ಇಂಟರ್‍ ನ್ಯಾಷನಲ್  ಎನ್ವಿರಾನ್‍ಮೆಂಟ್ ಅಂಡ್ ಎಕಾಲಜಿ ಇವರ ಸಹಯೋಗದೊಂದಿಗೆ ಭಾರತೀಯ ವಿಶ್ವವಿದ್ಯಾಲಯಗಳ ಒಕ್ಕೂಟ ಇವರು ಕೊಡಮಾಡುವ “2017 ರ ಪರಿಸರ ಪ್ರಶಸ್ತಿ” ಯನ್ನು ಮೀನುಗಾರಿಕೆ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಶಿವಕುಮಾರ್ ಮಗದ ಅವರಿಗೆ ಇತ್ತೀಚೆಗೆ ಗುವಹಾಟಿಯಲ್ಲಿ ನಡೆದ ನಾಲ್ಕನೇ ಅಂತಾರಾಷ್ಟ್ರೀಯ ಪರಿಸರ ಮತ್ತು ಜೀವವೈವಿದ್ಯ ಸಮ್ಮೇಳನದಲ್ಲಿ ನೀಡಿ ಗೌರವಿಸಿದೆ.

ಸುಮಾರು ಐದು ವರ್ಷಗಳ ಕಾಲ ರಾಜ್ಯದ 258 ಹಳ್ಳಿಗಳಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಕ್ಷಾರ ಮತ್ತು ಚೌಳು ಮಣ್ಣನ್ನು ಸಂರಕ್ಷಿಸುವ ಸಲುವಾಗಿ ಸಂಶೋಧನೆ ಮಾಡಿ, ಸಂರಕ್ಷಣಾ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದ್ದಾರೆ. ಕಳೆದ ವರ್ಷದಿಂದ ತೆಂಗಿಗೆ ಭಾದಿಸುತ್ತಿರುವ ಕಪ್ಪುತಲೆಹುಳು ಮತ್ತು ಬಿಳಿಸೊಳ್ಳೆಗಳ ಜೈವಿಕ ನಿಯಂತ್ರಣ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಾಗತಿಕ ತಾಪಮಾನ, ಲೈಟ್ ಫಿಸ್ಸಿಂಗ್, ಜವಬ್ದಾರಿಯುತ ಮೀನುಗಾರಿಕೆಯ ಮತ್ತು ಅಂತರ್ಜಲ ಹೆಚ್ಚಿಸುವ ಹಿಂಗುಗುಂಡಿಗಳ ಬಗ್ಗೆ ನಿರಂತರವಾಗಿ ಸಾಮಾಜಿಕ ಅರಿವು ಮೂಡಿಸುತ್ತಿದ್ದಾರೆ.

ಶಿವಕುಮಾರ್ ಅವರು ತಮ್ಮ 25 ವರ್ಷಗಳ ಸೇವಾ ಅವಧಿಯಲ್ಲಿ 27 ವೈಜ್ಞಾನಿಕ ಪ್ರಾಯೋಜನೆಗಳು, 3364 ರೈತರು ಮತ್ತು ಅಧಿಕಾರಿಗಳಿಗೆ 43 ತರಬೇತಿ ಕಾರ್ಯಕ್ರಮಗಳು, 16 ಪುಸ್ತಕ ಮತ್ತು ಕೈಪಿಡಿಗಳು, ನೇರವಾಗಿ ರೈತರಿಗೆ ನೆರವಾಗುವಂತಹ 12 ವೈಜ್ಞಾನಿಕ ಲೇಖನಗಳು, ನೂರಕ್ಕೂ ಹೆಚ್ಚು ಜನಪ್ರಿಯ ಲೇಖನಗಳನ್ನು ಪ್ರಕಟಿಸಿ, 243 ವೈಜ್ಞಾನಿಕ ಮತ್ತು ವ್ಯೆಕ್ತಿತ್ವ ವಿಕಸನ ಭಾಷಣಗಳನ್ನು 25953 ಜನರಿಗೆ ಮಾಡಿದ್ದಾರೆ.

Environment Award

ಕಳೆದ ಇಪ್ಪತ್ತು ತಿಂಗಳಿನಿಂದ ದಕ್ಷಿಣ ಕನ್ನಡದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರೂ ಆಗಿರುವ ಡಾ. ಮಗದ ಅವರು ಕೃಷಿ ವಿಜ್ಞಾನ ಕೇಂದ್ರದ ಕಾರ್ಯವೈಖರಿ ಮತ್ತು ಕ್ಷಮತೆಯನ್ನು ಹೆಚ್ಚಿಸಿ ರೈತರ ಮೆಚ್ಚುಗೆ ಪಾತ್ರರಾಗಿದ್ದಾರೆ. ಕಳೆದ 2015 ರಲ್ಲಿ ಪಬ್ಲಿಕ್ ರಿಲೇಷನ್ ಕೌನ್ಸಿಲ್ ಆ ಇಂಡಿಯಾ ನೀಡುವ ಚಾಣಕ್ಯ ಪ್ರಶಸ್ತಿಗೆ ಭಾಜನರಾಗಿದ್ದರು. ಶಾಲಾ ಮಕ್ಕಳಿಗೆ ಕೃಷಿ ಬೇಸಿಗೆ ಶಿಬಿರ, ಕಾಲೇಜು ವಿದ್ಯಾರ್ಥಿಗಳನ್ನು ಬತ್ತದ ನಾಟಿ ಮತ್ತು ಕಟಾವಿಗೆ ಬಳಕೆ, ಮಳೆಗಾಲದಲ್ಲಿ ಡ್ರೋನ್ ಬಳಸಿ ಕಾಡುಮರಗಳ ಬೀಜ ಬಿತ್ತನೆ ಕಾರ್ಯಕ್ರಮಗಳು ಇವರು ಕೈಗೊಂಡ ವಿನೂತನ ಮತ್ತು ಕ್ರಿಯಾಶೀಲ ಕಾರ್ಯಕ್ರಮಗಳು. ಕರಾವಳಿ ಜಿಲ್ಲೆಗಳ ಜೌಗು ಮತ್ತು ಆಮ್ಲೀಯ ಮಣ್ಣಿನ ಸಮಸ್ಯೆಯನ್ನು ಮನಗಂಡು ಸಂಶೋಧನೆ ನಡೆಸುವ ಸಲುವಾಗಿ ಸಮಸ್ಯಾತ್ಮಕ ಮಣ್ಣುಗಳ ಆನ್ವಯಿಕ ಸಂಶೋಧನಾ ಕೇಂದ್ರ ಎಂಬ ಹೊಸ ಸಂಸ್ಥೆಯನ್ನು ಮೀನುಗಾರಿಕೆ ಮಹಾವಿದ್ಯಾಲಯದ ಆವರಣದಲ್ಲಿ ಸ್ಥಾಪಿಸುತ್ತಿದ್ದಾರೆ. ದೇಶವ್ಯಾಪಿ ಸಂಚರಿಸಿ ತಮ್ಮ ಉಚಿತ ಬಾಷಣಗಳ ಮೂಲಕ ಯುವಕರನ್ನು ಕೃಷಿ ಮತ್ತಿ ಕೃಷಿಗೆ ಸಂಬಂಧಿಸಿದ ವಿಜ್ಞಾನದೆಡೆಗೆ ಆಕರ್ಷಿಸುತ್ತಿದ್ದಾರೆ.

By Suddi9

Leave a Reply

Your email address will not be published. Required fields are marked *