ಮೂಡುಬಿದಿರೆ: ಮಡಿವಾಳ ಸಮಾಜ ಸೇವಾ ಸಂಘ ಮೂಡುಬಿದಿರೆ ಇದರ ದಶಮಾನೋತ್ಸವ ಪ್ರಯುಕ್ತ ಮಡಿವಾಳರ ಸಮಾವೇಶ ನವೆಂಬರ್ 5ರಂದು ಇಲ್ಲಿನ ಪದ್ಮಾವತಿ ಕಲಾ ಮಂದಿರದಲ್ಲಿ ನಡೆಯಲಿದೆಎಂದು ಪ್ರಧಾನ ಕಾರ್ಯದರ್ಶಿ ಸಾಣೂರು ಸತೀಶ್ ಸಾಲ್ಯಾನ್ ಸುದ್ದಿಗೋಷ್ಠಿ ತಿಳಿಸಿದ್ದಾರೆ.
ನ..5ರಂದು ಬೆಳಗ್ಗೆ 10ಗಂಟೆಗೆ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಶ್ರೀಕ್ಷೇತ್ರ ಕರಿಂಜೆಯ ಶ್ರೀಮುಕ್ತಾನಂದ ಸ್ವಾಮೀಜಿ, ಬೆಂಗಳೂರು ಮಡಿವಾಳ ಮಾಚಿದೇವ ಗುರುಪೀಠ ಟ್ರಸ್ಟ್ ಶ್ರೀ ಶಿವಯೋಗಾನಂದಪಯರಿ ಮಹಾಸ್ವಾಮೀಜಿ, ಚಿತ್ರದುರ್ಗ ಮಡಿವಾಳ ಮಾಚಿದೇವ ಮಹಾಸಂಸ್ಥಾನ ಮಠದ(ಮಡಿವಾಳ ಗುರುಪೀಠ) ಶ್ರೀಬಸವ ಮಾಚೀದೇವ ಮಹಾಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಡೆಪ್ಯುಟಿ ಇನ್ಸ್ಪೆಕ್ಟ್ ಜನರಲ್ ಆಫ್ ಪೊಲೀಸ್(ಆಂತರಿಕ ಭದ್ರತೆ) ಬೆಂಗಳೂರು ಹೆಚ್.ಎಸ್ ವೆಂಕಟೇಶ್ ಸಮಾವೇಶ ಉದ್ಘಾಟಿಸಲಿರುವರು. ಕರ್ನಾಟಕ ರಾಜ್ಯ ಮಡಿವಾಳ ಸಂಘದ ಅಧ್ಯಕ್ಷ ಸಿ.ನಂಜಪ್ಪ ಅಧ್ಯಕ್ಷತೆವಹಿಸಲಿದ್ದು, ಮಡಿವಾಳ ಸಮುದಾಯ ವಿವಿಧ ಸಂಘಗಳ ಪದಾಧಿಕಗಳು ಮುಖ್ಯ ಅತಿಥಿಗಳಾಗಿರುವರು. ಬಳಿಕ ವಿವಿಧ ಗೋಷ್ಠಿಗಳು ನಡೆಯಲಿವೆ.
ಸಾಯಂಕಾಲ 3.30ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಕ್ಕು ಉಡುಪಿ ದೊಡ್ಡಣಗುಡ್ಡೆ ಶ್ರೀದುರ್ಗಾ ಆದಿಶಕ್ತಿ ಕ್ಷೇತ್ರದ ಶ್ರೀರಮಾನಂದ ಗುರೂಜಿ ಆಶೀರ್ವಚನ ನೀಡಲಿದ್ದಾರೆ.
ಸಮಾವೇಶದ ಮುಖಾಂತರ ಹಕ್ಕೋತ್ತಾಯ:
ಸೀಮಿತ ಜನಸಂಖ್ಯೆಯನ್ನು ಹೊಂದಿರುವ ಮಡಿವಾಳ ಸಮಾಜವನ್ನು ಪ್ರವರ್ಗ 2ಎದಿಂದ ಪರಿಶಿಷ್ಟ ಜಾತಿಗೆ ಸೇರಿಸಬೇಕೆಂದು ಹೋರಾಟ ನಡೆಸುತ್ತಾ ಬಂದರೂ ಸರಕಾರ ಇನ್ನೂ ಸ್ಪಂದಿಸಿಲ್ಲ. ಹೀಗಾಗಿ ನಮ್ಮ ಸಮಾಜದವರು ಸಂವಿಧಾನದತ್ತವಾಗಿ ಸಿಗಬೇಕಾದ ಎಲ್ಲ ಸವಲತ್ತುಗಳಿಂದ ವಂಚಿತರಾಗಿದ್ದಾರೆ. ದೇಶದ 22 ರಾಜ್ಯಗಳಲ್ಲಿ ನಮ್ಮ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಿದರೂ ಕರ್ನಾಟಕ ಸರಕಾರ ಇನ್ನೂ ನಮ್ಮ ಮನವಿಗೆ ನ್ಯಾಯ ಕೊಟ್ಟಿಲ್ಲ. ರಾಜ್ಯದ ಹಲವೆಡೆ ನಮ್ಮನ್ನು ಅಸ್ಪಶ್ರ್ಯರಂತೆ ಕಾಣುತ್ತಿದ್ದಾರೆ ಎಂದು ಆರೋಪಿಸಿದರು.
ನ.5ರಂದು ಮೂಡುಬಿದಿರೆಯಲ್ಲಿ ನಡೆಯುವ ಸಮಾವೇಶದಲ್ಲಿ ರಾಜ್ಯದ ಎಲ್ಲಾ ತಾಲ್ಲೂಕು ಕೇಂದ್ರದಿಂದ ಮಡಿವಾಳ ಸಮಾಜದ ಪ್ರತಿನಿಧಿಗಳು ಒಂದೇ ಸೂರಿನಡಿ ಸೇರಿ ಹಕ್ಕೋತ್ತಾಯ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು. ನಮ್ಮ ಮನವಿಗೆ ಸರ್ಕಾರ ಸ್ಪಂದಿಸದಿದ್ದಲ್ಲಿ ಮುಂದಿನ ಚುನಾವಣೆಯುಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಅವರು ಎಚ್ಚರಿಸಿದರು.
5ರಂದು ದಿನಪೂರ್ತಿ ನಡೆಯುವ ಮಡಿವಾಳ ಸಮಾಜದ ಸಮಾವೇಶದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ, ವಿಚಾರಗೋಷ್ಠಿಗಳು ನಡೆಯಲಿವೆ. ಸಮಾಜದ ಮೂವರು ಸ್ವಾಮೀಜಿಗಳು ಹಾಗೂ ಅನೇಕ ಮುಖಂಡರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದರು. ಸಂಘದ ಅಧ್ಯಕ್ಷ ಗಣೇಶ್ ಸಾಲಿಯಾನ್, ಯುವ ಘಟಕದ ಅಧ್ಯಕ್ಷ ಪ್ರತೀಕ್ ಸಾಲಿಯಾನ್, ಮಹಿಳಾ ಘಟಕದ ಅಧ್ಯಕ್ಷೆ ಸುಜಾತ ಉಪಸ್ಥಿತರಿದ್ದರು.
