ಬಂಟ್ವಾಳ: ಜಪಾನ್‌ನ ಅತಿ ಎತ್ತರದ ಪರ್ವತ ಹಾಗೂ ವಿಶ್ವದ ಪ್ರಸಿದ್ಧ ಶಿಖರಗಳಲ್ಲಿ ಒಂದಾದ ಮೌಂಟ್ ಫುಜಿಯನ್ನೇರುವ ಮೂಲಕ ಬಂಟ್ವಾಳದ ಕಾರ್ತಿಕ್ ಕುಮಾರ್ ವೈ.ಎಸ್. ಹಾಗೂ ಅವರ ಗೆಳೆಯರು ಗಮನಾರ್ಹವಾದ ಸಾಧನೆಗೈದು ಬಂಟ್ವಾಳ ತಾಲೂಕಿಗೆ ