ನವದೆಹಲಿ: ಕಳೆದ 6 ದಿನಗಳಿಂದ ದೆಹಲಿಯ ತಿಹಾರ್ ಜೈಲಿನಲ್ಲಿ ಬಂಧಿಯಾಗಿದ್ದ, ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಮಂಗಳವಾರ ಬಿಡುಗಡೆಯ ಭಾಗ್ಯ ಕಂಡಿದ್ದಾರೆ.

ತಮ್ಮ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆ ಕೇಸ್ನಲ್ಲಿ ವೈಯಕ್ತಿಕ ಬಾಂಡ್ ಒದಗಿಸಿದ ಅವರನ್ನು ಜೈಲಿನಿಂದ ಬಿಡುಗಡೆಗೊಳಿಸುವಂತೆ ದೆಹಲಿ ಕೋರ್ಟ್ ಆದೇಶಿಸಿತು.
ಕೇಜ್ರಿವಾಲ್ ನೀಡಿರುವ ಬಾಂಡ್ನ್ನು ಮಾನ್ಯ ಮಾಡಿ, ಅವರನ್ನು ಬಂಧನದಿಂದ ಬಿಡುಗಡೆ ಮಾಡುವಂತೆ ದೆಹಲಿ ಹೈಕೋರ್ಟ್ ನೀಡಿರುವ ಆದೇಶವನ್ನು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಗೋಮತಿ ಮನೋಚ ಅನುಸರಿಸಿದ್ದಾರೆ.
ಹೈಕೋರ್ಟ್ ಆದೇಶದ ಅನುಸರಣೆಯಾಗಿ ಕೇಜ್ರಿವಾಲ್ ತಮ್ಮ ಕೈಬರಹದಲ್ಲಿ ಬರೆದ ವೈಯಕ್ತಿಕ ಬಾಂಡ್ ಸಲ್ಲಿಸಿದ್ದಾರೆ.ಈ ದೃಷ್ಟಿಯಲ್ಲಿ, ಅವರು ನೀಡಿರುವ ವೈಯಕ್ತಿಕ ಬಾಂಡ್ ಒಪ್ಪಿಕೊಳ್ಳಲಾಗಿದೆ. ಆರೋಪಿಯನ್ನು ಬಿಡುಗಡೆ ಮಾಡಬಹುದು ಎಂದು ನ್ಯಾಯಾಲಯ ಹೇಳಿತ್ತು.
ಬಾಂಡ್ ನೀಡುವುದನ್ನು ಕೇಜ್ರಿವಾಲ್ ಯಾಕೆ ಪ್ರತಿಷ್ಠೆಯ ವಿಷಯವನ್ನಾಗಿ ತೆಗೆದುಕೊಂಡಿದ್ದಾರೆ. ಇದು ತುಂಬ ಚಿಕ್ಕ ವಿಷಯ. ಯಾಕೆ ನೀವು ಇದನ್ನು ದೊಡ್ಡದ್ದನ್ನಾಗಿ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದ ಕೋರ್ಟ್ ಕೇಜ್ರಿವಾಲ್ ಅವರನ್ನು ಖಂಡಿಸಿತ್ತು.
ನಿತಿನ್ ಗಡ್ಕರಿ ಹೂಡಿದ್ದ ಮಾನನಷ್ಟ ಮೊಕದ್ದಮೆ ಕೇಸ್ ಕುರಿತಂತೆ ಜಾಮೀನು ತೆಗೆದುಕೊಳ್ಳಲು ನಿರಾಕರಿಸಿದ್ದರಿಂದ ಅಪ್ ನಾಯಕ ಕಳೆದ 6 ದಿನಗಳಿಂದ ಜೈಲಿನಲ್ಲಿದ್ದರು.
