ಸುರತ್ಕಲ್: ಗಣೇಶ ಚತುಥರ್ಿ ಬಂದಾಗ ಕಬ್ಬು ಬೆಳೆಗಾರರು ಸಂತಸ ಪಡುತ್ತಾರೆ. ಇದಕ್ಕೆ ಕಾರಣ ತಾವು ಕಷ್ಟಪಟ್ಟು ಬೆಳೆದ ಕಬ್ಬಿಗೆ ಒಳ್ಳೆಯ ಬೆಲೆ ಸಿಗುವುದು. ಹಿಂದೆಲ್ಲ ಮಂಡ್ಯ, ಮೈಸೂರು, ರಾಮನಗರ ಭಾಗದಿಂದ ಇಲ್ಲವೇ ಉತ್ತರ ಕನ್ನಡ ಭಾಗದಿಂದ ಕಬ್ಬನ್ನು ಲೋಡ್ಗಟ್ಟಲೆ ತಂದು ಮಾರುಕಟ್ಟೆಗೆ ಸುರಿಯುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಕಪ್ಪು ಮಣ್ಣಿನಲ್ಲಿ ಬೆಳೆಯುವ ಸಿಹಿಯಾದ ಕಬ್ಬನ್ನು ನಮ್ಮ ಪಕ್ಕದ ಬಳ್ಕುಂಜೆಯಲ್ಲೂ ಬೆಳೆಯುತ್ತಾರೆ. ಎಕರೆಗಟ್ಟಲೆ ಗದ್ದೆಯಲ್ಲಿ ಬೆಳೆದ ಕಬ್ಬು ಸುತ್ತಮುತ್ತಲ ಮಾರುಕಟ್ಟೆಯನ್ನು ಪ್ರವೇಶಿಸಿದ್ದು ಭಾರೀ ಬೇಡಿಕೆ ವ್ಯಕ್ತವಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.

ಬಳ್ಕುಂಜೆಯ ರೈತರು ಹಿಂದೆ ಭತ್ತ ಬೆಳೆಯುತ್ತಿದ್ದರು. ಆದರೆ ನಂತರದ ದಿನಗಳಲ್ಲಿ ಭತ್ತ ಬೆಳೆಯುವುದು ಕಷ್ಟವಾದಾಗ ರೈತರು ನಿಧಾನಕ್ಕೆ ಕಬ್ಬು ಬೆಳೆಯಲು ಮನಸ್ಸು ಮಾಡಿದರು. ಇದರ ಪರಿಣಾಮ ಈಗ ಇಲ್ಲಿನ ಭತ್ತದ ಗದ್ದೆಗಳಲ್ಲಿ ಕಬ್ಬು ನಳನಳಿಸುತ್ತಿದೆ. ಚೌತಿ ಹಬ್ಬ ಬಂದಾಗ ಕಬ್ಬಿನ ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸುತ್ತಾರೆ. ಕೆಲವು ಗದ್ದೆಯನ್ನು ಕಬ್ಬು ಮಾರಾಟಗಾರರು ಇಂತಿಷ್ಟು ಬೆಲೆ ಕೊಟ್ಟು ಖರೀದಿ ಮಾಡಿ ತಾವೇ ಕಬ್ಬು ಕಡಿದು ಲಾರಿ ಮೂಲಕ ಕಬ್ಬನ್ನು ಮಾರುಕಟ್ಟೆಗೆ ಸಾಗಾಟ ಮಾಡುತ್ತಾರೆ.
