ಪಡುಬಿದ್ರಿ : ಜೀವನೋತ್ಸಾಹ ಬತ್ತಿದ ಯಾವನೇ ಆಗಲಿ, ಒಮ್ಮೆ ಇಲ್ಲಿಗೆ ಭೇಟಿ ನೀಡಿ ಮಕ್ಕಳನ್ನು-ಮಕ್ಕಳ ಹೆತ್ತವರನ್ನು ಜೊತೆಯಾಗಿ ನಡೆಸುವ ಕೌಟುಂಬಿಕ ಜೀವನ ನೋಡಿದರೆ ಸಾಕು. ಬದುಕು ಮತ್ತೆ ಚಿಗುರುವ ಭರವಸೆ ಹೊಂದುವ ಸಾಧ್ಯ ಇದೆ.

angavykalya-4-family-115

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಬೋರ್ಗಲ್ ಗುಡ್ಡೆ ಗಂಟುಕ್ಕು ದರ್ಕಾಸ್ ಮನೆಯ ಶೇಖರ ಸಾಲಿಯಾನ್, ಜ್ಯೋತಿ ಸಾಲಿಯಾನ್ ದಂಪತಿ ತಮ್ಮ ಅಂಗವಿಕಲ್ಯ ಮಕ್ಕಳಾದ ಪ್ರಜ್ವಲ್ (19) ಮತ್ತು ಪ್ರತೀಕ್ಷಾ (17) ಅವರ ಜೀವನವನ್ನು ಉನ್ನತ ಮಟ್ಟಕ್ಕೇರಿಸುವಲ್ಲಿನ ಧೃಢವಾದ ನಂಬಿಕೆಯನ್ನೇ ಮೂಲಮಂತ್ರವನ್ನಾಗಿಸಿ ನಡೆಸುವ ಹೆಣಗಾಟ ಯಾರನ್ನೇ ಆಗಲಿ ಕಣ್ಣು ತೆರೆಸುವ ಕುಟುಂಬವಾಗಿದೆ.

angavykalya-111

ಆಶಾ ಗೋಪುರ ಕುಸಿದು ಬಿದ್ದ ಅನುಭವ :
ಮೊದಲೇ ಬಡತನದ ಕುಟುಂಬ. ರಕ್ತ ಸಂಬಂಧಿಯೊಳಗಿನ ವಿವಾಹ ಬಂಧನ. ಮಕ್ಕಳು ಹುಟ್ಟಿದಾಗ ಮುಗಿಲೆತ್ತರದ ನಿರೀಕ್ಷೆಗಳು. ಆದರೆ ಮಕ್ಕಳು ಬೆಳೆಯುತ್ತಿರುವಂತೆ ಆಶಾಗೋಪುರ ಕುಸಿದು ಬಿದ್ದ ಅನುಭವ. ಆದರೂ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಲು ಹರಸಾಹಸ ಪಡುತ್ತಿರುವ ಹೆತ್ತವರು. ಅಂಗವೈಕಲ್ಯದೊಂದಿಗೆ ಬಡತನ, ಈ ಮಧ್ಯೆ ವಿದ್ಯೆ ಕಲಿಯುವ ಅಧಮ್ಯ ಉತ್ಸಾಹದ ಮಕ್ಕಳ ಆಶೋತ್ತರ ಈಡೇರಿಸುವ ಹೆತ್ತವರ ಸ್ಥಿತಿ ಅಯೋಮಯವಾಗಿದೆ.

angavykalya-114

ವೈದ್ಯರು ಕೈಚೆಲ್ಲಿದರು :
ಈ ಇಬ್ಬರೂ ಮಕ್ಕಳೂ ಸಣ್ಣವರಿದ್ದಾಗ ತಂದೆ ತಾಯಿ ಶಕ್ತಿ ಸಂಪನ್ನರಾಗಿದ್ದರು. ನಿರೀಕ್ಷೆಗಳಿತ್ತು. ಎಲ್ಲೆಂದರಲ್ಲಿ ಎತ್ತಿಕೊಂಡೇ ಸಾಗುತ್ತಾ ಆರೈಕೆ ಮಾಡಿದ್ದರು. ಇತರ ಮಕ್ಕಳಂತಾಗಲು ವೈದ್ಯಕೀಯ ಚಿಕಿತ್ಸೆಗಾಗಿ ಬೆಂಗಳೂರು, ಮಂಗಳೂರು, ಅಂಕೋಲ, ಮಣಿಪಾಲ ಮತ್ತಿತರೆಡೆಗಳೆಲ್ಲಾ ಸಾಗಿ ಸಾದ್ಯವಾದಷ್ಟು ಪ್ರಯತ್ನ ಪಟ್ಟಿದ್ದರು. ಆದರೆ ವೈದ್ಯರು ಕೈಚೆಲ್ಲಿದರು ಎಂದು ಬೇಸರ ವ್ಯಕ್ತ ಪಡಿಸುತ್ತಾರೆ ಹೆತ್ತವರು. ಈಗ ಮಕ್ಕಳು ಬೆಳೆದಿದ್ದಾರೆ. ಹೆತ್ತವರು ಹರೆಯದಿಂದ ಶಕ್ತಿಕುಂದಿದ್ದಾರೆ. ನಿರೀಕ್ಷೆಗಳಿಲ್ಲವಾಗಿದೆ. ಶಿಕ್ಷಣವೇ ತಮ್ಮ ಮಕ್ಕಳ ದಾರಿದೀಪವಾಗಲಿದೆ ಎಂಬ ಆಶಾಭಾವನೆ ಇರಿಸಿಕೊಂಡಿದ್ದಾರೆ.

