ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಚಿಕ್ಕವಡ್ಡರಗುಡಿ ಎಂಬ ಊರಿನ ಶ್ರೀಯುತ ಮಂಜುನಾಥ್ ಎಂಬುವವರು ಸಮಗ್ರ ಕೃಷಿ ಅನುಷ್ಠಾನದೊಂದಿಗೆ ಗುಲಾಬಿ ಕೃಷಿಯಲ್ಲೂ ವಿಶೇಷ ಹೆಸರನ್ನು ಗಳಿಸಿದವರು. ಒಟ್ಟು ಎರಡು ಎಕರೆ ಹತ್ತು ಕುಂಟೆ ನೀರಾವರಿ ಜಮೀನನ್ನು ಹೊಂದಿರುವ ಮಂಜುನಾಥ್ ವಿಭಿನ್ನವಾದ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡು ಬಂದ ಕೃಷಿಕ. ಸ್ವತಃ ಶ್ರಮ ಜೀವಿಯೂ ಆಗಿರುವ ಇವರು ತನ್ನ ಒಟ್ಟು ಜಮೀನಿನಲ್ಲಿ ಒಂದೂವರೆ ಎಕರೆ ಜಮೀನನ್ನು ವಿಶೇಷವಾಗಿ ಮಿಶ್ರ ಬೆಳೆ ಪದ್ದತಿಗೆ ತೊಡಗಿಸಿಕೊಂಡು ಅದರಲ್ಲಿ ಸೈ ಎನಿಸಿಕೊಂಡವರು.

11111
0002
ಈ ಜಮೀನಿನಲ್ಲಿ ರೂಬಿ, ಚೆರಿಶ್ಮಾ, ಫಾಸ್ಟ್ರೆಡ್ ಮತ್ತು ಆರೆಂಜ್ಬುಡ್ಡಿ ಇವೇ ಮೊದಲಾದ ವಿವಿಧ ತಳಿಗಳ ಸುಮಾರು 5,000 ಗುಲಾಬಿ ಗಿಡಗಳ ಮೂಲಕ ಗುಲಾಬಿ ಕೃಷಿಯನ್ನು ಮಾಡುತ್ತಿದ್ದಾರೆ. ಈ ಗುಲಾಬಿ ಕೃಷಿಯ ಮಧ್ಯೆ ಟಮೋಟೊ, ಚೆಂಡು ಹೂ ಮತ್ತು ಹಸಿಮೆಣಸಿನ ಗಿಡಗಳನ್ನು ಬೆಳೆದಿರುತ್ತಾರೆ ಇವುಗಳ ಸುತ್ತ 102 ತೆಂಗಿನ ಮರಗಳು ಮತ್ತು 250 ಪಪ್ಪಾಯಿ ಗಿಡಗಳನ್ನು ಬೆಳೆಯುವ ಮೂಲಕ ಸಮಗ್ರ ಕೃಷಿ ಪದ್ದತಿಯನ್ನು ಆಯ್ದುಕೊಂಡು ಯಶಸ್ವಿಯಾಗಿರುತ್ತಾರೆ. ಗುಲಾಬಿ ಸಸಿಯನ್ನು ಒಂದು ಬಾರಿ ನಾಟಿ ಮಾಡಿದ ನಂತರ ಸುಮಾರು 20 ವರ್ಷಗಳ ಕಾಲ ನಿರಂತರವಾಗಿ ಇಳುವರಿಯನ್ನು ನೀಡಬಲ್ಲದು.

ಶ್ರೀ ಕೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಪ್ರಗತಿ ಬಂಧು ತಂಡದ ಸದಸ್ಯರಾಗಿರುವ ಮಂಜುನಾಥ ಅವರ ಕೃಷಿಯಲ್ಲಿ ಆಧುನಿಕತೆಯನ್ನು ಕಂಡುಕೊಳ್ಳುವ ಕನಸನ್ನು ಕಾಣುತ್ತಾರೆ.ಉತ್ತಮವಾದ ನೀರಾವರಿ ವ್ಯವಸ್ಥೆ ಹಾಗೂ ಎಲ್ಲಾ ರೀತಿಯ ಕೃಷಿಗೆ ಪೂರಕವಾದ ವಾತಾವರಣವಿದ್ದರೂ ಯೋಜನಾ ರಹಿತ ಕೃಷಿ ಕಾರ್ಯಗಳಿಂದಾಗಿ ತನ್ನ ಕೃಷಿ ಕ್ಷೇತ್ರದಲ್ಲಿ ಸ್ವಾವಲಂಬನೆಯನ್ನು ಸಾಧಿಸಲು ವಿಫಲರಾಗಿದ್ದು ಕೃಷಿ ಕೂಲಿ ಕಾರ್ಮಿಕರ ಸಮಸ್ಯೆಯಿಂದಾಗಿ ಕೃಷಿಯೇ ಬೇಡವೆಂಬಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದರು. ಆದರೆ ಕೃಷಿಕರ ಸಂಘಟನೆನ್ನು ಮಾಡಿಕೊಂಡ ಬಳಿಕ ಹಂತ ಹಂತವಾಗಿ ತನ್ನ ಕೃಷಿಯನ್ನೂ ಒಂದು ಮಾದರಿ ಕೃಷಿ ತಾಕನ್ನಾಗಿ ರೂಪಿಸುವಲ್ಲಿ ಸಫಲರಾಗಿದ್ದಾರೆ.

