ಸುದ್ದಿ9 ಕಿನ್ನಿಗೋಳಿ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮೀಣ ಪ್ರದೇಶದ ಜನರನ್ನು ಆರ್ಥಿಕವಾಗಿ ಸ್ವಾವಲಂಬಿ ಜೀವನ ನಡೆಸುವ ಕಾರ್ಯದಲ್ಲಿ ಸಫಲತೆ ಕಂಡಿದೆ ಎಂದು ಕಟೀಲು ದೇವಳ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಹೇಳಿದರು.
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಿನ್ನಿಗೋಳಿ, ಮೆನ್ನಬೆಟ್ಟು, ಐಕಳ, ಎಕ್ಕಾರು ಕಾರ್ಯಕ್ಷೇತ್ರದ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟಗಳ ಆಶ್ರಯದಲ್ಲಿ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಭಾನುವಾರ ನಡೆದ ವಿವಿಧ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ಪದಗ್ರಹಣ ಹಾಗೂ ಸಾಧನಾ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಸಾಧಕರಾದ ಹಿರಿಯ ಯಕ್ಷಗಾನ ಕಲಾವಿದ ಕಡಂದೇಲು ಪುರುಷೋತ್ತಮ ಭಟ್, ಯುಗಪುರುಷದ ಭುವನಾಭಿರಾಮ ಉಡುಪ, ನಿವೃತ್ತ ಶಿಕ್ಷಕ ಉಮೇಶ್ ರಾವ್ ಎಕ್ಕಾರು ಅವರನ್ನು ಸ್ವಸಹಾಯ ಸಂಘಗಳ ವತಿಯಿಂದ ಸನ್ಮಾನಿಸಲಾಯಿತು.
ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಕಿನ್ನಿಗೋಳಿ ವಲಯದ ವಲಯಾಧ್ಯಕ್ಷೆ ಸುಜಾತ ಅಧ್ಯಕ್ಷತೆ ವಹಿಸಿದ್ದರು.

ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಕಟೀಲು ಪದವಿ ಕಾಲೇಜು ಪ್ರಿನ್ಸಿಪಾಲ್ ಎಂ. ಬಾಲಕೃಷ್ಣ ಶೆಟ್ಟಿ , ಮೆನ್ನಬೆಟ್ಟು ಗ್ರಾ. ಪಂ. ಅಧ್ಯಕ್ಷ ಜನಾರ್ದನ ಕಿಲೆಂಜೂರು, ಕಿನ್ನಿಗೋಳಿ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ಯೋಗೀಶ್ ರಾವ್, ತಾಲೂಕು ಜನಜಾಗೃತಿ ವೇದಿಕೆ ಯೋಜನಾಧಿಕಾರಿ ತಿಮ್ಮಪ್ಪ ನಾಯ್ಕ್ , ಕೇಂದ್ರ ಒಕ್ಕೂಟದ ಅಧ್ಯಕ್ಷ ಆಲ್ವಿನ್ ಡಿಸೋಜ ಉಪಸ್ಥಿತರಿದ್ದರು.
ಬಡಗ ಎಕ್ಕಾರು ಒಕ್ಕೂಟದ ನಿಕಟಪೂರ್ವ ಅಧ್ಯಕ್ಷೆ ಹೇಮಲತಾ ಜೆ. ಶರ್ಮ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಶುಭಲತಾ ವರದಿ ವಾಚಿಸಿದರು. ಸುಧಾಕರ ಸಾಲ್ಯಾನ್, ಕಿನ್ನಿಗೋಳಿ ವಲಯ ಮೇಲ್ವಿಚಾರಕ ಸತೀಶ್ ಹಾಗೂ ದಿವ್ಯ ಶ್ರೀ ಕಾರ್ಯಕ್ರಮ ನಿರೂಪಿಸಿದರು.

