ಉಳ್ಳಾಲ: ಕಡಿಮೆ ಖರ್ಚಿನಿಂದ ಅಧಿಕ ಇಳುವರಿ ಗಳಿಸುವ ಗೋಡಂಬಿ ಬೆಳೆಯ ಬಗ್ಗೆ ರೈತರು ನಿರ್ಲಕ್ಷ್ಯ ವಹಿಸದೆ ಇನ್ನಷ್ಟು ಗೇರು ಬೆಳೆ ಕೃಷಿಯನ್ನು ವೃದ್ಧಿಸಬೇಕು ಎಂದು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗದ ಕುಲಪತಿ ಡಾ.ಪಿ.ನಾರಾಯಣ ಸ್ವಾಮಿ ಕರೆ ನೀಡಿದ್ದಾರೆ.
ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗ, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಉಳ್ಳಾಲ ಮತ್ತು ವಿವಿಧ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಉಳ್ಳಾಲ ಕಾಪಿಕಾಡುವಿನ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ನಡೆದಂತಹ “ಗೇರು ಬೆಳೆ ಕ್ಷೇತ್ರೋತ್ಸವ” 2018″ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಮುಖ ಬೆಳೆಯಾದ ಗೋಡಂಬಿಯು ಇತರ ಬೆಳೆಗಳಿಗಿಂತ ವಿಭಿನ್ನವಾಗಿದ್ದು, ಇತರ ಯಾವುದೇ ಬೆಳೆಗೂ ಮಾರುಕಟ್ಟೆಯಲ್ಲಿ ದರಗಳು ದಿನದಿಂದ ದಿನಕ್ಕೆ ಕುಸಿದರೂ ಗೋಡಂಬಿಗೆ ಮಾತ್ರ ಅತೀ ಹೆಚ್ಚಿನ ಮಾರುಕಟ್ಟೆ ಬೇಡಿಕೆ ದಿನಿತ್ಯವೂ ಇರುತ್ತದೆ. ಭಾರತದಿಂದ 28 ದೇಶಗಳಿಗೆ ಗೋಡಂಬಿಯು ರಫ್ತಾಗುತ್ತಿದ್ದು, ಇದರಿಂದ 5,169 ಕೋ. ರೂ. ವರಮಾನ ಬರುತ್ತಿದೆ. ನಮ್ಮಲ್ಲಿರುವ ಸಂಸ್ಕರಣಾ ಘಟಕಗಳಿಗೆ ಕಚ್ಚಾವಸ್ತು ಸಾಕಾಗದೆ 5 ಸಾವಿರ ಕೋಟಿ ರೂ. ಕಚ್ಚಾ ವಸ್ತುಗಳನ್ನು ಆಮದು ಮಾಡಲಾಗುತ್ತಿದೆ. ಗೇರು ಕೃಷಿಯಲ್ಲಿ ಅಂತರ್ ಬೆಳೆಗಳನ್ನು ಬೆಳೆಸಲು ಪ್ರಾಮುಖ್ಯತೆ ನೀಡಬೇಕು ಎಂದು ತಿಳಿಸಿದರು.
ಈ ವೇಳೆ ಪ್ರಗತಿಪರ ಕೃಷಿಕ, ರಾಷ್ಟ್ರ ಪ್ರಶಸ್ತಿ ವಿಜೇತ ಚಂದ್ರಶೇಖರ ಗಟ್ಟಿ ಕೊಂಡಾಣ, ಎಡ್ವರ್ಡ್ ರೆಬೆಲ್ಲೋ ತಾಕೊಡೆ, ಪಿ.ಬಿ.ಪ್ರಭಾಕರ ರೈ ಪೆರಾಜೆ, ಹೆನ್ರಿ ಕ್ರಾಸ್ತ ಪೆಡಮಲೆ ನೀರುಮಾರ್ಗ, ಕಿಶನ್ ಕುಮಾರ್ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಗೇರು ಬೆಳೆ ಮತ್ತು ಗೇರು ತೋಟದಲ್ಲಿ ಅಂತರ್ ಬೆಳೆಯ ಉತ್ಪಾದನಾ ತಾಂತ್ರಿಕತೆಗಳ ಬಗೆಗಿನ ಕೈಪಿಡಿಯನ್ನು ಕರ್ನಾಟಕ ರಾಜ್ಯ ಗೇರು ಅಭಿವೃದ್ಧಿ ನಿಗಮದ ಜಿಲ್ಲಾಧ್ಯಕ್ಷ ಬಿ.ಎಚ್.ಖಾದರ್ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ಎಂ.ಕೆ.ನಾಯ್ಕ್ ಅವರು ಸಭಾಧ್ಯಕ್ಷತೆ ವಹಿಸಿದ್ದರು. ಉಳ್ಳಾಲ ನಗರಸಭಾಧ್ಯಕ್ಷ ಕೆ.ಹುಸೇನ್ ಕುಂಞಿಮೋನು, ಪುತ್ತೂರು ಗೇರು ನಿರ್ದೇಶನಾಲಯದ ನಿರ್ದೇಶಕರಾದ ಡಾ.ಎಂ.ಗಂಗಾಧರ ನಾಯಕ್, ಮಂಗಳೂರು ಕೃಷಿ ವಿಜ್ನಾನ ಕೇಂದ್ರದ ಮುಖ್ಯಸ್ಥ ಡಾ.ಶಿವಕುಮಾರ್ ಮಗದ, ಕೃಷಿ ಇಲಾಖೆ ದ.ಕ ಜಿಲ್ಲಾ ಜಂಟಿ ನಿರ್ದೇಶಕ ಎಚ್.ಕೆಂಪೇಗೌಡ, ಉಳ್ಳಾಲ ನಗರಸಭಾ ಸದಸ್ಯ ಸುಕುಮಾರ್ ಉಳ್ಳಾಲ ಬೈಲು, ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ ಉಳ್ಳಾಲದ ಮುಖ್ಯಸ್ಥರಾದ ಡಾ.ಲಕ್ಷಣ, ವಲಯ ಕೃಷಿ ಮತ್ತು ತೋಟಗಾರಿಕೆ ಸಹ ಸಂಶೋಧನಾ ನಿರ್ದೇಶಕರಾದ ಡಾ.ಎಸ್.ಯು.ಪಾಟೀಲ್, ಹಿರಿಯ ವಿಜ್ನಾನಿ ಡಾ.ಬಿ.ಧನಂಜಯ, ಪ್ರವೀಣ್ ಎಸ್.ಕುಂಪಲ ಮೊದಲಾದವರು ಇದ್ದರು.