ಈ ಮೂಲಕ ತನ್ನ ಒಟ್ಟು ಜಮೀನಿನಲ್ಲಿ ಒಂದೂವರೆ ಎಕರೆ ಜಮೀನನ್ನು ಮಾದರಿ ಕೃಷಿ ತಾಕು ನಿಮರ್ಾಣಕ್ಕಾಗಿ ಆಯ್ಕೆ ಮಾಡಿಕೊಂಡು ಇಲ್ಲಿ ನೀರಾವರಿ ವ್ಯವಸ್ಥೆಗಾಗಿ 2 ಬೋರ್ವೆಲ್ ತೆಗೆಸಿ, ಹನಿ ನೀರಾವರಿ ಪದ್ದತಿಯನ್ನು ಪರಿಣಾಮಕಾರಿಯಾಗಿ ಅಳವಡಿಸಿರುತ್ತಾರೆ. ವಿವಿಧ ಹಂತಗಳಲ್ಲಿ ಸುಮಾರು ರೂ.80,000/- ರಷ್ಟು ಸಾಲವನ್ನು ಪಡೆದುಕೊಂಡು ಸುಮಾರು ಐದು ಸಾವಿರ ಗುಲಾಬಿಸಸಿಗಳನ್ನು ನಾಟಿ ಮಾಡಿರುತ್ತಾರೆ. ವರ್ಷವಿಡೀ ಇದರಲ್ಲಿ ಹೂವನ್ನು ಪಡೆಯಲಾಗುತ್ತಿದ್ದು, ಗಿಡವು ಚಿಗುರೊಡೆಯುವ ಸಂದರ್ಭದಲ್ಲಿ ಇಳುವರಿಯು ಸ್ವಲ್ಪ ಕುಂಠಿತವಾಗುತ್ತದೆ. ಈ ಸಸಿಗಳು ಪ್ರತೀ ಇಪ್ಪತ್ತು ದಿನಗಳಿಗೊಂದಾವರ್ತಿಯಂತೆ ಅತೀ ಹೆಚ್ಚು ಹೂವನ್ನು ಬಿಟ್ಟರೆ ಮುಂದಿನ 20 ದಿನ ಕಡಿಮೆ ಹೂವನ್ನು ಬಿಡುತ್ತವೆ. ಈ ಮೂಲಕ ದಿನಂಪ್ರತಿ ಸುಮಾರು 30 ರಿಂದ 40ಕೆ.ಜಿಯಷ್ಟು ಹೂಗಳು ದೊರೆಯುತ್ತಿದ್ದು ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ಇವುಗಳನ್ನು ನೇರವಾಗಿ ಕೆ.ಆರ್.ನಗರ ಮೂಲಕ ಮೈಸೂರಿನ ಹೂವಿನ ಮಾರುಕಟ್ಟೆಗೆ ಮಾರಾಟ ಮಾಡುತ್ತಾರೆ.

