ಮಂಗಳೂರು: ಅಕ್ರಮವಾಗಿ ಗೋವುಗಳನ್ನು ಸಾಗಿಸುವಾಗ ಎಎನ್ಎಫ್ ನ ಪೊಲೀಸರ ಗುಂಡಿನಿಂದ ಹತನಾದ ಕಬೀರ್ ಪ್ರಕರಣದಲ್ಲಿ ಶ್ರೀ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ನಡೆದುಕೊಳ್ಳುತ್ತಿರುವ ರೀತಿ ಅತ್ಯಂತ ಖಂಡನೀಯವಾಗಿದೆ ಎಂದು ರಾಜ್ಯದ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ಮನವಿ ಸಲ್ಲಿಸಿಲು ಬಿಜೆಪಿಯ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿದೆ.
ಮನವಿಯಲ್ಲಿ ಕಾಂಗ್ರೆಸ್ ಮೊದಲಿನಿಂದಲೂ ಸಮಾಜವನ್ನು ಒಡೆಯುವಂತಹ ಪಕ್ಷಪಾತಿ ಧೋರಣೆಗಳನ್ನು ತನ್ನ ಆಡಳಿತದಲ್ಲಿ ರೂಢಿಸಿಕೊಂಡಿದ್ದ ಈ ಸರಕಾರ, ಈ ಪ್ರಕರಣದಲ್ಲೂ ತನ್ನ ಹಳೇ ಚಾಳಿಯನ್ನು ಮುಂದುವರೆಸಿದೆ. ಅಪರಾಧಿಗಳಿಗೆ ಕುಮ್ಮಕ್ಕು ನೀಡುವಂತಹ ಹಾಗೂ ಕರ್ತವ್ಯನಿರತ ಪೊಲೀಸರ ನೈತಿಕ ಸ್ಥೈರ್ಯ ಕುಸಿಯುವಂತಹ ಕಾಂಗ್ರೆಸ್ನ ಈ ನಡೆಯನ್ನು ಬಿಜೆಪಿ ಉಗ್ರವಾಗಿ ಖಂಡಿಸುತ್ತದೆ ಎಂದು ವಿವರಿಸಿದೆ.
ಮನವಿಯಲ್ಲಿ ಏನಿದೆ?

ಈ ಹಿಂದೆ ಅನೇಕ ಬಾರಿ ನಕ್ಸಲ್ ಕೃತ್ಯಗಳು ನಡೆದಿದ್ದ ಶೃಂಗೇರಿಯ ತನಿಕೋಡಿನಲ್ಲಿ ನಿಯೋಜನೆಯಾಗಿದ್ದ ಎಎನ್ಎಫ್ ಪಡೆಯ ಪೊಲೀಸರು, ರಾತ್ರಿ ವೇಳೆಯಲ್ಲಿ ಕದ್ದು ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಕಬೀರ್ ಮತ್ತು ಸಂಗಡಿಗರ ವಾಹನವನ್ನು ನಿಲ್ಲಿಸಿ ತಪಾಸಣೆಗೊಳಪಡಿಸಲು ಪ್ರಯತ್ನಿಸಿದಾಗ ಕಾನೂನಿನ್ವಯ ತಪಾಸಣೆಗೊಳಪಡದೆ ವಾಹನದಿಂದ ಹಾರಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರಿಂದ, ಸೂಕ್ಷ್ಮ ಪರಿಸ್ಥಿತಿಯ ಅರಿವಿದ್ದ ನಕ್ಸಲ್ ನಿಗ್ರಹ ದಳದ ಪೊಲೀಸರು ಅನುಮಾನಗೊಂಡು ಗುಂಡು ಹಾರಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಆದರೆ ಈ ಸಾಮಾನ್ಯ ಸಂಗತಿಯನ್ನು ಅರಿಯದ ಸರಕಾರ ಮೃತನ ಮತದ (ಅಲ್ಪಸಂಖ್ಯಾತ) ಆಧಾರದ ಮೇಲೆ ತನ್ನ ನಿಧರ್ಾರಗಳನ್ನು ತೆಗೆದುಕೊಳ್ಳುತ್ತಿದೆ.
