ಉಳ್ಳಾಲ: ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ನೇತ್ರಾವತಿ ನದಿ ದಂಡೆಯಿಂದ ಅವ್ಯಾಹತವಾಗಿ ಮರಳುಗಾರಿಕೆ ನಡೆಸಲು ಕೊಣಾಜೆ ಠಾಣಾಧಿಕಾರಿ ರಾಘವ ಪಡೀಲ್ ಮತ್ತು ಎಸ್.ಐ ಸುಧಾಕರ್ ಬೆಂಬಲಿಸುತ್ತಿದ್ದು, ಇಬ್ಬರನ್ನು ತಿಂಗಳೊಳಗೆ ವರ್ಗಾವಣೆಗೊಳಿಸದೇ ಇದ್ದಲ್ಲಿ ಕೊಣಾಜೆ ಇನ್ಸ್ ಪೆಕ್ಟರ್ ಹಠಾವೋ ಚಳವಳಿ ಹಮ್ಮಿಕೊಳ್ಳುವುದಾಗಿ ಡಿವೈಎಫ್ಐ ಜಿಲ್ಲಾ ಉಪಾಧ್ಯಕ್ಷ ಇಮ್ತಿಯಾಝ್ ಹೇಳಿದ್ದಾರೆ.

ಅವರು ತೊಕ್ಕೊಟ್ಟು ಸಿಪಿಐಎಂ ಕಚೇರಿಯಲ್ಲಿ ನಡೆಸಿದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಗೊಳಪಡುವ ಪ್ರದೇಶಗಳಲ್ಲಿ ನೇತ್ರಾವತಿ ನದಿ ತೀರದಲ್ಲಿ ಕಾನೂನು ಮತ್ತು ನಿಯಮಬಾಹಿರವಾಹಿ ನಡೆಸಲಾಗುತ್ತಿದೆ. ಪಾವೂರು ಗ್ರಾ.ಪಂ. ವ್ಯಾಪ್ತಿಗೆ ಬರುವ ಉಳಿಯದ್ವೀಪದ ಸುತ್ತದ 500 ಮೀಟರ್ ನದಿ ಪ್ರದೇಶದಲ್ಲಿ ಮರಳುಗಾರಿಕೆ ನಿಷೇಧ ಆದೇಶ ಇದ್ದರೂ ಗಾಡಿಗದ್ದೆ ಧಕ್ಕೆಯಲ್ಲಿ ರಾಜಾರೋಷವಾಗಿ ಮರಳುಗಾರಿಕೆ ನಡೆಸಲಾಗುತ್ತಿದೆ. ನಿಷೇಧಿತ ಅಡ್ಯಾರ್, ವಳಚ್ಚಿಲ್ ಧಕ್ಕೆಯಲ್ಲಿ ನ ಮರಳುಗಾರಿಕೆಯನ್ನು ಮಂಗಳೂರು ಗ್ರಾಮಾಂತರ ಪೊಲೀಸ್ ಅಧಿಕಾರಿ ಪ್ರಮೋದ್ ಕುಮಾರ್ ಧಕ್ಷ ಮತ್ತು ಪ್ರಾಮಾಣಿಕತೆಯ ಕೆಲಸದಿಂದ ನಿಯಂತ್ರಣಕ್ಕೆ ತಂದರೂ ಕೊಣಾಜೆ ಠಾಣಾಧಿಕಾರಿ ಹಾಗೂ ಎಸ್.ಐ ಅವರಿಗೆ ನಿಲ್ಲಿಸಲು ಸಾಧ್ಯವಾಗಲಿಲ್ಲ. ಇಬ್ಬರೂ ಮರಳು ಮಾಫಿಯಾದವರ ಜತೆ ಶಾಮೀಲಾಗಿ ಅಕ್ರಮ ಮರಳುಗಾರಿಕೆಯಲ್ಲಿ ಪಾಲ್ಗೊಂಡಿದ್ದಾರೆ. ಸಾರ್ವಜನಿಕರು ದೂರು ನೀಡಿದರೆ ದಾಳಿ ಮಾಡುವ ಸಂದರ್ಭದಲ್ಲಿ ಮರಳುಗಾರಿಕೆ ನಡೆಸುವವರಿಗೆ ಮಾಹಿತಿ ನೀಡಲಾಗುತ್ತಿದೆ. ಪಾವೂರಿನ ಮಲಾರಿನಲ್ಲಿ ಸ್ಥಳೀಯ ಗ್ರಾ.ಪಂ ಸದಸ್ಯನ ಜಮೀನಿನಲ್ಲೇ ಅಕ್ರಮವಾಗಿ ಮರಳು ದಾಸ್ತಾನು ಮಾಡಲಾಗಿದೆ. ಅಲ್ಲದೆ ಮರಳನ್ನು ಗೋಣಿಚೀಲಗಳಲ್ಲಿ ಪ್ಯಾಕೇಟ್ ಮಾಡಿ ಕೇರಳಕ್ಕೆ ಸಾಗಿಸಲಾಗುತ್ತಿದ್ದರೂ ಪೊಲೀಸರು ಕ್ರಮಕೈಗೊಳ್ಳುತ್ತಿಲ್ಲ. ಅಕ್ರಮ ಮರಳುಗಾರಿಕೆ ನಿಯಂತ್ರಣ ಮಾಡುವುದಕ್ಕಾಗಿ ಜಿಲ್ಲಾ ಮತ್ತು ತಾಲೂಕು ಟಾಸ್ಕ್ ಫೋಸ್ ್ ಸಮಿತಿಗಳಿದ್ದರೂ ಅಲ್ಲಿರುವ ಅಧಿಕಾರಿಗಳು ಜವಾಬ್ದಾರಿಯನ್ನು ನಿರ್ವಹಿಸುತ್ತಿಲ್ಲ. ಗಣಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಇಲಾಖೆಗೆ ಹೆಚ್ಚುವರಿ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನೇಮಿಸಿದಲ್ಲಿ 24 ಗಂಟೆ ಕಾರ್ಯಾಚರಣೆ ನಡೆಸಿ ಕಳ್ಳ ದಂಧೆಯನ್ನು ಹತ್ತಿಕ್ಕಬಹುದು.
ಈ ವೇಳೆ ಉಳ್ಳಾಲ ವಲಯ ಕಾರ್ಯದರ್ಶಿ ಜೀವನರಾಜ್ ಕುತ್ತಾರ್, ಕೋಶಾಧಿಕಾರಿ ರಫೀಕ್ ಹರೇಕಳ, ರೋಹಿದಾಸ ಅಬ್ಬಂಜರ, ಹರೀಶ್ ಕೆರೆಬೈಲು, ಸುನಿಲ್ ತೇವುಲ ಮೊದಲಾದವರು ಇದ್ದರು.
