ಇಂದೋರ್: ದೇಹದ ತೂಕ ಇಳಿಸಿಕೊಳ್ಳಲು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಖ್ಯಾತ ಕಿರುತೆರೆ ಕಲಾವಿದ ರಾಕೇಶ್ ದಿವಾನ ಭಾನುವಾರ ರಾತ್ರಿ ಮೃತಪಟ್ಟಿದ್ದಾರೆ. ಐದು ದಿನಗಳ ಹಿಂದೆ ಇಲ್ಲಿಯ ಮೋಹಾಕ್ ಆಸ್ಪತ್ರೆಯಲ್ಲಿ ರಾಕೇಶ್ ಅವರಿಗೆ ಬೇರಿಯಾಟ್ರಿಕ್ ಸರ್ಜರಿ ಮಾಡಲಾಗಿತ್ತು. ಆದರೆ, ದೇಹದ ಪರಿಸ್ಥಿತಿ ವಿಷಮಗೊಂಡು ನಿನ್ನೆ ನಿಧನರಾಗಿದ್ದಾರೆ. ರಾಕೇಶ್ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಅವರ ಕುಟುಂಬದವರು ಆರೋಪಿಸದ್ದಾರೆ.

ಇದೇ ವೇಳೆ, ರಾಕೇಶ್ ಸಾವಿಗೂ ತಮ್ಮ ಶಸ್ತ್ರಚಿಕಿತ್ಸೆಗೂ ಯಾವುದೇ ಸಂಬಂಧವಿಲ್ಲ. ಬೇರಿಯಾಟ್ರಿಕ್ ಆಪರೇಷನ್ ಮಾಡಿದ ಬಳಿಕ ರಾಕೇಶ್ ಸಹಜ ಸ್ಥಿತಿಯಲ್ಲೇ ಇದ್ದರು. ಆ ಬಳಿಕ ಹೈಪರ್ ಟೆನ್ಷನ್ ಮತ್ತು ಬ್ರೇನ್ ಸ್ಟೆಮ್ ವೈಫಲ್ಯದಿಂದಾಗಿ ಪರಿಸ್ಥಿತಿ ಬಿಗಡಾಯಿಸಿತ್ತು. ಅವರನ್ನ ಐಸಿಯುಗೆ ಶಿಫ್ಟ್ ಮಾಡಲಾಗಿತ್ತು. ಅವರ ಆರೋಗ್ಯ ಸುಧಾರಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನ ಮಾಡಲಾಯಿತಾದರೂ ಜೀವ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಸಾವಿಗೆ ಆಸ್ಪತ್ರೆ ನೇರ ಹೊಣೆಯಲ್ಲ” ಎಂದು ಮೋಹಾಕ್ ಆಸ್ಪತ್ರೆಯ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಯಾರು ಈ ನಟ..?
48 ವರ್ಷದ ರಾಕೇಶ್ ದಿವಾನ ಅವರು ಸ್ಟಾರ್ ಪ್ಲಸ್ ವಾಹಿನಿಯಲ್ಲಿ ಪ್ರಸಾರವಾಗುವ “ಯೇ ರಿಶ್ತಾ ಕ್ಯಾ ಕೆಹಲಾತಾ ಹೈ” ಎಂಬ ಜನಪ್ರಿಯ ಧಾರವಾಹಿಯಲ್ಲಿ ಮಹಾರಾಜ್’ಜೀ ಎಂಬ ಪಾತ್ರ ಮಾಡುತ್ತಿದ್ದರು. 2008ರಲ್ಲಿ ಪ್ರಸಾರವಾಗುತ್ತಿದ್ದ “ರಾಮಾಯಣ” ಧಾರಾವಾಹಿಯಲ್ಲಿ ಇವರು ಕುಂಭಕರ್ಣನ ಪಾತ್ರವನ್ನೂ ಮಾಡಿ ಜನಪ್ರಿಯತೆ ಗಳಿಸಿದ್ದರು. ಭಾರೀ ದೇಹತೂಕ ಹೊಂದಿದ್ದ ಇವರು ಕೊಬ್ಬು ಇಳಿಸುವ ಸಲುವಾಗಿ ಬೇರಿಯಾಟ್ರಿಕ್ ಸರ್ಜರಿಗೆ ಒಳಪಟ್ಟಿದ್ದರು.
