ವಾರದ ಹಿಂದೆ ಉದ್ಘಾಟನೆಗೊಂಡ ರಸ್ತೆಯಲ್ಲಿ ಬಿರುಕು : ರಿಕ್ಷಾ ಚಾಲಕರ ಆರೋಪ
ಉಳ್ಳಾಲ : ತೊಕ್ಕೊಟ್ಟು ಓವರ್ಬ್ರಿಡ್ಜ್ನಿಂದ ಉಳ್ಳಾಲವನ್ನು ಸಂಪರ್ಕಿಸುವ ರಸ್ತೆ ಸುಮಾರು 9 ಕೋಟಿ ರೂ ವೆಚ್ಚದಲ್ಲಿ ಕಾಂಕ್ರಟೀಕರಣ ಕಾಮಗಾರಿ ನಡೆಯುತ್ತಿದ್ದು, ಕಾಂಕ್ರಿಟೀಕರಣಗೊಂಡ ರಸ್ತೆ ಬಿರುಕು ಬಿಡುತ್ತಿದ್ದು ಕಳಪೆ ಕಾಮಗಾರಿ ನಡೆದಿದೆ ಎಂದು ಸ್ಥಳೀಯ ರಿಕ್ಷಾ ಚಾಲಕರು ಬುಧವಾರ ಆರೋಪಿಸಿದ ಘಟನೆ ನಡೆದಿದೆ.


ಕಾಂಕ್ರಿಟೀಕರಣಗೊಂಡ ಪ್ರಥಮ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ಕಾಂಕ್ರಟೀಕೃತ ರಸ್ತೆ ಉದ್ಘಾಟನೆಗೊಂಡು ಒಂದು ವಾರ ಕಳೆದಿದ್ದು, ಇದೀಗ ಕಾಂಕ್ರಟೀಕೃತ ರಸ್ತೆ ಬಿರುಕು ಕಾಣಿಸಿದೆ ಎಂದು ರಿಕ್ಷಾ ಚಾಲಕರು ಆರೋಪಿಸಿದರು. ಕಳೆದ ನಾಲ್ಕು ವರ್ಷದಿಂದ ರಸ್ತೆ ನಾದುರಸ್ತಿಯಲ್ಲಿತ್ತು. ಈಈ ಸಂದರ್ಭದಲ್ಲಿ ಸ್ಥಳೀಯ ಶಾಸಕರಾಗಿದ್ದ ಯು.ಟಿ.ಖಾದರ್ ಗಮನ ನೀಡಿರಲಿಲ್ಲ. ಉರೂಸ್ ಹೆಸರಲ್ಲಿ ರಸ್ತೆ ಕಾಂಕ್ರಟೀಕರಣ ನಡೆಸಲಾಗುತ್ತಿದೆ ಎಂದು ಪ್ರಸ್ತುತ ಸಚಿವರಾಗಿರುವ ಖಾದರ್ ಹೇಳಿದರೂ ಉರೂಸ್ ಮುಗಿದು ತಿಂಗಳು ಕಳೆದರೂ ರಸ್ತೆ ಮಾತ್ರ ನಿರ್ಮಾಣವಾಗಿಲ್ಲ ಎಂದು ರಿಕ್ಷಾ ಚಾಲಕ ನಝೀರ್ ಆರೋಪಿಸಿದರು.
ಬಸ್ ಚಾಲಕ ಅಬ್ಬಾಸ್ ಮಾತನಾಡಿ ರಸ್ತೆಯ ಒಂದು ಬದಿಯಲ್ಲಿ ಕಾಮಗಾರಿ ನಡೆಯುವಾಗ ಇನ್ನೊಂದು ಬದಿಯಲ್ಲಿ ಸುಗಮ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡುವುದು ಗುತ್ತಿಗೆದಾರರ ಕರ್ತವ್ಯ. ಆದರೆ ಕಳೆದ ಎಂಟು ತಿಂಗಳಿಂದ ಕಾಮಗಾರಿ ನಡೆಯುವಾ ಇನ್ನೊಂದು ಬದಿಯ ರಸ್ತೆಯಲ್ಲಿ ಸಂಚಾರಕ್ಕೂ ಯೋಗ್ಯವಾಗಿಲ್ಲ, ಇದರಿಂದ ವಾಹನ ಸರತಿ ಸಾಲಿನಲ್ಲಿ ಸಂಚರಿಸುವ ಮತ್ತು ಪ್ರಯಾಣಿಕರು ದೂಳಿನಲ್ಲಿ ಸಂಚರಿಸುವಂತಾಗಿದೆ ಎಂದರು.
ರಸ್ತೆ ಕಾಮಗಾರಿಯಲ್ಲಿ ಗುಣಮಟ್ಟವನ್ನು ಕಾಪಾಡುವಂತೆ ರಿಕ್ಷಾ ಚಾಲಕರೊಂದಿಗೆ ಸ್ಥಳೀಯರು ಆಗ್ರಹಿಸಿದರು. ಸ್ಥಳಕ್ಕೆ ಉಳ್ಳಾಲ ನಗರ ಸಭಾ ಕಾರ್ಯ ನಿರ್ವಹಣಾ ಅಧಿಕಾರಿ ರೂಪಾ ಶೆಟ್ಟಿ ಭೇಟಿ ನೀಡಿದರು.