angavykalya-116

ಮಕ್ಕಳ ಬದುಕನ್ನು ಕಟ್ಟಲು ಹೆಣಗಾಟ :
ಕಾಲುಗಳು ಬಲಹೀನಗೊಂಡಿದ್ದು, ಉಚ್ಛಾರಗಳು ಅಸ್ಪಷ್ಟವಾಗಿದ್ದು, ಕೈಗಳು ನಿಯಮಿತವಾಗಿ ಕೆಲಸ ಮಾಡುತ್ತಿದ್ದು, ಶೇ. 80 ರಷ್ಟು ಅಂಕವಿಕಲತೆಯೊಂದಿಗೆ ಮನೆಯೊಳಗೆ ತೆವಳುತ್ತಾ ಸಾಗುವ ತನ್ನ ಇಬ್ಬರು ಮಕ್ಕಳ ಎಲ್ಲಾ ಬೇಕು ಬೇಡಗಳನ್ನು ಪೂರೈಸಲು ತಾಯಿ ಜ್ಯೋತಿ ಸಾಲಿಯಾನ್ ರಾತ್ರಿ ಮಾತ್ರ ಬೀಡಿ ಕಟ್ಟುತ್ತಾರೆ. ತಂದೆ ಶೇಖರ ಸಾಲಿಯಾನ್ ಕಂಪೆನಿಯ ಕೆಲಸ ಬಿಟ್ಟು ಊರಿನ ದೈವಸ್ಥಾನಗಳಲ್ಲಿ ಚಾಕರಿ ಮಾಡುತ್ತಾ ತಮ್ಮ ಬದುಕಿನ ಜೊತೆ ಮಕ್ಕಳ ಬದುಕನ್ನು ಕಟ್ಟಲು ಹೆಣಗಾಡುತ್ತಿದ್ದಾರೆ. ಅಂಗವೈಕಲ್ಯ ಮಕ್ಕಳ ಔಷಧಿ, ಶಿಕ್ಷಣಕ್ಕಾಗಿ ತಿಂಗಳೊಂದರ ಕನಿಷ್ಠ 10 ಸಾವಿರ ಖರ್ಚು ಇದೆ. ಈ ತೊಳಲಾಟದ ನಡುವೆಯೇ ಮಕ್ಕಳಿಗೆ ವಿಶೇಷ ಚೇತನರ ಕೋಟಾದಡಿ ಏನಾದರೂ ನೌಕರಿ ಸಿಕ್ಕಲ್ಲಿ ಬಾಳು ರೂಪಿಸಿಕೊಂಡಾರು ಎಂಬ ಅದಮ್ಯ ಬಯಕೆ ಈ ಹೆತ್ತವರದ್ದು.

angavykalya-117

ಮಕ್ಕಳಿಬ್ಬರ ಶಿಕ್ಷಣ ಪ್ರೀತಿ – ಎಸ್.ಎಸ್.ಎಲ್.ಸಿ.ಯಲ್ಲಿ ಶೇ.70, ಶೇ.68ರ ಸಾಧನೆ :
ಬಾಲ್ಯದಲ್ಲಿ ಕಾರ್ಕಳದ ಅರುಣೋದಯ(ವಿಕಲಚೇತನರ ವಿಶೇಷಶಾಲೆ) ಶಾಲೆಗೆ ಕಳುಹಿಸಲ್ಪಟ್ಟಿದ್ದು, 3 ವರ್ಷಗಳ ನಂತರ ಈ ಮಕ್ಕಳ ಶಿಕ್ಷಣದ ಕಲಿಕೆಯನ್ನು ಗ್ರಹಿಸಿದ ಅಧ್ಯಾಪಕರ ಹಿತನುಡಿಯಂತೆ ಮನೆಯ ಸಮೀಪದಲ್ಲಿನ ಬೋರ್ಗಲ್‍ಗುಡ್ಡೆ ಸರಕಾರಿ ಶಾಲೆಯಲ್ಲಿ ಪ್ರವೇಶಾತಿಯನ್ನು ನಡೆಸಿದರು. ಅಲ್ಲಿಂದ ಇಲಾಖಾಧಿಕಾರಿಗಳ ಮಾರ್ಗದರ್ಶನದಡಿ ಮನೆಯಲ್ಲಿಯೇ ಖಾಸಗಿಯಾಗಿ ಸಹಶಿಕ್ಷಕರನ್ನು ಮನೆಮಂದಿ ನೇಮಿಸಿಕೊಂಡು ಮನೆಪಾಠವನ್ನು ಕೊಡಿಸಿದರು. ಅದೇ ಗೃಹಶಿಕ್ಷಣದ ಮೂಲಕ ಕಲ್ಯ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ಪ್ರತೀಕ್ಷಾ ಶೇ.70 ಮತ್ತು ಪ್ರಜ್ವಲ್ ಶೇ. 68ರ ಸಾಧನೆಯಲ್ಲಿ ಈ ಬಾರಿ ಪಾಸಾಗಿದ್ದು ಉತ್ತಮ ಮಟ್ಟದ ಸಾಧನೆ ತೋರಿರುತ್ತಾರೆ.

