ಮನೆಯೊಂದಕ್ಕೆ ಕಟ್ಟಲಾದ ೨೦ ಅಡಿ ಎತ್ತರದ ಹಾಗೂ ೧೦೦ ಅಡಿ ಉದ್ದದ ತಡೆಗೋಡೆ ಕುಸಿದು ಬಿದ್ದ ಪರಿಣಾಮ ಸುಬ್ರಹ್ಮಣ್ಯ-ಮಂಜೇಶ್ವರ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡ ಘಟನೆ ವಿಟ್ಲ ಸಮೀಪದ ಬೈರಿಕಟ್ಟೆ ಎಂಬಲ್ಲಿ ಶುಕ್ರವಾರ ಸಂಭವಿಸಿದೆ. ಬೈರಿಕಟ್ಟೆ ನಿವಾಸಿ ಅಬೂಬಕ್ಕರ್ ಎಂಬವರ ನೂತನ ವಾಗಿ ನಿರ್ಮಾಣ ಗೊಳ್ಳುತ್ತಿರುವ ಮನೆಗೆ ಅವರು ಸುಮಾರು ೮ ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಬದಿಗೆ ತಡೆಗೋಡೆ ನಿರ್ಮಿಸಿದ್ದರು. ಕಳೆದ ೬ ತಿಂಗಳ ಹಿಂದೆ ಕಾಮಗಾರಿ ಪ್ರಾರಂಭಿಸಿ ದ್ದರು. ಅದರ ಕಾಮಗಾರಿ ಮುಗಿಯುವ ಹಂತದಲ್ಲಿತ್ತು. ಶುಕ್ರವಾರ ಮಧ್ಯಾಹ್ನ ದಿಢೀರನೆ ಈ ತಡೆಗೋಡೆಯ ಮುಕ್ಕಾಲು ಭಾಗ ಕುಸಿದು ಬಿದ್ದಿದೆ. ಪರಿಣಾಮ ಸುಬ್ರಹ್ಮಣ್ಯ-ಮಂಜೇಶ್ವರ ಹೆದ್ದಾರಿಯ ಬೈರಿಕಟ್ಟೆಯಿಂದ ಕನ್ಯಾನ ಮೊದಲಾದ ಕಡೆಗಳಿಗೆ ತೆರಳುವ ವಾಹನಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಈ ತಡೆಗೋಡೆ ಬೀಳುವ ಸಂದರ್ಭ ರಿಕ್ಷಾವೊಂದು ಈ ರಸ್ತೆ ಮೂಲಕ ಹಾದು ಹೋಗಿದ್ದು, ಪವಾಡಸದೃಶ ರೀತಿಯಲ್ಲಿ ಪ್ರಯಾ ಣಿಕರು ಪಾರಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಬೈರಿಕಟ್ಟೆ-ಕನ್ಯಾನ ರಸ್ತೆಯ ಮೇಲ್ಭಾಗದಲ್ಲಿ ಅಬೂಬಕ್ಕರ್ ಅವರ ಖಾಸಗಿ ಜಾಗಯಿದ್ದು, ಅದು ಅಪಾಯದಲ್ಲಿತ್ತು. ಈ ಹಿಂದೆ ಮನೆ ತಡೆಗೋಡೆಯ ಮಣ್ಣುಗಳು ರಸ್ತೆ ಬದಿಗೆ ಕುಸಿಯುತ್ತಿತ್ತು. ಈ ಹಿನ್ನೆಲೆಯಲ್ಲಿ ಅವರು ನೂತನವಾಗಿ ಮನೆ ನಿರ್ಮಿಸುವ ವೇಳೆ ಪಿಲ್ಲರ್ ಹಾಕಿ ತಡೆಗೋಡೆ ನಿರ್ಮಿಸಲು ಮುಂದಾಗಿದ್ದರು ಎನ್ನಲಾಗಿದೆ.
ರಸ್ತೆಗೆ ಬಿದ್ದಿರುವ ಕಲ್ಲುಗಳನ್ನು, ಕಬ್ಬಿಣದ ರಾಡ್ಗಳನ್ನು ತೆರವುಗೊಳಿಸಲು ಸ್ಥಳಕ್ಕೆ ಜೆಸಿಬಿ ಯಂತ್ರಗಳು ಆಗಮಿಸಿದ್ದು, ಕೆಲಸ ಕಾರ್ಯ ನಡೆಯುತ್ತಿದ್ದು, ಸಂಜೆ ಹೊತ್ತಿಗೆ ರಸ್ತೆಗೆ ಬಿದ್ದಿರುವ ಕಲ್ಲು ಹಾಗೂ ಪಿಲ್ಲರ್ನ ರಾಡ್ಗಳನ್ನು ತೆರವುಗೊಳಿಸಿ, ಸಂಚಾರಕ್ಕೆ ಅನುಮಾಡಿ ಕೊಡಲಾಗುತ್ತದೆ ಎಂದು ಅಬೂಬಕ್ಕರ್ ಅವರ ಸಂಬಂಧಿಕರು ತಿಳಿಸಿದ್ದಾರೆ. ಈ ರಸ್ತೆ ಕನ್ಯಾನ, ಮಿತ್ತನಡ್ಕ, ಕೇರಳದ ಆನೆಕಲ್ಲು, ಮಂಜೇಶ್ವರ, ಬಾಯಾರು, ಉಪ್ಪಳ ಪ್ರದೇಶವನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿಯಾಗಿದೆ. ಪ್ರಮುಖ ರಸ್ತೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಈ ಪ್ರದೇಶಕ್ಕೆ ವಾಹನಗಳು ಅಳಿಕೆ ಅಂಗ್ರಿ ರಸ್ತೆ ಮೂಲಕ ಸಂಚಾರ ಮಾಡುತ್ತಿದೆ. ತಡೆಗೋಡೆ ನಿರ್ಮಿಸುವ ವೇಳೆ ನೇರವಾಗಿ ಕಲ್ಲುಗಳನ್ನು ಜೋಡಿಸಿ ಪಿಲ್ಲರ್ ಹಾಕಿ ಕಾಮಗಾರಿ ನಡೆಸಿದ್ದು, ತಡೆಗೋಡೆ ಒಳಭಾಗದಲ್ಲಿ ಮಣ್ಣಿನ ಭಾರ ಹೆಚ್ಚಾಗಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
