ಬಂಟ್ವಾಳ: ಬಿ.ಸಿ.ರೋಡಿನಲ್ಲಿ ನಿರ್ಮಾಣಗೊಂಡಿರುವ ಕಾಂಗ್ರೇಸ್ ಭವನ ಕಟ್ಟಡದ ದಾಖಲೆಪತ್ರ ಸಹಿತ ಬೀಗದ ಕೀಲಿ ಯನ್ನು ಕೆಪಿಸಿಸಿ ಪ್ರಮುಖರಿಗೆ ಹಸ್ತಾಂತರಿಸಿರುವುದಾಗಿ ಕೆಪಿಸಿಸಿ ಕಾರ್ಯದರ್ಶಿ ಅಶ್ವನಿ ಕುಮಾರ್ ರೈ ತಿಳಿಸಿದ್ದಾರೆ.ಶನಿವಾರ ಬಿ.ಸಿ.ರೋಡಿನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೇಸ್ ಭವನ ಕಟ್ಟಡದ ಬಗ್ಗೆ ಇರುವ ಗೊಂದಲಗಳನ್ನು ನಿವಾರಿಸುವ ಸಲುವಾಗಿ, ಪತ್ರಿಕಾಗೋಷ್ಠಿ ಕರೆದಿರುವುದಾಗಿ ತಿಳಿಸಿದರು.

ಆರು ವರ್ಷದ ಹಿಂದೆ ಕಟ್ಟಡ ನಿರ್ಮಾಣಕ್ಕೆ ಸಮಿತಿ ರಚನೆ ಮಾಡಲಾಗಿತ್ತು. ನನ್ನ ಅನುಪಸ್ಥಿತಿಯಲ್ಲಿ ನನ್ನನ್ನು ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷನಾಗಿ ಆಯ್ಕೆ ಮಾಡಲಾಗಿತ್ತು. ಕೊಟ್ಟ ಜವಬ್ದಾರಿಯನ್ನು ನಾನು ಸಮರ್ಥವಾಗಿ ನಿಭಾಯಿಸಿದ್ದು, 3 ವರ್ಷಗಳ ಹಿಂದೆಯೇ ಕಟ್ಟಡ ನಿರ್ಮಾಣದ ಕಾರ್ಯ ಪೂರ್ಣಗೊಂಡಿತ್ತು. ವಿವಿಧ ಕಾರಣಗಳಿಂದ ಉದ್ಘಾಟನೆಯಾಗದೆ ಬಾಕಿ ಉಳಿದಿದೆ. ಸುಸಜ್ಜಿತ ಕಟ್ಟಡ ನಿರ್ಮಾಣ ಕಾರ್ಯ ಮುಗಿದಿರುವ ಹಿನ್ನೆಲೆಯಲ್ಲಿ ಕಟ್ಟಡ ಕುರಿತ ದಾಖಲೆ ಪತ್ರ ಹಾಗೂ ಬೀಗದ ಕೀಲಿ ಯನ್ನುಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ ಗುಂಡೂರಾವ್, ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಹಸ್ತಾಂತರಿಸಿರುವುದಾಗಿ ಅವರು ತಿಳಿಸಿದರು.
ಕಳೆದ 46 ವರ್ಷಗಳ ಹಿಂದೆಯೇ ಕಾಂಗ್ರೆಸ್ ಹೆಸರಿನಲ್ಲಿ ಪಕ್ಷದ ಮುಖಂಡರು ಕಾದಿರಿಸಿದ್ದ ಈ ಬೆಲೆ ಬಾಳುವ 6 ಸೆಂಟ್ಸ್ ಜಮೀನಿನಲ್ಲಿ ಸ್ವಂತ ಕಾಂಗ್ರೆಸ್ ಭವನ ನಿರ್ಮಿಸಲು ಸಾಧ್ಯವಾಗಿರಲಿಲ್ಲ. ಸಮಿತಿ ರಚನೆ ಹಿನ್ನೆಲೆಯಲ್ಲಿ ಕಳೆದ ಲೋಕಸಭಾ ಚುನಾವಣೆಗೆ ಮೊದಲೇ ಒಟ್ಟು ರೂ 26.5ಲಕ್ಷ ವೆಚ್ಚದಲ್ಲಿ “ಕಾಂಗ್ರೆಸ್ ಭವನ’ ನಿರ್ಮಿಸಲಾಗಿದೆ ಈ ಪೈಕಿ ಕಾಂಗ್ರೆಸ್ ಮುಖಂಡರು ಮತ್ತು ದಾನಿಗಳಿಂದ ರೂ 12.10ಲಕ್ಷ ಮಾತ್ರ ದೇಣಿಗೆ ಸಂಗ್ರಹಗೊಂಡಿದೆ. ಉಳಿದ ವೆಚ್ಚವನ್ನು ಸ್ವತಃ ತಾನೇ ಭರಿಸಿರುವುದಾಗಿ ಅವರು ತಿಳಿಸಿದರು.
