ಮೂಡುಬಿದಿರೆ: ಕಲಾ ಸೌರಭ ಸಂಗೀತ ಮತ್ತು ನೃತ್ಯ ಕೇಂದ್ರ ಮೂಡುಬಿದಿರೆ ಇದರ ಪಂಚಮ ವರ್ಷದ ಅಂಕುರಾರ್ಪಣಾ ಸಮಾರಂಭವು ಸಮಾಜ ಮಂದಿರದಲ್ಲಿ ನಡೆಯಿತು.
ವಿದ್ವಾನ್ ಜಿ.ಜೆ ಜಗದೀಶ್ ಅವರು ದೀಪ ಬೆಳಗಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆಯನ್ನು ನೀಡಿದರು. ಕಾಟಿಪಳ್ಳ ಸರಕಾರಿ ಪ.ಪೂ ಕಾಲೇಜಿನ ಉಪ ಪ್ರಾಂಶುಪಾಲ ಬಾಬು ಪಿ.ಎಂ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಕಲಿಯುವ ಹಂಬಲ, ಏಕಾಗ್ರತೆ ಮತ್ತು ಕಠಿಣ ಪರಿಶ್ರಮವಿದ್ದರೆ ನಾವು ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ. ಶಿಕ್ಷಣ, ಸಂಗೀತ ಅಥವಾ ಯಾವುದೇ ಒಂದು ವಿದ್ಯೆ ಸಾಧಕರ ಸೊತ್ತು ಹೊರತು ಅದು ಸೋಮಾರಿಗಳ ಸೊತ್ತಲ್ಲ ಇದನ್ನು ಅರಿತುಕೊಂಡು ಪ್ರಯತ್ನಿಸಿದರೆ ಸಾಧನೆಗೆ ಯಶಸ್ಸು ಸಿಗುತ್ತದೆ ಎಂದು ಹೇಳಿದರು.
ಉಪನ್ಯಾಸಕ ಶಿವಪ್ರಸಾದ್ ಹೆಗ್ಡೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ವಿದುಷಿ ಲಾವಣ್ಯ ಜಗದೀಶ್ ಉಪಸ್ಥಿತರಿದ್ದರು. ಸಂಗೀತ ಪ್ರಭು ಸ್ವಾಗತಿಸಿದರು. ಅಭಿಲಾಷ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಕಲಾ ಸೌರಭದ ವಿದ್ಯಾರ್ಥಿಗಳಿಂದ ವಯೋಲಿನ್, ಕರ್ನಾಟಕ ಸಂಗೀತ ಕಾರ್ಯಕ್ರಮ ಹಾಗೂ ಭರತ ನಾಟ್ಯ ಪ್ರದರ್ಶನಗೊಂಡಿತು.