ಬೆಳಗಿನ ಜಾವ 6-8 ಗಂಟೆಯೊಳಗಾಗಿ ಹೂಗಳನ್ನು ಕಟಾವು ಮಾಡಬೇಕಾಗಿದ್ದು 4 ಮಂದಿ ಕೆಲಸಗಾರರ ಮೂಲಕ ಸಮರ್ಪಕವಾಗಿ ನಿರ್ವಹಣೆಯನ್ನು ಮಾಡುತ್ತಿದ್ದಾರೆ. ಹೂವಿನ ದರವು ಹಬ್ಬ ಹರಿದಿನಗಳ ಸಂದರ್ಭದಲ್ಲಿ ಕೆ.ಜಿ ಗೆ ರೂ.150/- ಕ್ಕಿಂತಲೂ ಹೆಚ್ಚಿರುತ್ತದೆ. ಇತರ ದಿನಗಳಲ್ಲಿ ಕೆ.ಜಿ ಗೆ ರೂ.70/- ಹಾಗೂ ಬೇಡಿಕೆ ಇಲ್ಲದ ದಿನಗಳಲ್ಲಿ ರೂ.40/- ರಷ್ಟು ಇರುತ್ತದೆ. ಹೀಗೆ ವರ್ಷವಿಡೀ ಸರಾಸರಿ ಕೆ.ಜಿಯೊಂದಕ್ಕೆ ರೂ.70/-ರಷ್ಟು ಆದಾಯ ದೊರೆಯುವುದರಲ್ಲಿ ಯಾವುದೇ ಅನುಮಾನವಿಲ್ಲವೆಂದು ಮಂಜುನಾಥ್ರವರು ಉಲ್ಲಾಸ ಭರಿತರಾಗಿ ಹೇಳುತ್ತಾರೆ. ಹೀಗೆ ವಾರ್ಷಿಕವಾಗಿ ಗುಲಾಬಿ ಕೃಷಿಯಿಂದ ಸುಮಾರು ರೂ.4,00,000/- ದಷ್ಟು ಇಳುವರಿಯನ್ನು ಪಡೆಯುತ್ತಿದ್ದು ಕೂಲಿ, ಸಾಗಾಟ ಹಾಗೂ ನಿರ್ವಹಣಾ ವೆಚ್ಚಗಳನ್ನು ಕಳೆದು ವರ್ಷಕ್ಕೆ ಸುಮಾರು ರೂ.2,00,000/- ದಷ್ಟು ಅದಾಯವನ್ನು ಗಳಿಸುತ್ತಿದ್ದೇನೆ ಎಂದು ತನ್ನ ಶ್ರಮಜೀವನದ ಕ್ಷಣಗಳನ್ನು ನೆನೆದು ಹೆಮ್ಮೆಯಿಂದ ಹೇಳುತ್ತಾರೆ.

ಇವುಗಳ ನಿರ್ವಹಣೆಗಾಗಿ ನಿರಂತರ ಹನಿ ನೀರಾವರಿ ಪದ್ದತಿಯ ಅಳವಡಿಕೆಯೊಂದಿಗೆ ಗುಲಾಬಿ ಸಸಿಗಳಗೆ ಪೊಟ್ಯಾಶ್, ಡಿ.ಎ.ಪಿ, 20:20 ಗಳಂತಹ ರಸಗೊಬ್ಬರಗಳ ಜೊತೆಯಲ್ಲಿ ಕಾಂಪೋಸ್ಟ್ ಮತ್ತು ಹಟ್ಟಿಗೊಬ್ಬರವನ್ನು ಗಿಡಗಳಿಗೆ ನೀಡುತ್ತಾರೆ. ಗುಲಾಬಿ ಸಸಿಗಳಿಗೆ ನಿರಂತರವಾಗಿ ಬಾಧಿಸುವ ಹುಳ ಹಾಗೂ ಕೀಟಗಳ ನಿರ್ವಹಣೆಗಾಗಿ ಪ್ರತೀ 12 ದಿನಗಳಿಗೆ ಒಂದು ಬಾರಿಯಂತೆ ಕೀಟನಾಶಕಗಳನ್ನು ಸಿಂಪಡಿಸುತ್ತಾರೆ. ಹಾಗೂ ಸಸಿಗಳಿಗೆ ಬಾಧಿಸುವ ಕೀಟಗಳನ್ನು ಲಘುವಾಗಿ ಸ್ವಲ್ಪ ನಿರ್ಲಕ್ಷಿಸಿದರೂಇದು ಇಡೀ ತೋಟಕ್ಕೆ ಪಸರಿಸಿ ಪೂರ್ತಿ ಕೃಷಿಯೇ ನಾಮಾವಶೇಷವಾಗುವ ಸಂಭವವೂ ಇದೆೆ.

