ಮಂಗಳೂರು: ಬ್ರಹ್ಮರಕೂಟ್ಲು ಟೋಲ್ಗೆಟ್ ಕಳೆದ ಶನಿವಾರದಂದು ಹಾಡುಹಗಲೇ ಕಾಂಗ್ರೆಸ್ ಕಾರ್ಯಕರ್ತರ ದಂಡು ಮಾರಕಾಯುಧಗಳೊಂದಿಗೆ ದಾಳಿ ಮಾಡಿ ದಾಂಧಲೆ ನಡೆಸಿ ದರೋಡೆ ಮಾಡಿರುವುದು ಪೂರ್ವಯೋಜಿತ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ ತರುವ ಘಟನೆಯಾಗಿದ್ದು, ಇದು ಕಾಂಗ್ರೆಸಿನವರ ಗೂಂಡಾ ಸಂಸ್ಕೃತಿಯನ್ನು ಸೂಚಿಸುತ್ತಾ ಕರ್ನಾಟಕವನ್ನು ಬಿಹಾರ ಮಾಡುವ ಹುನ್ನಾರವಾಗಿದೆ. ದಕ್ಷಿಣಕನ್ನಡ ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೂಪಾ ಡಿ ಬಂಗೇರಾ ಆರೋಪಿಸಿದ್ದಾರೆ.
ಪ್ರತಿಯೊಂದು ಘಟನೆಗೂ ‘ನೈತಿಕ ಪೊಲೀಸ್ ಗಿರಿ’ ಎಂದು ಬೊಬ್ಬೆ ಹೊಡೆಯುವ ಕಾಂಗ್ರೆಸಿಗರ ಈ ಗೂಂಡಾ ವರ್ತನೆ ಅನೈತಿಕ ಪೊಲೀಸ್ ಗಿರಿಯೇ? ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಜಿಲ್ಲೆಯ ಪ್ರಭಾವಿ ಸಚಿವರ ನೇರ ಕುಮ್ಮಕ್ಕಿನಿಂದಲೇ ಈ ಘಟನೆ ನಡೆದಿದ್ದು, ಈ ಇಬ್ಬರೂ ಸಚಿವರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಳಿಕ ಗೂಂಡಾಗಳೊಂದಿಗೆ ಕೈಜೋಡಿಸಲಿ ಎಂದು ಮೋರ್ಛಾ ಖಾರವಾಗಿ ಪ್ರತಿಕ್ರಿಯಿಸಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಜಿಲ್ಲೆಯಲ್ಲಿ ಗೂಂಡಾಗಿರಿ, ಅತ್ಯಾಚಾರ ಪ್ರಕರಣ ಮಿತಿಮೀರಿದ್ದು ಆಡಳಿತ ಕಾನೂನು ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಪೊಲೀಸ್ ಠಾಣೆಗಳು ನಿಷ್ಕ್ರೀಯವಾಗಿದ್ದು, ಅಧಿಕಾರಿಗಳು ಕಣ್ಣಿದ್ದೂ ಕುರುಡರಾಗಿದ್ದು ಅಪರಾಧಿಗಳನ್ನು ವ್ಯವಸ್ಥಿತ ರೀತಿಯಲ್ಲಿ ರಕ್ಷಿಸುವ ಕೆಲಸವನ್ನು ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಒಂದು ಟೋಲ್ಬೂತ್ನ ಸಮಸ್ಯೆಯನ್ನು ಬಗೆಹರಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ರಕ್ಷಣೆ ನೀಡಬೇಕಾದ ಪೊಲೀಸರು ಕಿಡಿಗೇಡಿಗಳನ್ನು ಬೆಂಬಲಿಸಿ ಬೇಲಿಯೇ ಎದ್ದು ಹೊಲವನ್ನು ಮೇಯಿದಂತೆ ವರ್ತಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯನ್ನು ಹತೋಟಿಗೆ ತರಲು ರಾಜ್ಯಪಾಲರು ಕೂಡಲೇ ಮಧ್ಯಪ್ರವೇಶಿಸಿ, ಜಿಲ್ಲೆಯ ಜನರು ಭಯಮುಕ್ತ ವಾತಾವರಣದಲ್ಲಿ ಜೀವಿಸಲು ಅನುವು ಮಾಡಿಕೊಡಬೇಕೆಂದು ನಾವು ರಾಜ್ಯಪಾಲರನ್ನು ಒತ್ತಾಯಿಸುತ್ತಿದ್ದೇವೆ. ಜಿಲ್ಲೆಯಲ್ಲಿ ಇದೇ ಪರಿಸ್ಥಿತಿ ಮುಂದುವರಿದಲ್ಲಿ ಯಾ ಗೂಂಡಾ ಸಂಸ್ಕೃತಿಯನ್ನು ಹತೋಟಿಗೆ ತರಲು ಪೋಲಿಸ್ ಇಲಾಖೆ ವಿಫಲವಾದಲ್ಲಿ ನಮ್ಮ ರಕ್ಷಣೆಯನ್ನು ನಾವೇ ಮಾಡಬೇಕಾದ ಅನಿವಾರ್ಯತೆ ಒದಗಿಬರಬಹುದು. ಇದಕ್ಕೆ ಗೃಹ ಸಚಿವರು ಆಸ್ಪದ ನೀಡಬಾರದಾಗಿ ಈ ಮೂಲಕ ಎಚ್ಚರಿಕೆಯ ಸಂದೇಶವ ಮೋರ್ಛಾ ನೀಡಿದೆ