ಗುಲ್ಬರ್ಗದಲ್ಲಿ ಪೊಲೀಸ್ ಎನ್ಕೌಂಟರ್ನಲ್ಲಿ ಬಲಿಯಾದ ಇನ್ಸ್ಪೆಕ್ಟರ್ ಕುಟುಂಬಕ್ಕೆ ಬಿಜೆಪಿ ಮತ್ತು ಸಾರ್ವಜನಿಕರಿಂದ ಬಂದ ತೀವ್ರ ಒತ್ತಡದ ನಂತರ ಕೇವಲ 5 ಲಕ್ಷ ಪರಿಹಾರ ನೀಡಿದ ಕಾಂಗ್ರೆಸ್ ಸರಕಾರ, ಅಕ್ರಮವಾಗಿ ಗೋಸಾಗಾಣಿಕೆ ಮಾಡುತ್ತಿದ್ದ ಕಬೀರ್ ಕುಟುಂಬಕ್ಕೆ ಗೃಹ ಸಚಿವ ಶ್ರೀ ಕೆ.ಜೆ.ಜಾಜರ್್ರವರು ಘಟನೆ ನಡೆದ ಕೂಡಲೇ ಅಲ್ಪಸಂಖ್ಯಾತನೆಂಬ ಕಾರಣದಿಂದ 10 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ. ಮತ್ತೋರ್ವ ಸಚಿವ ಶ್ರೀ ಯು.ಟಿ.ಖಾದರ್ರವರು ಕಬೀರ್ ಮತ್ತು ಸಂಗಡಿಗರ ಪರವಾಗಿ ಹೇಳಿಕೆಗಳನ್ನು ನೀಡುವ ಮೂಲಕ ಅವರ ಅಪರಾಧಗಳನ್ನು ಮುಚ್ಚಿ ಹಾಕುವ ಹುನ್ನಾರ ನಡೆಸಿದ್ದಾರೆ. ಸಚಿವ ಶ್ರೀ ರಮಾನಾಥ ರೈಯವರು ಈ ಪ್ರಕರಣದಲ್ಲಿ ಸಂಬಂಧವೇ ಇಲ್ಲದ ಸಂಘಪರಿವಾರವನ್ನು ಎಳೆದು ತರುವ ಮೂಲಕ ಅಲ್ಪಸಂಖ್ಯಾತರಲ್ಲಿ ಕೋಮುಭಾವನೆ ಮೂಡಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಸಂಚು ನಡೆಸಿದ್ದಾರೆ. ಗೋವುಗಳನ್ನು ಸಾಗಿಸುತ್ತಿದ್ದ ವಾಹನದ ಚಾಲಕ ತನ್ನೆಲ್ಲಾ ಹೇಳಿಕೆಗಳನ್ನು ಶಾಸಕ
ಶ್ರೀ ಮೊಯಿದ್ದೀನ್ ಬಾವಾರವರ ಬಲವಂತದಿಂದ ನೀಡಿರುವುದಾಗಿ ಹೇಳಿಕೆಯಿತ್ತಿದ್ದಾನೆ. ಪ್ರಕರಣದಲ್ಲಿ ತನ್ನ ಪಾಲಿನ ಕರ್ತವ್ಯ ನಿರ್ವಹಿಸಿದ, ಅಪರಾಧಿಗಳ ಮೇಲೆ ಗುಂಡು ಹಾರಿಸಿದ ಪೇದೆಯ ಮೇಲೆ ಸರಕಾರ ಕೊಲೆ ಪ್ರಕರಣ ದಾಖಲಿಸಿದೆ. ಇದರಿಂದ ಇಡೀ ರಾಜ್ಯ ಸರಕಾರ ಅಪರಾಧಿಗಳ ಬೆನ್ನಿಗೆ ನಿಂತಿರುವುದರ ಜೊತೆಗೆ, ಪೊಲೀಸರು ಒತ್ತಡದಿಂದ ಕಾರ್ಯನಿರ್ವಹಿಸಬೇಕಾದ ಪರಿಸ್ಥಿತಿಯನ್ನು ನಿಮರ್ಾಣ ಮಾಡಿದೆ. ಸರಕಾರ ಅಪರಾಧಿಗಳಿಗೆ ನೀಡುತ್ತಿರುವ ಕುಮ್ಮಕ್ಕು, ಪೊಲೀಸರ ಮೇಲೆ ದಾಖಲಿಸುತ್ತಿರುವ ಕೇಸು ಮುಂತಾದ ಕ್ರಮಗಳು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಲು ಕಾರಣವಾಗಿದೆ.
