ಬಜ್ಪೆ: ಪೆರ್ಮುದೆಯ ಉದ್ಯಮಿ ಯಾದವ ಕೋಟ್ಯಾನ್ ಆರಾಧಿಸಿಕೊಂಡು ಬಂದಿದ್ದ ಅಣ್ಣಪ್ಪ ಸ್ವಾಮಿ ದೈವದ ಗುಡಿಗೆ ಹೊಕ್ಕ ಕಳ್ಳರು ಒಂದು ಕೋಟಿ ಮೌಲ್ಯದ ದೈವದ ಸೊತ್ತುಗಳನ್ನು ಕದ್ದು ಪರಾರಿಯಾಗಿದ್ದರು. ಆದರೆ ಕಳ್ಳರನ್ನು ಪತ್ತೆ ಹಚ್ಚಲು ಪೊಲೀಸರು ಸಂಪೂರ್ಣ ವಿಫಲವಾಗಿದ್ದಾರೆ.
ಈ ದೈವಸ್ಥಾನದಲ್ಲಿ ಕಳೆದ ಜುಲೈ 31ರಂದು ಕಳ್ಳತನ ನಡೆದಿತ್ತು. ದೈವಸ್ಥಾನದ ಹಿಂದಿನ ಬಾಗಿಲನ್ನು ಧ್ವಂಸಗೊಳಿಸಿ ಹೊಕ್ಕ ಕಳ್ಳರು ಅಣ್ಣಪ್ಪ ದೈವಗಳ ವಿಗ್ರಹ ಸೇರಿದಂತೆ ದೈವಸ್ಥಾನದ ಭಂಡಾರದಲ್ಲಿದ್ದ ಆಭರಣಗಳನ್ನು ದೋಚಿ ಪರಾರಿಯಾಗಿದ್ದರು. ದೈವಸ್ಥಾನದ ಹಿಂಭಾಗದಲ್ಲಿ ಬಂದ ಇಬ್ಬರು ಮುಸುಕುಧಾರಿ ಕಳ್ಳರು ಕೃತ್ಯ ನಡೆಸಿರುವುದು ಸಿಸಿಟಿವಿಯಲ್ಲಿ ದಾಖಲಾಗಿತ್ತು.




ವಜ್ರಲೇಪಿತವಾದ ದೈವದ ಕಣ್ಣು, ಚಿನ್ನದ ಆಭರಣಗಳು, ಪಂಚಲೋಹದ ಪರಿಕರಗಳು ಹೀಗೆ ಒಂದು ಕೋಟಿ ರೂ. ಮೌಲ್ಯದ ಸೊತ್ತು ಕಳವಾಗಿತ್ತು.
ಈ ವೇಳೆ ಯಾದವ ಕೋಟ್ಯಾನ್ ಅವರು ಮನೆಯ ನಾಯಿಗಳನ್ನು ಕಟ್ಟಿ ಹಾಕಿದ್ದ ಕಾರಣ ಕಳ್ಳರಿಗೆ ತನ್ನ ಕೃತ್ಯಗಳನ್ನು ಸಲೀಸಾಗಿ ಎಸಗಲು ಸಾಧ್ಯವಾಗಿತ್ತು ಎನ್ನಲಾಗಿದೆ.
ಪ್ರಶ್ನೆಯಲ್ಲಿ ಕೇಳಿಬಂದಿದ್ದೇನು?:
ಯಾದವಕೋಟ್ಯಾನ್ ಅವರು ಇದೀಗ ದೈವದೇವರ ಮೊರೆ ಹೋಗಿದ್ದು, ಜ್ಯೋತಿಷಿಗಳಲ್ಲಿ ಕೇಳಿದ್ದಾರೆ ಎನ್ನಲಾಗಿದೆ. ಪ್ರಶ್ನೆಯಲ್ಲಿ ಈ ಸೊತ್ತುಗಳು ಗುರುಪುರದಲ್ಲಿದೆ ಎಂಬ ಉತ್ತರ ಬಂದಿದೆ ಎನ್ನಲಾಗಿದ್ದು, ಕೆಲವೇ ದಿನಗಳಲ್ಲಿ ಸೊತ್ತು ಮರಳಲಿದೆ ಎಂದು ಪ್ರಶ್ನೆಯಲ್ಲಿ ಹೇಳಿದ್ದಾರೆನ್ನಲಾಗಿದೆ.

