
ಚಿಕ್ಕಬಳ್ಳಾಪುರ: ಮೊಯಿಲಿಯಂಥ ಭ್ರಷ್ಟರು ಚುನಾವಣೆಯಲ್ಲಿ ಗೆಲ್ಲಬಾರದು. ಮತದಾರರು ಅಂಥವರಿಗೆ ಮತ ಹಾಕಿ ದೇಶವನ್ನು ಲೂಟಿಗೈಯ್ಯಲು ಮತ್ತಷ್ಟು ಅವಕಾಶ ಮಾಡಿಕೊಡಬಾರದು ಎಂದು ಆಪ್ ಮುಖಂಡ ಅರವಿಂದ್ ಕೇಜ್ರಿವಾಲ್ ಗುಡುಗಿದ್ದಾರೆ. ಶನಿವಾರ ಚಿಕ್ಕಬಳ್ಳಾಪುರದ ಆಪ್ ಅಭ್ಯರ್ಥಿ ಕೆ.ಅರ್ಕೇಶ್ ಪರ ಮತಯಾಚಿಸಲು ಆಗಮಿಸಿದ್ದ ಕೇಜ್ರಿವಾಲ್ ಮೊಯಿಲಿ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದರು. ಭ್ರಷ್ಟಾಚಾರ ವಿರೋಧಿ ಅಭಿಯಾನದ ಭಾಗವಾಗಿ ಬಿಜೆಪಿಯ ಅನಂತ್ ಕುಮಾರ್ ಮತ್ತು ಯಡಿಯೂರಪ್ಪ ವಿರುದ್ಧವೂ ಆಪ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅನಂತ್ ವಿರುದ್ಧ ದಕ್ಷಿಣ ಬೆಂಗಳೂರಿನಲ್ಲಿ ಸಾಮಾಜಿಕ ಕಾರ್ಯಕರ್ತೆ ನೀನಾ ನಾಯಕ್ ಸ್ಪರ್ಧಿಸುತ್ತಿದ್ದರೆ ಯಡಿಯೂರಪ್ಪ ವಿರುದ್ಧ ಶಿವಮೊಗ್ಗದಲ್ಲಿ ಸಾಮಾಜಿ ಕಾರ್ಯಕರ್ತ ಜಿ. ಶ್ರೀಧರ್ ಕಳ್ಳಹಳ್ಳ ಸ್ಪರ್ಧಿಸುತ್ತಿದ್ದಾರೆ. ಉತ್ತರ ಪ್ರದೇಶದ ವಾರಾಣಾಸಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನರೇಂದ್ರ ಮೋದಿ ಕಣಕ್ಕಿಳಿದಿದ್ದು ಅವರ ವಿರುದ್ಧ ತಾನು ಸ್ಪರ್ಧಿಸುವ ಕುರಿತು ಬೆಂಗಳೂರಿನ ಸಮಾವೇಶದಲ್ಲಿ ತಿಳಿಸುವುದಾಗಿ ಕೇಜ್ರಿವಾಲ್ ಹೇಳಿದರು.