angavykalya-119

ಇದೀಗ ಫಸ್ಟ್ ಪಿಯುಸಿ :
ಶೈಕ್ಷಣಿಕ ಸಾಧನೆಯ ಮೂಲಕವೇ ತಮ್ಮ ಮಕ್ಕಳು ಬದುಕನ್ನು ಕಟ್ಟಿಕೊಳ್ಳಬಲ್ಲರೆಂಬ ಅದಮ್ಯ ವಿಶ್ವಾಸದಿಂದ ಇದೀಗ ಕಲಾ ವಿಭಾಗದಲ್ಲಿ ಪ್ರಥಮ ಪಿಯುಸಿ ಗೃಹಶಿಕ್ಷಣವನ್ನು ಖಾಸಗಿ ಶಿಕ್ಷಕರಿಂದ ಪಡೆಯುತ್ತಿದ್ದು, ದ್ವಿತೀಯ ಪಿಯುಸಿಯಲ್ಲಿ ಮತ್ತೊಂದು ಸಾಧನೆಗೆ ಶಿಕ್ಷಕರಾದ ರಜನಿ ಮತ್ತು ಗಣೇಶ್ ಸಿದ್ಧಗೊಳಿಸುತ್ತಿದ್ದಾರೆ.

???????????????????????????????

ಹೆತ್ತವರಿಗೆ ಸವಾಲಾಗಿದೆ :
ಏನೇ ಆದರೂ ಸರ್ಕಾರದ ಮಾಸಾಶನವಾಗಿ ತಲಾ ರೂ. 1200 ಪಡೆಯುವ ಈ ಮಕ್ಕಳ ಬದುಕಂತೂ ಅಸಹನೀಯ. ಹೆತ್ತವರಿಗೆ ಸವಾಲಾಗಿದೆ. ಆದರೆ ಈ ನಡುವೆ ಮಕ್ಕಳಿಬ್ಬರ ಶಿಕ್ಷಣ ಪ್ರೀತಿ. ಇದಕ್ಕೆಲ್ಲಾ ಇನ್ನಾದರೂ ಜನಪ್ರತಿನಿಧಿಗಳು, ಸಂಬಂಧಪಟ್ಟ ಅಧಿಕಾರಿಗಳು, ಸಮಾಜ ಸಂಘಟನೆಗಳು, ಸೇವಾ ಸಂಸ್ಥೆಗಳು, ಸ್ಪಂದಿಸುವ ಮೂಲಕ ಬಡತನದ ಬೇಗೆಯಿಂದ ಬಳಲುತ್ತಿರುವ ಈ ಕುಟುಂಬದ ವಿಶ್ವಾಸಕ್ಕೆ ಭದ್ರವಾದ ಅಡಿಪಾಯ ಬೇಕಿದೆ. ಹೆತ್ತವರ ಬಯಕೆಯಂತೆ ಆ ನಿಟ್ಟಿನಲ್ಲಿ ನೀವೂ ಸಹಾಯ ಹಸ್ತ ನೀಡಬಲ್ಲಿರಾ ?

angavykalya-112

ಶೇಖರ್ ಸಾಲಿಯಾನ್ ವಿಜಯಾ ಬ್ಯಾಂಕ್ ನಿಟ್ಟೆ ಶಾಖೆ
ಉಳಿತಾಯ ಕಾತೆ ನಂಬ್ರ 116601010005195
ಐಎಫ್ ಎಸ್.ಸಿ. – ವಿ.ಜೆ.ಬಿ. 0001166
ಸಂಪರ್ಕ ಸಂಖ್ಯೆ :
ಶೇಖರ ಸಾಲಿಯಾನ್ 98452 13246
ಜ್ಯೋತಿ ಸಾಲಿಯಾನ್ 72598 30322

-ವಿಜಯ ಆಚಾರ್ಯ, ಉಚ್ಚಿಲ

By suddi9

Leave a Reply

Your email address will not be published. Required fields are marked *