ಗೋವುಗಳನ್ನು ಸಾಗಿಸುತ್ತಿದ್ದ ವಾಹನದ ಮೇಲೆ, ಸಾಗಿಸುತ್ತಿದ್ದ ವ್ಯಕ್ತಿಗಳ ಮೇಲೆ, ಈಗಾಗಲೇ ಅನೇಕ ಪ್ರಕರಣಗಳು ದಾಖಲಾಗಿತ್ತು ಎಂಬ ಸಂಗತಿಯನ್ನು ಕಾಂಗ್ರೆಸ್ ಸರಕಾರ ಮರೆಮಾಚಿದೆ. ಯಾವುದೇ ಪರವಾನಿಗೆಯಿಲ್ಲದೆ, ಸರಿ ರಾತ್ರಿಯಲ್ಲಿ, ನಿಗದಿ ಪಡಿಸಿದ್ದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಗೋವುಗಳನ್ನು ಸಾಗಿಸುತ್ತಿದ್ದ, ಪೊಲೀಸರನ್ನು ಕಂಡ ಕೂಡಲೇ ಓಡಿ ಹೋಗಲು ಯತ್ನಿಸಿದ, ಕಬೀರ್ ಮತ್ತು ಸಂಗಡಿಗರ ಕೃತ್ಯಗಳ ಬಗ್ಗೆ ಇನ್ನಷ್ಟು ತನಿಖೆಯಾಗಬೇಕು. ಅಪರಾಧದ ಕೃತ್ಯದಲ್ಲಿ ತೊಡಗಿದ್ದ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ಘೋಷಿಸಿರುವ ನಿಧರ್ಾರವನ್ನು ಹಿಂತೆಗೆದುಕೊಳ್ಳಬೇಕು, ಇಂತಹ ದುಷ್ಕೃತ್ಯಗಳನ್ನು ತಡೆಯುವ ಬಗ್ಗೆ ಅಗತ್ಯವಾದ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು, ಅಪರಾಧಿಗಳ ನಿಗ್ರಹದಲ್ಲಿ ನಿರತವಾಗಿರುವ ಪೊಲೀಸರಿಗೆ ನೈತಿಕ ಬಲ ತುಂಬಬೇಕು. ಜೊತೆಗೆ ಕಾನೂನು ಸುವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿದ್ದ ಪೊಲೀಸರ ಮೇಲೆ ದಾಖಲಿಸಿರುವ ಕೊಲೆ ಪ್ರಕರಣವನ್ನು ವಾಪಸ್ ಪಡೆಯಬೇಕು ಎಂಬ ಒತ್ತಾಯವನ್ನು ಬಿಜೆಪಿ ಮಾಡುತ್ತಿದೆ.
ಅಪರಾಧಿಗಳನ್ನು ಕೋಮು ಆಧಾರದ ಮೇಲೆ ನೋಡುವ, ರಕ್ಷಿಸುವ, ಪ್ರೋತ್ಸಾಹ ನೀಡುವ ರೀತಿ ನೀತಿಗಳನ್ನು ಸರಕಾರ ಕೈಬಿಡಬೇಕೆಂದು ಬಿಜೆಪಿ ಆಗ್ರಹಿಸುತ್ತದೆ. ಸರಕಾರ ತನ್ನ ಈ ನಡೆಯನ್ನು ತಿದ್ದಿಕೊಳ್ಳದೆ ಇದ್ದಲ್ಲಿ ತನ್ನ ಹೋರಾಟವನ್ನು ತೀವ್ರಗೊಳಿಸುತ್ತದೆ ಎಂಬ ಎಚ್ಚರಿಕೆಯನ್ನು ಬಿಜೆಪಿ ನೀಡುತ್ತದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ನಿಯೋಗದಲ್ಲಿ ಅಧ್ಯಕ್ಷ ಕೆ. ಪ್ರತಾಪಸಿಂಹ ನಾಯಕ್, ಮಾಜಿ ಸಚಿವರಾದ ಕೃಷ್ಣ ಜೆ.ಪಾಲೆಮಾರ್, ಬಿ. ನಾಗರಾಜ ಶೆಟ್ಟಿ, ಶಾಸಕ ಕೆ. ಮೋನಪ್ಪ ಭಂಡಾರಿ, ಮಾಜಿ ಶಾಸಕರಾದ ಕೆ. ಪದ್ಮನಾಭ ಕೊಟ್ಟಾರಿ, ಮಲ್ಲಿಕಾ ಪ್ರಸಾದ್, ಎ. ರುಕ್ಮಯ್ಯ ಪೂಜಾರಿ, ಪ್ರಮುಖರಾದ ತುಂಗಪ್ಪ ಬಂಗೇರ, ಸತೀಶ ಪ್ರಭು, ಪುಷ್ಪಲತಾ ಗಟ್ಟಿ, ಶೈಲಜಾ ಕೆ.ಟಿ ಭಟ್, ಕಸ್ತೂರಿ ಪಂಜ, ಶಾರದಾ ರೈ, ಕಿಶೋರ್ ರೈ, ಗುರುಚರಣ್ ಮುಂತಾದವರು ಉಪಸ್ಥಿತರಿದ್ದರು.

