ಉಡುಪಿ(ಏ.26): ಪಟ್ಟಣದಲ್ಲಿ ಹುಚ್ಚುನಾಯಿಗಳ ಕಾಟ ವಿಪರೀತವಾಗಿದೆ. ಲಕ್ಷ್ಮಿನಗರದಲ್ಲಂತೂ ನಾಯಿ ಕಾಟದಿಂದ ಜನರು ಕಂಗೆಟ್ಟಿದ್ದಾರೆ. ಹುಚ್ಚು ಹಿಡಿದ ನಾಯಿಗಳು ಹಲವರನ್ನು ಕಚ್ಚಿ ಘಾಸಿಗೊಳಿಸಿವೆ. ಮನೆಯಿಂದ ಹೊರಬರಲು ಜನರು ಬೆದರುವಂತಾಗಿದ್ದು, ಹುಚ್ಚು ನಾಯಿಗಳಿಂದ ನಮ್ಮನ್ನು ರಕ್ಷಿಸಿ ಎಂದು ನಗರಾಡಳಿತವನ್ನು ಕೋರಿದ್ದಾರೆ.

ಪುಟ್ಟ ಮಗುವಿನ ಮುಖಕ್ಕೆ ಎಗರಿದ ನಾಯಿಯೊಂದು ಮಗುವಿನ ತುಟಿಯನ್ನು ಸೀಳಿಹಾಕಿದೆ. ಮಹಿಳೆಯೊಬ್ಬರ ಎರಡೂ ಕೈಗಳಿಗೆ ಕಚ್ಚಿ ಹಾಸಿಗೆ ಹಿಡಿಯುವಂತೆ ಮಾಡಿದೆ. ಇವರು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯ ಬಳಿಕ ಚುಚ್ಚುಮದ್ದು ಪಡೆಯುತ್ತಿದ್ದಾರೆ.
ಈಗ ಮಕ್ಕಳಿಗೆ ಬೇಸಿಗೆ ರಜಾ ಬೇರೆ, ಆದರೆ ಮಕ್ಕಳನ್ನು ಮನೆಯಿಂದ ಹೊರ ಕಳುಹಿಸಲು ಪೋಷಕರು ಬೆದರುತ್ತಿದ್ದಾರೆ. ಹುಚ್ಚು ಹಿಡಿದ ನಾಯಿ ಈಗಾಗಲೇ ಹಲವಾರು ಸಾಕುನಾಯಿ ಮತ್ತು ಬೀದಿ ನಾಯಿಗಳೀಗೆ ಕಚ್ಚಿದ್ದು, ಒಂದೊಂದಾಗಿ ನಾಯಿಗಳು ರೋಗಕ್ಕೆ ತುತ್ತಾಗುತ್ತಿವೆ. ಜನರು ಕೈಯ್ಯಲ್ಲಿ ಕೋಲು ಹಿಡಿದೇ ಅಡ್ಡಾಡುತ್ತಿದ್ದು ಮುಜುಗರ ಎದುರಿಸುವಂತಾಗಿದೆ.
ಹುಚ್ಚು ನಾಯಿಗಳನ್ನ ಹಿಡಿದುಹಾಕುವಂತೆ ಮನವಿ ಮಾಡಿಕೊಂಡರೂ ಅಧಿಕಾರಿಗಳಿಂದ ಯಾವುದೇ ಸ್ಪಂದನೆ ಸಿಗುತ್ತಿಲ್ಲವೆಂದು ನಿವಾಸಿಗಳು ದೂರಿದ್ದಾರೆ. ಜನರೇ ಈ ನಾಯಿಗಳನ್ನ ಕೊಂದುಹಾಕಲು ಮುಂದಾಗಬೇಕಾದ ಸ್ಥಿತಿ ಎದುರಾಗಿದೆ.