ಗುಲಾಬಿ ಕೃಷಿಯ ಮಧ್ಯೆ ಮಿಶ್ರ ಕೃಷಿಯಾಗಿ ಚೆಂಡು ಹೂ, ಟಮೋಟೊ, ಹಸಿಮೆಣಸಿನಕಾಯಿ ಗಿಡಗಳನ್ನು ಯಶಸ್ವಿಯಾಗಿ ಬೆಳೆದಿರುತ್ತಾರೆ. ಹಸಿಮೆಣಸಿನಕಾಯಿ ಗಿಡದಲ್ಲಿರುವ ಖಾರದ ಗುಣದಿಂದಾಗಿ ಗುಲಾಬಿ ಸಸಿಗಳಿಗೆ ಕೀಟದ ಬಾಧೆಯ ಪ್ರಮಾಣವು ಕಡಿಮೆಯಾಗಿದ್ದು, ಚೆಂಡುಹೂ ಕೃಷಿಯಿಂದ ವಾರ್ಷಿಕವಾಗಿ ಸರಾಸರಿ ರೂ.80,000/- ರಷ್ಟು ಆದಾಯವನ್ನು ಪಡೆಯುತ್ತಿದ್ದಾರೆ. ಹಾಗೂ ಇವುಗಳ ಸುತ್ತ ಸುಮಾರು 250 ಪಪ್ಪಾಯಿ ಗಿಡಗಳನ್ನು ನಾಟಿ ಮಾಡಿದ್ದು ಇವರ ಜಮೀನನ್ನು ನೋಡುವುದೇ ಒಂದು ಚೆಂದ. ಯಾವುದೇ ಒಂದು ವಿಶೇಷ ವಾರ್ಷಿಕ ನಿರ್ವಹಣಾ ವೆಚ್ಚವಿಲ್ಲದೇ ಸುಮಾರು ರೂ.1,50,000/- ರಷ್ಟು ಆದಾಯವನ್ನು ಪಪ್ಪಾಯಿ ಕೃಷಿಯಿಂದಲೇ ಪಡೆಯಲಾಗುತ್ತಿದೆ.ಇದರ ಮಧ್ಯದಲ್ಲಿ ಜಮೀನಿನ ಸುತ್ತ ಎರಡನೇ ಹಂತದಲ್ಲಿ ಸುಮಾರು 102 ತೆಂಗಿನ ಸಸಿಗಳನ್ನು ನಾಟಿ ಮಾಡಲಾಗಿದ್ದು ಕೃಷಿಕರನ್ನು ಇವರ ಜಮೀನು ಕೈಬೀಸಿ ಕರೆಯುತ್ತಿದೆ.

ಕೃಷಿಯೆಂದರೆ ಮಾರು ದೂರ ಹೋಗುವ ಇಂದಿನ ಯುವ ಪೀಳಿಗೆಗೆ ಕೃಷಿಯನ್ನು ಒಂದು ಆಧುನಿಕ ಉದ್ಯಮವನ್ನಾಗಿ ಹೇಗೆ ಮಾಡಬಹುದು ಎನ್ನುವುದಕ್ಕೆ ಮಂಜುನಾಥ್ರವರ ಕಠಿಣ ಪರಿಶ್ರಮ, ನಿರಂತರ ಅನುಪಾಲನೆ, ಬದಲಾದ ಸನ್ನಿವೇಶದಲ್ಲಿ ಶೀಘ್ರವಾಗಿ ಹೊಸತನಕ್ಕೆ ಒಗ್ಗಿಕೊಳ್ಳುವಿಕೆ, ಅನ್ವೇಷಣಾ ಮನೋಭಾವ ಹಾಗೂ ಹೊಸ ಚಿಂತನೆಗಳ ಮೂಲಕ ಮಾದರಿ ರೈತನಾಗಿ ಗೋಚರಿಸುತ್ತಾರೆ. ಹೀಗೆ ಮೂರು ವರ್ಷಗಳ ಕಾಲ ಸತತ ಕಾಲೇಜು ವ್ಯಾಸಾಂಗ ಮಾಡಿ ಇತರರ ಲೆಕ್ಕ ಬರೆಯುವ ನೌಕರಿಗೆ ಹೋಗುವ ಬದಲು ಸ್ವ ಉದ್ಯೋಗ ಮಾಡುವ ಮೂಲಕ ನಮ್ಮ ಲೆಕ್ಕವನ್ನು ನಾವೇ ಬರೆಯುವುದು ಹೆಚ್ಚು ಅರ್ಥಪೂರ್ಣ ಎಂಬಂತೆ ತನ್ನ ಕೃಷಿ ಚಟುವಟಿಕೆಗಳ ಸಮರ್ಪಕವಾದ ದಾಖಲಾತಿ ನಿರ್ವಹಣೆಗಳೊಂದಿಗೆ ಮಿಶ್ರ ಕೃಷಿಯಲ್ಲಿ ಯಶಸ್ವಿಯಾಗಿ ಇತರರಿಗೆ ಮಾದರಿಯಾಗಿದ್ದಾರೆ.

ಸಂಪರ್ಕಕ್ಕೆ ಶ್ರೀಯುತ ಮಂಜುನಾಥ್ ದೂ: 9740133419

ಲೇಖನ ತಯಾರಿ:ಸಂತೋಷ್ ರಾವ್. ಪೆರ್ಮುಡ

ದೂ: 9742884160

By suddi9

Leave a Reply

Your email address will not be published. Required fields are marked *