ಶ್ರವಣಬೆಳಗೊಳ: ಫೆಬ್ರವರಿಯಲ್ಲಿ ಜರಗಲಿರುವ ಮಹಾಮಸ್ತಕಾಭಿಷೇಕ ಮಹೋತ್ಸವದ ಅಂಗವಾಗಿ ನಿರ್ಮಾಣವಾಗುತ್ತಿರುವ ತಾತ್ಕಾಲಿಕ ಉಪನಗರಗಳಿಗೆ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಮಂಗಳವಾರ ಪರಿಶೀಲನೆ ನಡೆಸಿದರು.
ಈ ವೇಳೆ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಜಿಯವರು ಮಾತನಾಡಿ, ಹಿಂದಿನ ಎಲ್ಲಾ ಮಹಾಮಸ್ತಮಕಾಭಿಷೇಕಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿದಿಲ್ಲ, ಈ ಬಾರಿಯು ಅದೇ ಸಹಕಾರವನ್ನು ನೀಡಬೇಕೆಂದು ಸ್ವಾಮಿಜಿಯವರು ಪೋಲಿಸ್ ಮಹಾ ನಿರ್ದೇಶಕಿ ನೀಲಮಣಿ ರಾಜು ಅವರಿಗೆ ಮನವಿ ಮಾಡಿದರು.
ಬಳಿಕ ನೀಲಮಣಿ ರಾಜು ಮಾತನಾಡಿ, ಯಾತ್ರಾರ್ಥಿಗಳಿಗೆ ಕನ್ನಡ, ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಮಾಹಿತಿ ರವಾನೆ, ಭದ್ರತೆಗಾಗಿ ಆಧುನಿಕ ಯಂತ್ರೊಪಕರಣಗಳಾದ ಸಿಸಿ ಕ್ಯಾಮರಾ, ಬೈನಾಕ್ಯುಲರ್ ಅಳವಡಿಕೆ ವ್ಯವಸ್ಥೆ ಮಾಡಲಾಗುವುದು, ಬೆಂಗಳೂರಿನಿಂದ ಸಂಚಾರಿ ಪೋಲಿಸ್ ಸಿಬ್ಬಂದಿಗಳನ್ನು ಕರೆ ತರಲಾಗುವುದು, ಅಗತ್ಯಕ್ಕೆ ತಕ್ಕಂತೆ ಗಣ್ಯಾತಿಗಣ್ಯರ ಸಮಾರಂಭಗಳಿಗೆ ಭದ್ರತೆ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಯ ಹೆಚ್ಚುವರಿ ಪೋಲಿಸ್ ಮಹಾ ನಿರ್ದೇಶಕ ಕಮಲ್ ಪಂಥ್, ದಕ್ಷಿಣ ವಲಯ ಐ.ಜಿ.ಪಿ ವಿಪುಲ್ ಕುಮಾರ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರವಾಡ್, ವೃತ್ತ ನಿರೀಕ್ಷಕ ಕೆ.ಎಂ. ಹರೀಶ್ ಬಾಬು ಹಾಗೂ ಇತರ ಸಿಬ್ಬಂದಿಗಳು ಹಾಜರಿದ್ದರು.

