ಕೈಕಂಬ:ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಅಡ್ಡೂರು-ಪೊಳಲಿ ಕಿರುಸೇತುವೆ ಬಳಿ ಪಲ್ಗುಣಿ ನದಿಗೆ ಅಂಧ್ರಮೂಲದ ಕೂಲಿ ಕಾರ್ಮಿಕನೋರ್ವ ಗುರುವಾರ ಸಂಜೆ ನದಿಗೆ ಹಾರಿದ್ದು, ಶುಕ್ರವಾರ ಆತನ ಶವ ಪತ್ತೆಯಾಗಿದೆ.
ಅಂಧ್ರ ಪ್ರದೇಶ ಮೂಲದ, ಅಲೆಮಾರಿ ಜನಾಂಗಕ್ಕೆ ಸೇರಿದ ಸುರೇಶ್(35) ಎಂಬಾತ ಗುರುಪುರ ಹಾಗೂ ಪೊಳಲಿ ಪರಿಸರದಲ್ಲಿ ತನ್ನ ಕುಟುಂಬದ ಜೊತೆ ವಾಸವಾಗಿದ್ದು ಕೂಲಿ ಕೆಲಸ ಮಾಡುತ್ತಿದ್ದ. ವಿಪರೀತವಾಗಿ ಕುಡಿತದ ಚಟ ಹೊಂದಿದ್ದ ಈತ, ಕುಟುಂಬದ ಸದಸ್ಯರ ಜೊತೆ ಅವಾಗವಾಗ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಗುರುವಾರ ಸಂಜೆ ಅಡ್ಡೂರು-ಪೊಳಲಿ ಕಿರುಸೇತುವೆ ಬಳಿ ನಡೆದುಕೊಂಡು ಬರುತ್ತಿದ್ದಾಗ ಆತ ತನ್ನ ಹೆಂಡತಿ ಜಯಮಾಲ ಇವರ ಎದುರಿನಲ್ಲೆ ನದಿಗೆ ಹಾರಿದ್ದ. ಸ್ಥಳೀಯರು ಬಜಪೆ ಠಾಣೆಗೆ ಹಾಗೂ ಅಗ್ನಿಶಾಮಕ ದಳಕ್ಕೆ ದೂರು ನೀಡಿದ್ದಾರೆ ಅಗ್ನಿ ಶಾಮಕದಳದವರು ಎಷ್ಟು ಹುಡುಕಾಡಿದರು ಆತನ ಶವವು ಶುಕ್ರವಾರ ಮಧ್ಯಾಹ್ನದ ವರೆಗೆ ಪತ್ತೆಯಾಗಿಲ್ಲ. ಸ್ಥಳೀಯ ಯುವಕರು ನದಿಯಲ್ಲಿ ಹುಡುಕಿದಾಗ ಆತನ ಶವವು ಪತ್ತೆಯಾಗಿದೆ. ಬಜ್ಪೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತಪಟ್ಟ ಸುರೇಶ್ಗೆ ಪತ್ನಿ ಜಯಾಮಾಲ ಹಾಗೂ ಇಬ್ಬರು ಮಕ್ಕಳಿದ್ದಾರೆ.

