ಮುಂಬಯಿ : ವಿದ್ಯಾವಿಹಾರ್ ಪಶ್ಚಿಮದಲ್ಲಿನ ಕಲಾಯಿ ವಿಲೇಜ್ನಲ್ಲಿನ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಬಳ್ಕುಂಜೆಗುತ್ತು ಗೋಪಾಲ ಎಂ.ಶೆಟ್ಟಿ (78.) ಕಳೆದ ಬುಧವಾರ ಅ.07 ರಂದು ರಾತ್ರಿ ಸ್ಥಳಿಯ ಖಾಸಾಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.
ಹಿರಿಯ ಹೊಟೇಲು ಉದ್ಯಮಿಯಾಗಿ ಧಾ ಕ, ಸಾಮಾಜಿಕ ಚಿಂತಕರಾಗಿದ್ದ ಗೋಪಾಲ ಶೆಟ್ಟಿ ಅವರು ಸರಳ ಸಜ್ಜನಿಕೆ, ಮಿತಭಾಷಿಯಾಗಿದ್ದು ಓರ್ವ ಕಲಾ ಪೋಷಕರಾಗಿ ತೆರೆಯಮರೆ ಯಲ್ಲೇ ಶ್ರಮಿಸುತ್ತಿದ್ದರು.
ಕಳೆದ ಸುಮಾರು ಐದು ದಶಕಗಳಿಂದ ಉಪನಗರದ ವಿದ್ಯಾವಿಹಾರ್ ಪಶ್ಚಿಮದಲ್ಲಿನ ಕಲಾಯಿ ವಿಲೇಜ್ನಲ್ಲಿ ವಾಸ್ತವ್ಯರಾಗಿದ್ದು ಅಪಾರ ದೈವಭಕ್ತರಾಗಿದ್ದ ಅವರು ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರಾಗಿ ಅನನ್ಯ ಸೇವೆಗೈದಿದ್ದರು. ಇತ್ತೀಚೆಗಷ್ಟೇ ದೇವಸ್ಥಾನದ ಅಂಬಿಕಾ ಅನ್ನದಾನ ಛತ್ರಕ್ಕೆ ಶಿಲಾನ್ಯಾಸ ನೆರವೇರಿಸಿ ಜನಾನುರೆಣಿಸಿದ್ದರು.
ಬಳ್ಕುಂಜೆ ಧೂಮವತಿ ದೈವಸ್ಥಾನ, ಇನ್ನಾ ಮಡ್ಮಣ್ ವ್ಯಾಘ್ರಚಾಮುಂಡಿ ದೈವಸ್ಥಾನಗಳ ಅಭಿವೃದ್ಧಿಗೂ ಅಪಾರ ಸೇವೆ ಸಲ್ಲಿಸಿದ್ದ ಮೃತರು ಪತ್ನಿ (ಸರಳಾ ಜಿ.ಶೆಟ್ಟಿ), ಇಬ್ಬರು ಸುಪುತ್ರರು (ಹರಿದಾಸ ಜಿ.ಶೆಟ್ಟಿ, ಗುರುದಾಸ ಜಿ.ಶೆಟ್ಟಿ) ಓರ್ವ ಸುಪುತ್ರಿ (ಶೈಲಾ ಜಿ.ಶೆಟ್ಟಿ) ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಪಾರ್ಥೀವ ಶರೀರವನ್ನು ಇಂದಿಲ್ಲಿ ಗುರುವಾರ ಬೆಳಿಗ್ಗೆ ವಿಮಾನದ ಮೂಲಕ ಹುಟ್ಟೂರ ಬಳ್ಕುಂಜೆಗುತ್ತುಗೆ ರವಾನಿಸುವ ಮುನ್ನ ನೆರೆದ ನೂರಾರು ಗಣ್ಯರು ಅಂತಿಮ ನಮನ ಸಲ್ಲಿಸಿ ಬಾಷ್ಪಾಂಜಲಿ ಕೋರಿದರು. ಸಂಜೆ ವೇಳೆಗೆ ಮೃತರ ಬಳ್ಕುಂಜೆಗುತ್ತು ನಿವಾಸದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಗಣ್ಯರ ಸಂತಾಪ
ಸಕ್ರೀಯ ಸಮಾಜ ಸೇವಕರಾಗಿದ್ದು ಹೃದಯಾಘಾತಕ್ಕೆ ನಿಧನರಾದ ಬಳ್ಕುಂಜೆಗುತ್ತು ಗೋಪಾಲ ಶೆಟ್ಟಿ ನಿಧನಕ್ಕೆ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀ ಪೆರ್ಣಂಕಿಲ ಹರಿದಾಸ ಭಟ್, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಸಲಹಾದಾರ ಸಿಎ| ಐ.ಆರ್ ಶೆಟ್ಟಿ, ಬೋಂಬೆ ಬಂಟ್ಸ್ ಅಸೋಸಿಯೇಶನ್ನ ಜೊತೆ ಕೋಶಾಧಿಕಾರಿ ಇನ್ನಬೀಡು ರವೀಂದ್ರ ಬಿ.ಶೆಟ್ಟಿ, ಜಯರಾಮ ಶೆಟ್ಟಿ ಇನ್ನಾ (ಅಜಂತಾ ಕ್ಯಾಟರರ್ಸ್), ಇನ್ನಬೀಡು ಬಾಬು ಬಿ.ಶೆಟ್ಟಿ ಸೇರಿದಂತೆ ಅನೇಕ ಗಣ್ಯರು ತೀವ್ತ ಸಂತಾಪ ಸೂಚಿಸಿ ಅಗಲಿದ ದಿವ್ಯಾತ್ಮಕ್ಕೆ ಚಿರಶಾಂತಿ ಕೋರಿದ್ದಾರೆ.

