ಕೈಕಂಬ: ರಾಜೇಶ್ ನಾಯಕ್ ಮಾಲಕತ್ವದ ಒಡ್ಡೂರು ಫಾರ್ಮ್ ಮತ್ತು ಅರುಣ್ಯ ಫೌಂಡೇಶನ್(ರಿ) ಮಂಗಳೂರು ಜಂಟಿ ಆಶ್ರಯದಲ್ಲಿ ಗಂಜಿಮಠದ ಒಡ್ಡೂರು ಫಾರ್ಮಿನಲ್ಲಿ ಆಯೋಜಿಸಲಾದ `ಕೃಷಿ ಸಂಗಮ’-2018ರ ಸಮಾರೋಪ ಸಮಾರಂಭ ಭಾನುವಾರ ನಡೆಯಿತು.
ಈ ಸಂದರ್ಭದಲ್ಲಿ ಡ್ರೋನ್ ಪ್ರಾತ್ಯಕ್ಷಿಕೆ ನಡೆಯಿತು. ವೈಮಾನಿಕ ಭೂ-ಸರ್ವೇಗಾಗಿ ಬಳಸಲಾಗುತ್ತಿದ್ದ ಹಾರುವ ಉಪಕರಣದಲ್ಲೇ ಕೃಷಿ ತೋಟಗಳ ಸರ್ವೇ ನಡೆಸಲು ವಿಶೇಷ ತಂತ್ರಜ್ಞಾನ ಬಳಸಿ ಸಿದ್ಧಪಡಿಸಲಾದ ಉಪಕರಣ ಇದಾಗಿದೆ. ಇದು ಆಕಾಶದೆತ್ತರಕ್ಕೆ ಹಾರಿ ಅರ್ಧ ತಾಸಿನೊಳಗೆ 160 ಎಕ್ರೆ ತೋಟದ ಸಮೀಕ್ಷೆ ನಡೆಸಿ, ತೋಟದ ಆಗುಹೋಗುಗಳು, ಸಮಸ್ಯೆಗಳು ಮತ್ತು ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಗ್ರ ಡಾಟಾ ನೀಡುತ್ತದೆ. ಈ ಮೂಲಕ ರೈತ ಸುಧಾರಿತ ಕೃಷಿ ಮಾಡಲು ಇದು ಸಹಕಾರಿಯಾಗಿದೆ.
ಈ ಯಂತ್ರವನ್ನು ಮಂಗಳೂರಿನ `ಕ್ವಾಡ್ ಪರ್ಸ್ಫೆಕ್ಟಿವ್’ ಸಂಸ್ಥೆಯ ಅನೂಜ್ ಮಸ್ಕರೇನಸ್, ಕೆವಿನ್ ಸ್ಟುವರ್ಟ್, ಮಾನಿಕ್ ಮಸ್ಕರೇನಸ್ ಮತ್ತು ಅಲಿಸ್ಟರ್ ಜಾರ್ಜ್ ಫೆರಿಸ್ ಆವಿಷ್ಕಾರಗೊಳಿಸಿದ್ದಾರೆ.
ಬ್ಯಾಟರಿ ಚಾಲಿತ ಈ ಹಾರುವ ಉಪಕರಣವನ್ನು ಭೂಮಿಯಿಂದ ರಿಮೋಟ್ ಕಂಟ್ರೋಲ್ ಮೂಲಕ ನಿಯಂತ್ರಿಸಲಾಗುತ್ತದೆ. ಸಾಕಷ್ಟು ಎತ್ತರದಲ್ಲಿ ಹಾರಾಡುವ ಈ ಉಪಕರಣ ಹಕ್ಕಿಗಳು ಹಾಗೂ ಮರಮಟ್ಟು ತಪ್ಪಿಸಿ ಹಾರಾಡಲು ಮೊದಲೇ ಐಪೋನಿನಲ್ಲಿ ವ್ಯವಸ್ಥೆ ಮಾಡಬೇಕಾಗುತ್ತದೆ. ಪ್ರಾತ್ಯಕ್ಷಿಕೆಯನ್ನು ಅರುಣ್ಯ ಫೌಂಡೇಶನಿನ ಶ್ರೀನಿವಾಸ್ ಪೆಜತ್ತಾಯ ನಿರೂಪಿಸಿದರು.
