
ಡಾಕಾ: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಪಂದ್ಯಾವಳಿಯ ಅಭ್ಯಾಸ ಪಂದ್ಯದಲ್ಲಿ ಭಾರತವು ಶ್ರೀಲಂಕಾ ವಿರುದ್ಧ 5 ರನ್ ಗಳಿಂದ ಸೋಲೊಪ್ಪಿಕೊಂಡಿದೆ. ಗೆಲ್ಲಲು 154 ರನ್ ಗಳ ಗುರಿ ಹೊಂದಿದ್ದ ಭಾರತ ನಿಗದಿತ 20 ಓವರ್ ಗಳಲ್ಲಿ ಕೇವಲ 148 ರನ್ ಗಳಿಸಲಷ್ಟೇ ಶಕ್ತವಾಯಿತು. ಆರಂಭಿಕ ಆಟಗಾರರಾದ ಶಿಖರ್ ಧವನ್(2) ಮತ್ತು ರೋಹಿತ್ ಶರ್ಮಾ(4) ಬೇಗನೆ ವಿಕೆಟ್ ಒಪ್ಪಿಸುವ ಮೂಲಕ ಭಾರತದ ಹೋರಾಟವನ್ನು ದುರ್ಬಲಗೊಳಿಸಿದರು. ನಂತರ ಜೊತೆಯಾದ ಸುರೇಶ್ ರೈನಾ(41) ಮತ್ತು ಯುವರಾಜ್ ಸಿಂಗ್(33) ಬಿರುಸಿನ ಆಟ ಪ್ರದರ್ಶಿಸಿ ತಂಡವನ್ನು ಬೆಂಬಲಿಸಿದರು. ಆದರೆ ಕಳಪೆ ಶಾಟ್ ಆಡಲು ಹೋಗಿ ವಿಕೆಟ್ ಒಪ್ಪಿಸಿದ ಸುರೇಶ್ ರೈನಾ ಪೆವಿಲಿಯನ್ ಗೆ ಮರಳಿದ ನಂತರ ಭಾರತ ಮತ್ತೊಮ್ಮೆ ಸಂಕಷ್ಟಕ್ಕೀಡಾಯಿತು.ಅಜಿಂಕ್ಯಾ ರಹಾನೆ, ವಿರಾಟ್ ಕೊಹ್ಲಿ(17) ಮತ್ತು ರವೀಂದ್ರ ಜಡೇಜಾ(12) ಬೇಜವಬ್ದಾರಿ ಆಟ ಪ್ರದರ್ಶಿಸಿ ಔಟಾದರು.ನಂತರ ಬಂದ ರವಿಚಂದ್ರನ್ ಅಶ್ವಿನ್ ತುಸು ಹೋರಾಟ ನಡೆಸಿ ಬಿರುಸಿನ 19 ರನ್ ಪೇರಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು. ಅಂತಿಮವಾಗಿ ಭಾರತ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 148 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಇದಕ್ಕೂ ಮುಂಚೆ ಆಡಳಿಲಿದ ಶ್ರಿಲಂಕಾ ಆರಂಭದಲ್ಲಿ ಕೊಂಚ ಎಡವಿದರೂ ನಾಯಕ ಚಾಂಡಿಮಾಲ್ ಮತ್ತು ಕೆಳಸ್ತರದ ಆಟಗಾರರ ಸಮಯೋಚಿತ ಆಟದಿಂದಾಗಿ 20 ಓವರ್ ಗಳಲ್ಲಿ 154 ರನ್ ಗಳ ಗೌರವಯುತ ಮೊತ್ತ ಕಲೆ ಹಾಕಿದರು.