ಕೆಳ ಅಂತಸ್ತಿನ ಕೊಠಡಿಗಳಿಂದ ಬಾಡಿಗೆ ರೂಪದಲ್ಲಿ ಪಕ್ಷಕ್ಕೆ ಆದಾಯವೂ ನಿರೀಕ್ಷಿಸಬಹುದಾಗಿದ್ದು, ಪಕ್ಷ ಸಂಘಟನೆಯ ಕಾರ್ಯ ಈಕಟ್ಟಡದಲ್ಲಿ ಯಶಸ್ವಿಯಾಗಿ ನಡೆಯಲಿ ಎಂದವರು ಹಾರೈಸಿದರು.
*ನಾಯಕರು ಜವಬ್ದಾರಿ ಮರೆಯಬಾರದು
ಕಾಂಗ್ರೇಸ್ ಪಕ್ಷದಲ್ಲಿ ತನ್ನನ್ನು ಸ್ಥಳೀಯವಾಗಿ ಕಡೆಗಣಿಸಿರುವ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ ಅಶ್ವನಿಕುಮಾರ್ ರೈ ಯವರು, ಆದರೂ ತಾನು ಪಕ್ಷ ನಿಷ್ಠೆಯನ್ನು ಬಿಟ್ಟಿಲ್ಲ. ಪಕ್ಷದಲ್ಲಿ ನನ್ನ ಅಗತ್ಯ ವಿದ್ದಾಗೆಲ್ಲಾ ಅದನ್ನು ನಿರ್ವಹಿಸುತ್ತಿದ್ದೇನೆ, ನನ್ನ ಅಗತ್ಯ ಇಲ್ಲದವರ ಜೊತೆ ನಾನಾಗಿ ಹೋಗಿಲ್ಲ, ಹೋಗುವುದೂ ಇಲ್ಲ ಎಂದರು. ಕಾಂಗ್ರೇಸ್ ತೊರೆದು ಬಿಜೆಪಿ ಸೇರ್ಪಡೆಗೊಳ್ಳುತ್ತಿರುವ ಕಾಂಗ್ರೇಸ್ ನಾಯಕರ ಬಗ್ಗೆ ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಅವರು, ಇಂತಹಾ ಸಮಸ್ಯೆಗಳಾದಾಗ ಪಕ್ಷದ ನಾಯಕರು, ಅಧಿಕಾರದಲ್ಲಿರುವವರು ಭಿನ್ನಾಭಿಪ್ರಾಯಗಳನ್ನು ಸರಿಮಾಡಬೇಕು. ಅದನ್ನು ಬಿಟ್ಟು ಜವಬ್ದಾರಿ ಮರೆಯಬಾರದು ಎಂದು ಕಿವಿಮಾತು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೇಸ್ ಪ್ರಮುಖರಾದ ಜಯರಾಮ ಸಾಮಾನಿ. ನೋಣಯ್ಯ ಪೂಜಾರಿ, ಬೂಡಾ ಅಧ್ಯಕ್ಷ ಸದಾಶಿವ ಬಂಗೇರ, ಉಮ್ಮರ್ ಮಂಚಿ, ರೋಶನ್, ಬಾಲಚಂದ್ರ ಶೆಟ್ಟಿ, ಎಫ್.ಹುಸೇನ್, ಸ್ಟೀಫನ್, ಬಾಲಕೃಷ್ಣ ಶೆಟ್ಟಿ, ವೆಂಕಟರಮಣ ಪೈ, ಹನೀಫ್, ಇಕ್ಬಾಲ್, ಸಮೀರ್, ಜಬ್ಬಾರ್ ಮೊದಲಾದವರು ಉಪಸ್ಥಿತರಿದ್ದರು.
