ತಲಪಾಡಿ: ಶಿಬಿರಗಳಲ್ಲಿ ಸಿಗುವ ಸಂಸ್ಕಾರ, ಸಾಮಾನ್ಯ ಜ್ಞಾನವನ್ನು ಮಕ್ಕಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಆನಂದಾಶ್ರಮ ಪ್ರೌಢಶಾಲಾ ನಿವೃತ್ತ ಅಧ್ಯಾಪಕ ಕೆ. ಆರ್.ಚಂದ್ರ ಕರೆ ನೀಡಿದ್ದಾರೆ.
ಅವರು ಕಿನ್ಯ ಕೇಶವ ಶಿಶುಮಂದಿರ ಹಾಗೂ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸಹಕಾರದೊಂದಿಗೆ ಶ್ರೀ ಕ್ಷೇತ್ರ ತಲಪಾಡಿಯ ಸಭಾ ಭವನದಲ್ಲಿ 5 ದಿನಗಳ ಪರ್ಯಂತ ನಡೆಯುವ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಮಕ್ಕಳಿಗೆ ಮಾರ್ಗದರ್ಶನ ನೀಡಿ ಶಾಲೆಯಲ್ಲಿ ಪಾಠಗಳಲ್ಲಿ ಸಿಗದ ಅನೇಕ ವಿಷಯಗಳು, ಮೌಲ್ಯಗಳು ಈ ಶಿಬಿರಗಳಿಂದ ಪಡೆಯಬಹುದು ಎಂದು ಹೇಳಿದರು.
ವೇದಮೂರ್ತಿ ಬಾಲಕೃಷ್ಣ ಭಟ್ ಪಂಜಾಳ ಶಿಬಿರ ಉದ್ಘಾಟಿಸಿ ಮಾತನಾಡಿ, ಕೇವಲ ಹಣದಿಂದ ದೊರಕುವ ವಿಚಾರ, ವಿಷಯಗಳು ಮಾತ್ರ ಮುಖ್ಯವಲ್ಲ ಉಚಿತವಾಗಿ ಸಿಗುವ ಈ ಸಂಸ್ಕಾರಯುತ ಶಿಕ್ಷಣವನ್ನು ಮಕ್ಕಳು ಪಡೆದು ಅದನ್ನು ಪೋಷಿಸಿದರೆ ಮಕ್ಕಳ ಭವಿಷ್ಯ ಉಜ್ವಲವಾಗುವುದು ಎಂದರು.
ನಿವೃತ್ತ ಕೃಷಿ ಅಧಿಕಾರಿ ಕೇಶವ ತಚ್ಚಣಿ ಮಾತಾನಾಡಿ, ಇಂದಿನ ಮೊಬೈಲ್ ಯುಗದಲ್ಲಿ ಮಕ್ಕಳು ತಮ್ಮತನವನ್ನು ಕಳೆದುಕೊಳ್ಳುತ್ತಿದ್ದು, ಇಂತಹ ಶಿಬಿರಗಳಿಂದ ಸಂಸ್ಕಾರ ಉತ್ತಮ ಜ್ಞಾನ ಪಡೆಯಲು ಸಾಧ್ಯ. ಮಕ್ಕಳು ಸೂರ್ಯೋದಯಕ್ಕಿಂತ ಮೊದಲು ಎದ್ದು ಪ್ರಶಾಂತ ವಾತಾವರಣದಲ್ಲಿ ಓದಬೇಕು. ಮನೆಯಲ್ಲಿ ತಮ್ಮ ತಮ್ಮ ಸ್ಥಳಗಳಲ್ಲಿ ಸೊಲ್ಪ ಮಟ್ಟಿಗೆ ಕೃಷಿಯನ್ನು ತರಕಾರಿಯನ್ನು ಮಾಡಬೇಕು. ಆಗ ವಿಷಕಾರಿಯಾದ ಈಗಿನ ತರಕಾರಿಯಿಂದ ಸ್ವಲ್ಪ ಮಟ್ಟಿಗಾದರೂ ಮುಕ್ತಿ ದೊರಕಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಲಪಾಡಿ ದೇವಸ್ಥಾನದ ಆಡಳಿತ ಮೊಕ್ತೇಸರ ಸಚ್ಚಿದಾನಂದ ಭಂಡಾರಿ, ಭಾರತ್ ಬೀಡಿ ಉದ್ಯೋಗಿ ರಾಜೀವ್ ದೇವಿಪುರ ಉಪಸ್ಥಿತರಿದ್ದರು.
ಶಿಶು ಮಂದಿರದ ವ್ಯವಸ್ಥಾಪಕ ನಾರಾಯಣ ಕಜೆ ಸ್ವಾಗತಿಸಿದರು. ಕಾರ್ಯದರ್ಶಿ ಚೇತನ್ ಪಿಲಿಕೂರ್ ವಂದಿಸಿದರು. ತಲಪಾಡಿ ದೇವಿಪುರ ಶಾಲೆಯ ಅಧ್ಯಾಪಕಿ ಸುಜಾತ ಕಾರ್ಯಕ್ರಮ ನಿರೂಪಿಸಿದರು.