ಸುರತ್ಕಲ್ ಮಾರುಕಟ್ಟೆಗೆ ಸೇಲ್:
ಬಳ್ಕುಂಜೆಯ ಕಬ್ಬಿನ ಗಾತ್ರ ಸಪೂರವಾದರೂ ಇದು ಅತ್ಯಂತ ಸಿಹಿಯನ್ನು ಹೊಂದಿದೆ. ಕಪ್ಪು ಬಣ್ಣದ ಕಬ್ಬಿನಲ್ಲಿ ಬೆಲ್ಲದ ಅಂಶ ಜಾಸ್ತಿಯಿರುವ ಕಾರಣ ಇದನ್ನು ಜನರು ಮುಗಿಬಿದ್ದು ಖರೀದಿ ಮಾಡುತ್ತಾರೆ. ಸುರತ್ಕಲ್, ಕಿನ್ನಿಗೋಳಿ, ಹಳೆಯಂಗಡಿ ಹಾಗೂ ಇತರ ಕಡೆಗಳಲ್ಲಿ ಬಳ್ಕುಂಜೆಯ ಕಬ್ಬು ಭರ್ಜರಿ ಮಾರಾಟವಾಗುತ್ತಿದೆ. ಲಾರಿ-ಟೆಂಪೋಗಳಲ್ಲಿ ಮಾರುಕಟ್ಟೆಗೆ ತರುವ ಕಬ್ಬನ್ನು ವ್ಯಾಪಾರಿಗಳು ರಾಶಿ ಹಾಕಿ ಮಾರಾಟ ಮಾಡುವುದು ಕಂಡುಬರುತ್ತದೆ.
ಒಂದು ಕಟ್ಟಕ್ಕೆ 250-270 ರೂ.
ಬಳ್ಕುಂಜೆಯ ಕಬ್ಬು ಮಾರುಕಟ್ಟೆಯಲ್ಲಿ ಭಾರೀ ಬೆಲೆಗೆ ಮಾರಾಟವಾಗುತ್ತಿದೆ. 12ರ ಒಂದು ಕಟ್ಟಕ್ಕೆ 250 ರೂ.ನಿಂದ 270 ರೂ. ಬೆಲೆಯನ್ನು ವಿಧಿಸಲಾಗಿದೆ. ಮಾರುಕಟ್ಟೆಯಲ್ಲಿ ಕೆಲವು ವ್ಯಾಪಾರಿಗಳು 250 ರೂ.ಗೆ ಮಾರಿದರೆ ಮತ್ತೂ ಕೆಲವರು ಬೇಡಿಕೆ ಗಮನಿಸಿ ದರವನ್ನು ಹೆಚ್ಚಳ ಮಾಡುತ್ತಿದ್ದಾರೆ.
ಹೂವು-ತರಕಾರಿ ವ್ಯಾಪಾರ ಹೆಚ್ಚಳ:
ಗಣೇಶ ಚೌತಿ ಹಬ್ಬದ ಹಿನ್ನೆಲೆಯಲ್ಲಿ ಹೂವು-ತರಕಾರಿ ವ್ಯಾಪಾರದಲ್ಲೂ ಹೆಚ್ಚಳ ಕಂಡುಬಂದಿದೆ. ಸುರತ್ಕಲ್ ಮಾರುಕಟ್ಟೆಯಲ್ಲಿ ಹೂವಿನ ವ್ಯಾಪಾರ ಚಿಗಿತುಕೊಂಡಿದ್ದು, ತರಕಾರಿ ಬೆಲೆ ಕೊಂಚ ಹೆಚ್ಚಳವಾದರೂ ಜನರು ವರ್ಷಕ್ಕೊಂದು ಬಾರಿಯಲ್ಲವೇ ಖುಷಿಪಟ್ಟು ಖರೀದಿ ಮಾಡುತ್ತಿದ್ದಾರೆ. ಗಣೇಶ ಚತುಥರ್ಿ ಹಬ್ಬ ಹಿಂದೂಗಳ ಪವಿತ್ರ ಹಬ್ಬವಾಗಿದ್ದು ಹೂವು, ಹಣ್ಣು, ಕಬ್ಬು ಮಾರಾಟ ಭರ್ಜರಿಯಾಗಿ ನಡೆಯುವುದು ಹಬ್ಬದ ವಿಶೇಷತೆಯೂ ಆಗಿದೆ.
-ಶಶಿಧರ, ಬೆಳ್ಳಾಯರು











