ನವದೆಹಲಿ: ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಯುವರಾಜ್ ಸಿಂಗ್ ಅವರನ್ನು ಸಮರ್ಥಿಸಿಕೊಂಡು ಸಚಿನ್ ತೆಂಡೂಲ್ಕರ್ ಬ್ಯಾಟ್ ಮಾಡಿದ್ದಾರೆ. ಯುವರಾಜ್ ಸಿಂಗ್ ವಿಶ್ವ ಟಿ20ಯಲ್ಲಿ ಕಳಪೆ ಪ್ರದರ್ಶನದಿಂದ ತೀವ್ರ ಟೀಕಾಪ್ರಹಾರಕ್ಕೆ ಒಳಗಾಗಿದ್ದರು. ಯುವರಾಜ್ ಸಿಂಗ್ ಅವರ ಕೊಡುಗೆ ಅಪಾರವಾಗಿದ್ದು, ಅವರನ್ನು ಈ ರೀತಿ ಅವಮಾನಿಸಬಾರದು ಎಂದು ಸಚಿನ್ ಯುವಿಯ ಹಿಂದಿನ ಆಟದ ವೈಖರಿಯನ್ನು ನೆನಪಿಸಿದರು. ಹಿಂದೆ ಮ್ಯಾಚ್ ವಿನ್ನರ್ ಆಗಿರುತ್ತಿದ್ದ ಯುವರಾಜ್ ಮುಂದಿನ ವರ್ಷ ಏಕ ದಿನ ವಿಶ್ವಕಪ್ನಲ್ಲಿ ಗೆಲ್ಲುವುದಕ್ಕೆ ಹೋರಾಡುವಷ್ಟು ಸಾಮರ್ಥ್ಯ ಹೊಂದಿದ್ದಾರೆ ಎಂದು ತೆಂಡೂಲ್ಕರ್ ಹೇಳಿದರು.
ನಾನು ಯುವಿಯ ಅದಮ್ಯ ಚೈತನ್ಯದ ಅಭಿಮಾನಿ. ಅವರು ಅನೇಕ ಸವಾಲುಗಳನ್ನು ಮೈದಾನದ ಹೊರಗೆ ಮತ್ತು ಮೈದಾನದ ಒಳಗೆ ಹಿಂದಿಕ್ಕಿದ್ದಾರೆ. ಪ್ರತಿಕೂಲ ಸ್ಥಿತಿಯ ವಿರುದ್ಧ ಹೋರಾಡುವ ಅವರ ಸಾಮರ್ಥ್ಯದಿಂದ ಇನ್ನಷ್ಟು ಬಲಶಾಲಿಯಾಗಿ ಹೊರಹೊಮ್ಮಿ ಟೀಕಾಕಾರರಿಗೆ ಪ್ರತ್ಯುತ್ತರ ನೀಡುತ್ತಾರೆ ಎಂದು ತೆಂಡೂಲ್ಕರ್ ಈಮೇಲ್ ಸಂದೇಶದಲ್ಲಿ ತಿಳಿಸಿದ್ದಾರೆ. ವಿಶ್ವಕಪ್ ಟಿ20 ಫೈನಲ್ ನಲ್ಲಿ ಯುವಿ ಶ್ರೀಲಂಕಾ ವಿರುದ್ಧ ಕಳಪೆ ಬ್ಯಾಟಿಂಗ್ ಮಾಡಿದ್ದ ಕಾರಣ ಆಕ್ರೋಶಗೊಂಡ ಕ್ರಿಕೆಟ್ ಅಭಿಮಾನಿಗಳು ಅವರ ಮನೆಯ ಮೇಲೆ ಕಲ್ಲುತೂರಾಟ ನಡೆಸಿದ್ದರು.

