ಬಂಟ್ವಾಳ: ವಿಟ್ಲ ಖಾಸಗಿ ಬಸ್ ನೌಕರರ ಸಂಘದ 2015-16 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ವಿಟ್ಲದ ನಿರೀಕ್ಷಣಾ ಮಂದಿರದಲ್ಲಿ ಆ. 30ರಂದು ಭಾನುವಾರ ನಡೆಯಿತು. ಈ ಕಾರ್ಯಕ್ರಮವನ್ನು ವಿಟ್ಲ ಗ್ರಾಮ ಪಂಚಾಯತ್ನ ಪೂರ್ವಾಧಯಕ್ಷ ರಮಾನಾಥ ವಿಟ್ಲ ಇವರು ಉದ್ಘಾಟಿಸಿ `ಸಂಘಟನೆಯು ಯಾವಾಗಲೂ ದೃಢವಾವಿರಬೇಕು. ಸದಸ್ಯರಲ್ಲಿ ಭಿನ್ನಾಭಿಪ್ರಾಯ ಇರುವುದು ಸಹಜ. ಆದರೆ ಅದನ್ನು ಸಂಘಟನೆಯೊಳಗೆ ತೋರ್ಪಡಿಸದೆ ಒಗ್ಗಟ್ಟಿನಿಂದಿರಬೇಕು.’ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ವಿಟ್ಲದ ವಿಶ್ವ ಹಿಂದೂ ಪರಿಷದ್ ನ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಅರುಣ್ ವಿಟ್ಲ ಇವರು ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಪಕಳಕುಂಜ ಇವರು ವಹಿಸಿದ್ದರು. ವೇದಿಕೆಯಲ್ಲಿ ಸಂಘದ ಗೌರವಾಧ್ಯಕ್ಷ ಅಶೋಕ್ ಬಳ್ಳಮಂಜ, ಉಪಾಧ್ಯಕ್ಷ ಮನೋಜ್ ಕುಮಾರ್, ಜತೆಕಾರ್ಯದರ್ಶಿ ಅಶೋಕ, ಕೋಶಾಧಿಕಾರಿ ಪ್ರಕಾಶ್. ಲೆಕ್ಕಪರಿಶೋಧಕ ವಸಂತ ಮತ್ತು ಸಂಘಟನಾ ಕಾರ್ಯದರ್ಶಿ ಗಿರೀಶ ಉಪಸ್ಥಿತರಿದ್ದರು. ಕಾರ್ಯದರ್ಶಿ ನಾರಾಯಣ ಕೆ ಸ್ವಾಗತಿಸಿ ವಂದಿಸಿದರು. ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

