ಕಡಬ: ದೇಶದಲ್ಲಿ ನಂ.1 ಸುಳ್ಳುಗಾರರಿದ್ದು, ಒಬ್ಬರು ಸಂಸದ ನಳಿನ್ ಕುಮಾರ್ ಕಟೀಲು. ಮತ್ತೂಬ್ಬರು ಈ ದೇಶದ ಪ್ರಧಾನಿ ನರೇಂದ್ರ ಮೋದಿ. ಇನ್ನು ಮುಂದೆ ಜನ ಇವರನ್ನು ನಂಬುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ ಸಚಿವ ಬಿ. ರಮಾನಾಥ ರೈ ವ್ಯಂಗ್ಯವಾಡಿದ್ದಾರೆ.
ಕಡಬ ಮೇಲಿನ ಪೇಟೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರುಮಾತನಾಡಿದರು.
ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿಲ್ಲ ಎಂಬ ಕಾರಣಕ್ಕಾಗಿ ನಾನು ಈ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಪ್ರಯತ್ನಿಸಿದ್ದೇನೆ. ಕಡಬ ತಾಲೂಕು ಘೋಷಣೆ ಆಗಿದ್ದು, ಉದ್ಘಾಟನೆ ಮಾಡಬೇಕು ಎಂದಿದ್ದರೂ ಅದಕ್ಕೆ ಅಡ್ಡಗಾಲು ಹಾಕಿದ್ದು, ಈ ಕ್ಷೇತ್ರದ ಶಾಸಕ ಎಸ್. ಅಂಗಾರ. ಮುಂದೆ ಶಾಸಕರಾಗುವ ಡಾ.ರಘು ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದರು.
ಈ ಭಾಗದಲ್ಲಿ ಇಚ್ಲಂಪಾಡಿ ಸೇತುವೆ ನಿರ್ಮಾಣ ಮಾಡಿದ್ದೇನೆ. ಉದನೆ ಸೇತುವೆ ಕೆಲಸ ಪ್ರಾರಂಭವಾಗಿದೆ. ಕೊಯಿಲದಲ್ಲಿ ಪಶುವೈದ್ಯಕೀಯ ಕಾಲೇಜು ಆಗಬೇಕಿದ್ದರೂ ನಮ್ಮ ಪ್ರಯತ್ನವಿದೆ. ಸುಬ್ರಹ್ಮಣ್ಯ, ಕಡಬ ಸಮುದಾಯ ಆಸ್ಪತ್ರೆ ನಿರ್ಮಾಣ, 94 ಸಿ ಅಡಿಯಲ್ಲಿ ಜಾಗ ಕೊಟ್ಟಿದ್ದೇವೆ. ಬೆಳಂದೂರು ಕಾಲೇಜಿಗೂ ಪ್ರಯತ್ನಿಸಿದ್ದೇವೆ ಎಂದರು.
ಮಾಜಿ ಸಚಿವ ಗಂಗಾಧರ ಗೌಡ ಮಾತನಾಡಿ, ಈ ದೇಶದಲ್ಲಿ ಕೃಷಿ ಉತ್ಪನ್ನಗಳಿಗೆ ಬೆಲೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಆದರೆ ಬಿಜೆಪಿ ಜನರ ಮೇಲೆ ಯಥೇತ್ಛ ತೆರಿಗೆ ಹಾಕಿ, ಅವರನ್ನು ಬೀದಿಗೆ ತಂದಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ಅಭ್ಯರ್ಥಿ ಡಾ.ರಘು, ಎಐಸಿಸಿಯ ಡಾ.ಅಭಿಲಾಷ್, ಕಣಚ್ಚಾರು ಮೋನು, ಸುಳ್ಯ ವಿಧಾನ ಸಭಾ ಕ್ಷೇತ್ರದ ಉಸ್ತುವಾರಿ ಸವಿತಾ ರಮೇಶ್ ಮಾತನಾಡಿದರು. ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್ ಮಾತನಾಡಿದರು. ವೇದಿಕೆಯಲ್ಲಿ ವೆಂಕಟೇಶ್, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಹರೀಶ್ ಕುಮಾರ್, ಜಿಲ್ಲಾ ಉಸ್ತುವಾರಿ ಯು.ಬಿ. ವೆಂಕಟೇಶ್, ಜಿ.ಪಂ. ಸದಸ್ಯ ಸವೋತ್ತಮ ಗೌಡ, ತಾ.ಪಂ. ಸದಸ್ಯರಾದ ಆಶಾ ಲಕ್ಷ್ಮಣ್, ಫಝಲ್ ಕೋಡಿಂಬಾಳ, ಗಣೇಶ್ ಕೈಕುರೆ, ಟಿ.ಎಂ. ಶಹೀದ್, ಮಾಜಿ ಶಾಸಕ ಕೆ. ಕುಶಲ ಉಪಸ್ಥಿತರಿದ್ದರು.

