ಮಂತ್ರಾಲಯ: ಪ್ರವಾಹ ಪೀಡಿತ ದೇವಾಲಯವನ್ನು ಮರು ನಿರ್ಮಾಣ ಮಾಡಿದ ಮಂತ್ರಾಲಯ ಕ್ಷೇತ್ರದ ಪೀಠಾಧಿಪತಿ ಸುಯತೀಂದ್ರ ಶ್ರೀಗಳು ಶುಕ್ರವಾರ ಬೃಂದಾವನ ಲೀನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಜಗದ್ಗುರು ಶ್ರೀ ಮಧ್ವಾಚಾರ್ಯರ ಮೂಲ ಮಹಾಸಂಸ್ಥಾನ ನಂಜನಗೂಡು ಶ್ರೀಮಠದ ಪರಂಪರೆಯಲ್ಲಿ 54ನೇ ಮತ್ತು ಗುರುರಾಜರ ನಂತರ ಯತಿ ಪರಂಪರೆಯಲ್ಲಿ ಸುಯತಿಂದ್ರ ಶ್ರೀಗಳು 22ನೇ ಪೀಠಾಧಿಪತಿಯಾಗಿದ್ದರು. ಶ್ರೀ ಮಠದ ಹಿಂದಿನ ಪೀಠಾಧಿಪತಿ ಸುಶಮೀಂಧ್ರ ತೀರ್ಥರ ಬೃಂದಾವನದ ಸಮೀಪದಲ್ಲೇ ತಾತ್ಕಾಲಿಕ ಬೃಂದಾವನದಲ್ಲಿ ಶ್ರೀಗಳ ದೇಹ ಪ್ರತಿಷ್ಠಾಪಿಸಿ, ವಿರಾಜ ಮಂತ್ರ ಪಠಣ ಹಾಗೂ ನೆರೆದ ಜನರ ಭಕ್ತಿಪೂರ್ವಕ ಘೋಷಣೆಗಳ ಮಧ್ಯೆ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು. ಶ್ರೀಗಳು ಪತ್ನಿ, ಒಬ್ಬ ಪುತ್ರಿ, ಇಬ್ಬರು ಪತ್ರರು ಹಾಗೂ ಅಪಾರ ಭಕ್ತರನ್ನು ಅಗಲಿದ್ದಾರೆ.

