
ಲಾಹೋರ (ಪಾಕಿಸ್ತಾನ): ಇಲ್ಲಿಯ ಜಾಮಿಯಾ ಮಸೀದಿಯಲ್ಲ ಭಾಷಣ ಮಾಡಲು ಬಂದಿದ್ದ ಮಾಜಿ ಪ್ರಧಾನಿ ನವಾಜ ಶರೀಫ್ ಮೇಲೆ ಕಿಡಿಗೇಡಿಯೊಬ್ಬ ಶೂ ಎಸೆದ ಪ್ರಸಂಗ ರವಿವಾರ ನಡೆದಿದೆ.
ಧಾರ್ಮಿಕ ಮುಖಂಡ ಮು್ಫ್ತಿ ಮೊಹ್ಮದ ಹುಸೇನ್ ಅವರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಪಾಲ್ಲಗೊಳ್ಳಲು ಆಗಮಿಸಿದ್ದ ಶರೀಫ್ ವೇದಿಕೆ ಏರುತ್ತಿದ್ದಂತೆಯೇ ಶೂ ದಾಳಿ ನಡೆಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
ಘಟನೆ ನಂತರವೂ ಭಾಷಣ ಮುಂದುವರಿಸಿದ ಶರೀಫ್, ಸಂಘಟಕರಿಗೆ ಕೃತಜ್ಞತೆ ತಿಳಿಸುವುದರೊಂದಿಗೆ ಅಗಲಿದ ಧಾರ್ಮಿಕ ಮುಖಂಡನಿಗೆ ನಮನ ಸಲ್ಲಿಸಿದರು.
ಘಟನೆ ನಡೆಯುತ್ತಿ್ದ್ದಂತೆಯೇ ಶೂ ಎಸೆದ ಕಿಡಿಗೇಡಿಯನ್ನು ಹಿಗ್ಗಾ ಮುಗ್ಗಾ ಥಳಿಸಿದ ಸಾರ್ವಜನಿಕರು ನಂತರ ಪೊಲೀಸರ ವಶಕ್ಕೆ ಒಪ್ಪಿಸಿದರು.
ಘಟನೆಯನ್ನು ಖಂಡಿಸಿರುವ ಪ್ರತಿಪಕ್ಷ ನಾಯಕ ಶೇಖ್ ರಶೀದ್, ಇದು ಗುಪ್ತಚರ ದಳದ ಲೋಪ ಎಂದು ದೂಷಿಸಿದರಲ್ಲದೇ ಶರೀಫ್ ಅವರ ಅತಿಯಾದ ಆತ್ಮವಿಶ್ವಾಸವೂ ಇದಕ್ಕೆ ಕಾರಣ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಗುಂಡುನಿರೋಧಕ ಗಾಜಿನ ವೇದಿಕೆ ಮೂಲಕ ಭಾಷಣ ಮಾಡುವಂತೆಯೂ ಅವರು ಶರೀಫ್ ಗೆ ಸಲಹೆ ನೀಡಿದರು.
ಪಾಕಿಸ್ತಾನದ ವಿದೇಶಾಂಗ ಸಚಿವ ಖ್ವಾಜಾ ಆಸೀಫ್ ಅವರ ಮೇಲೆ ಶನಿವಾರವಷ್ಟೇ ದುಷ್ಕರ್ಮಿಯೊಬ್ಬ ಮಸಿ ಎರಚಿದ್ದನ್ನು ಇಲ್ಲಿ ಸ್ಮರಿಸಬಹುದು.
ಕಳೆದ ಫೆಬ್ರುವರಿ 24 ರಂದು ಸಾರ್ವಜನಿಕ ಸಭೆಯೊಂದರಲ್ಲಿ ಭಾಷಣ ಮಾಡುತ್ತಿದ್ದ ಯೋಜನೆ, ಅಭಿವೃದ್ಧಿ ಮತ್ತು ಸುಧಾರಣೆ ಖಾತೆ ಸಚಿವ ಹಸಾನ್ ಇಕ್ಬಾಲ್ ಅವರ ಮೇಲೂ ಶೂ ದಾಳಿ ನಡೆದಿತ್ತು.(ಮೂಲ: ಎಎನ್)
