ಕೈಕಂಬ: ಕುಪ್ಪೆಪದವು ಶ್ರೀದುರ್ಗೇಶ್ವರಿ ದೇವಿ ದೇವಸ್ಥಾನದಲ್ಲಿ ಶ್ರೀ ದುರ್ಗೆಶ್ವರಿ ದೇವಿ ಮತ್ತು ಗಣಪತಿ ದೇವರ ನೂತನ ದೇವಾಲಯಕ್ಕೆ ಭಾನುವಾರ ಶಿಲಾನ್ಯಾಸ ನೆರವೇರಿಸಲಾಯಿತು.
ಬೆಳಿಗ್ಗೆ 8:18ಕ್ಕೆ ನೂತನ ದೇವಾಲಯಕ್ಕೆ ಶಿಲಾನ್ಯಾಸ ನೆರವೇರಿಸಿದ ನಂತರ ನಡೆದ ಸರಳ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಮಧ್ವಾಚಾರ್ಯ ಸಂಸ್ಥಾನ ಸುಬ್ರಮಣ್ಯ ಮಠದ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿಯವರು ನಾವು ಮಾಡುವ ಯಾವುದೇ ಕಾರ್ಯಕ್ಕೆ ಕ್ರಿಯಾ ಶಕ್ತಿ ಮತ್ತು ಸಂಕಲ್ಪ ಶಕ್ತಿಯು ಅವಶ್ಯವಾಗಿದೆ ಇವೆರಡು ಇದ್ದರೂ ದೇವರ ಅನುಗ್ರಹವಿದ್ದರೆ ಮಾತ್ರ ನಾವು ಯಶಸ್ಸು ಕಾಣಲು ಸಾಧ್ಯ, ಇಂದು ನೂತನ ದೇವಾಲಯ ನಿರ್ಮಾಣಕ್ಕೆ ಕಾಲ ಕೂಡಿಬಂದಿದ್ದು ಭಕ್ತರ ಸಂಕಲ್ಪ ಶಕ್ತಿ ಮತ್ತು ಕ್ರಿಯಾ ಶಕ್ತಿಯ ಜತೆಗೆ ದೇವರ ಅನುಗ್ರಹದಿಂದ ನೂತನ ದೇವಸ್ಥಾನ ಶೀಘ್ರ ಪೂರ್ಣಗೊಳ್ಳಲಿ ಎಂದರು.

ವೇದಮೂರ್ತಿ ರಾಧಾಕೃಷ್ಣ ತಂತ್ರಿ ಎಡಪದವು, ದೇವಸ್ಥಾನದ ಅರ್ಚಕರಾದ ವೇದಮೂರ್ತಿ ಸದಾಶಿವ ಕಾರಂತ, ವಾಸ್ತು ಶಿಲ್ಪಿ ಕೃಷ್ಣ ರಾಜ ತಂತ್ರಿ ಕುಡುಪು, ಅನಂತಪದ್ಮನಾಭ ಮಯ್ಯ ಬೆಂಗಳೂರು, ಡಾ. ಗಣೇಶ್ ಕುಮಾರ್ ಮಂಗಳೂರು ದೇವಸ್ಥಾನದ ಮ್ಯಾನೇಜಿಂಗ್ ಟ್ರಷ್ಟಿ ಪ್ರವೀಣ್ ಕುಮಾರ್ ಅಗರಿ, ಉಪ ಮ್ಯಾನೇಜಿಂಗ್ ಟ್ರಷ್ಟಿ ತುಳಸಿದಾಸ್ ಅಮೀನ್, ಟ್ರಸ್ಟಿಗಳಾದ ಪುರುಷೋತ್ತಮ್ ಕೆ., ಉಮೇಶ್ ಅಮೀನ್ ನಾಗಂದಡಿ, ಶ್ರೀ ಮತಿ ವಸಂತಿ ಕೆ, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಅಜಿತ್ ಕುಮಾರ್ ಜೈನ್, ಕಾರ್ಯದರ್ಶಿ ಅರ್ಜುನ್ ಪಂಡಿತ್ ಮತ್ತು ದುರ್ಗೆಶ್ವರೀ ಸೇವಾ ಸಮಿತಿಯ ಅಧ್ಯಕ್ಷ ಜಗದೀಶ್ ಕುಲಾಲ್ ಪಾಕಜೆ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉಪ ಸಮಿತಿಯ ಸದಸ್ಯರುಗಳು, ಜೀರ್ಣೋದ್ದಾರ ಸಮಿತಿಯ ಪದಾಧಿಕಾರಿಗಳು,ದುರ್ಗೆಶ್ವರಿ ಸೇವಾ ಸಮಿತಿಯ ಸದಸ್ಯರು, ಕಿಲೆಂಜಾರು, ಕುಲವೂರು ಮತ್ತು ಮುತ್ತೂರು ಗ್ರಾಮಗಳ ಪಂಚಾಯತ್ ಸದಸ್ಯರುಗಳು, ಊರ ಹಿರಿಯರು, ಗಣ್ಯರು ಹಾಗೂ ಮೂರು ಗ್ರಾಮಗಳ ಭಗವದ್ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ದುರ್ಗೆಶ್ವರಿ ಸೇವಾ ಸಮಿತಿಯ ಕಾರ್ಯದರ್ಶಿ ಶಿವರಾಜ್ ಕಾರಂತ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು. 

