ಉಳ್ಳಾಲ ಹಿಂದಿನ ಕಾಲದಲ್ಲಿ ಪ್ರಬಲ ಸಮುದಾಯದ ಮಕ್ಕಳು ಮಾತ್ರ ಇಂಜಿನಿಯರ್, ಡಾಕ್ಟರ್‍ನಂತಹ ಉನ್ನತ ಹುದ್ದೆಯನ್ನು ಪಡೆಯಬಹುದಾಗಿತ್ತು. ಆದರೆ ಇಂದು ಕಾಲ ಬದಲಾಗಿದ್ದು ಸಾಮಾಜಿಕ ಬದಲಾವಣೆಯೊಂದಿಗೆ ತಳವರ್ಗದ ಸಮುದಾಯದ ಮಕ್ಕಳು ತಮ್ಮ ಜ್ಞಾನ ಕೌಶಲದ ಮೂಲಕ ಉನ್ನತ ಹುದ್ದೆಯಲ್ಲಿರುವುದನ್ನು ಕಾಣಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದರು. ದಕ್ಷಿಣಕನ್ನಡ ಜಿಲ್ಲಾಡಳಿತ, ಉದ್ಯೋಗ ಮತ್ತು ತರಬೇತಿ ಇಲಾಖೆ, ಸಿಇಒಎಲ್ ಮತ್ತು ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಹಭಾಗಿತ್ವದಲ್ಲಿ ಶನಿವಾರ ಮಂಗಳೂರು ವಿಶ್ವವಿದ್ಯಾಲಯದ ಕ್ಯಾಂಪಸ್‍ನಲ್ಲಿ ನಡೆದ ದಿಶಾ-2018 ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ಭಾರತದ ವಿದ್ಯಾರ್ಥಿಗಳು ಮತ್ತು ಯುವ ಸಮುದಾಯ ಅತ್ಯಂತ ಕ್ರೀಯಾಶೀಲ ಮನೋಭಾವದವರಾಗಿದ್ದಾರೆ.

17mng75ಆದ್ದರಿಂದ ಭಾರತದ ವಿದ್ಯಾರ್ಥಿಗಳಿಗೆ ವಿದೇಶಗಳಲ್ಲಿಯೂ ಬಹಳಷ್ಟು ಬೇಡಿಕೆ ಸಿಗುತ್ತಿದೆ. ಸರಕಾರ ಇಂದು ವಿದ್ಯಾರ್ಥಿಗಳ ಜ್ಞಾನವರ್ದನೆಗಾಗಿ ಹಲವಾರು ಸವಲತ್ತುಗಳ ಪ್ರೋತ್ಸಾಹ ನೀಡುತ್ತಿದೆ. ವಿದ್ಯಾರ್ಥಿಗಳು ಕೂಡಾ ಶೈಕ್ಷಣಿಕ ಅರ್ಹತೆ, ಜ್ಞಾನ ಕೌಶಲ್ಯದೊಂದಿಗೆ ಉನ್ನತ ಹುದ್ದೆಗಳನ್ನು ಪಡೆದುಕೊಳ್ಳಲು ಅವಕಾಶಗಳಿವೆ. ಹಲವಾರು ವರ್ಷಗಳ ಹಿಂದೆ ಶಿಫಾರಸ್ಸಿನ ಮೂಲಕ ಸರಕಾರಿ ಉದ್ಯೋಗ ಗಿಟ್ಟಿಸಿಕೊಳ್ಳಬಹುದಿತ್ತು. ಆದರೆ ಇಂದು ಸರಕಾರವು ಯಾರಿಗೂ ಅನ್ಯಾಯವಾಗದಂತೆ ಪಾರದರ್ಶಕವಾಗಿ ನೇರ ನೇಮಕಾತಿ ಮೂಲಕ ಉದ್ಯೋಗ ಅವಕಾಶಗಳನ್ನು ಒದಗಿಸಿಕೊಡುತ್ತಿದೆ. ಯುವ ಸಮುದಾಯ ಇಂತಹ ಉದ್ಯೋಗ ಮೇಳದಂತಹ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು. ಆಹಾರ ಮತ್ತು ನಾಗರಿಕೆ ಪೂರೈಕೆ ಸಚಿವ ಯು. ಟಿ. ಖಾದರ್ ಮಾತನಾಡಿ, ಉದ್ಯೋಗ ಮೇಳದಲ್ಲಿ ಭಾಗವಹಿಸಿದ ಎಲ್ಲರಿಗೂ ಉದ್ಯೋಗ ಸಿಗುತ್ತದೆ ಎಂದು ನಾವು ತಿಳಿದುಕೊಳ್ಳಬಾರದು. ಆದರೆ ಭಾಗವಹಿಸಿದ ಪ್ರತಿಯೊಬ್ಬರಿಗೂ ಉದ್ಯೋಗವಕಾಶಗಳ ಬಗ್ಗೆ ಮಾಹಿತಿ ಪಡೆದುಕೊಂಡು ಮುನ್ನಡೆಯಲು ಅವಕಾಶವಾಗುತ್ತದೆ. ಯಾವುದೇ ವಿದಾರ್ಥಿ ತಮ್ಮ ತಂದೆ ತಾಯಿಯನ್ನು ಆಶ್ರಮದಲ್ಲಿಟ್ಟು ಉನ್ನತ ಹುದ್ದೆ ಪಡೆದರೆ ಅದು ಪ್ರಯೋಜನವಿಲ್ಲ. ಉತ್ತಮ ವಾದ ಉದ್ಯೋಗದೊಂದಿಗೆ ತಂದೆ ತಾಯಿಯರನ್ನೂ ಗೌರವದಿಂದ ನೋಡಿಕೊಳ್ಳುವ ಮನೋಭಾವನೆಯನ್ನು ನಾವು ಬೆಳೆಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಮಂಗಳೂರು ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ. ಎಚ್. ಖಾದರ್, ಅಪಾರ ಜಿಲ್ಲಾಧಿಕಾರಿ ಕುಮಾರ್, ಮಂಗಳೂರು ವಿವಿ ಕುಲಸಚಿವ ಪ್ರೊ. ನಾಗೇಂದ್ರ ಪ್ರಕಾಶ್, ಪರೀಕ್ಷಾಂಗ ಕುಲಸಚಿವ ಎ. ಎಂ. ಖಾನ್, ಕೊಣಾಜೆ ಪಂಚಾಯಿತಿ ಅಧ್ಯಕ್ಷ ಶೌಕತ್ ಆಲಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ರಶೀದಾ ಬಾನು, ಮಮತಾ ಗಟ್ಟಿ, ಕೈಗಾರಿಕಾ ಸಂಸ್ಥೆಯ ಗೋಕುಲ್ ನಾಥ್, ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ್ ಕರ್ಕೇರ ಇದ್ದರು.

By suddi9

Leave a Reply

Your email address will not be published. Required fields are marked *