣೆ ಮಾಡಲಾಗುತ್ತಿದ್ದು, ಅವರು ಸಾಗುವಾಳಿ ಇಲ್ಲದವರನ್ನು ಆಹ್ವಾನಿಸಿ ಭರ್ಜರಿ ಊಟ ಮಾಡಿಸುತ್ತಿದ್ದರು. ಆದರೆ ಹಿಂದಿನ ಕಾಲದಲ್ಲಿ ಜಬರ್ದಸ್ತಿನಲ್ಲಿ ಪುದ್ದರ್ ಆಚರಣೆ ಮಾಡಲಾಗುತ್ತಿತ್ತು. ಪರವೂರಿನಿಂದ ನೆಂಟರು ಬರುತ್ತಿದ್ದರು. ಗದ್ದೆಯಲ್ಲಿ ಕೊಯ್ಲಿಗೆ ಸಿದ್ದವಾಗಿರುವ ಬತ್ತದ ಪೈರು ನಳನಳಿಸಿ ನಿಂತಿರುವುದು ಊರವರಿಗೆ ಒಂದು ಸಂಭ್ರಮದ ವಿಷಯವಾಗಿತ್ತು. ಕೆಲವರು ದೇವಸ್ಥಾನದಿಂದ ತೆನೆ ತಾರದವರು ಮನೆಯಲ್ಲಿ ಇಲ್ಲ್ ದಿಂಜಾವುನಿ(ಮನೆ ತುಂಬಿಸುವುದು) ಎಂಬ ರೀತಿಯಲ್ಲಿ ತೆನೆಗೆ ವಿಶೇಷ ರೀತಿಯ ಪೂಜೆ ಸಲ್ಲಿಸಿ ಪುದ್ದರ್ ಸವಿಯುತ್ತಿದ್ದರು. ಒಂದು ವೇಳೆ ಬೇರೆ ಮನೆಯಲ್ಲಿ ಪುದ್ದರ್ ಆಚರಿಸಬೇಕಾಗಿದ್ದರೆ ಆ ಮನೆಯವರು ಬೇರೆ ಮನೆಯವರ ಪುದ್ದರ್ ಊಟ ಸವಿಯುತ್ತಿರಲಿಲ್ಲ. ಆದರೆ ಇತ್ತೀಚೆಗೆ ಆಧುನೀಕತೆಯ ಭರಾಟೆಯಲ್ಲಿ ಪುದ್ದರ್ ಆಚರಣೆ ಮರೆಯಾಗುತ್ತಾ ಬರುತ್ತರುವುದು ದುರಂತ














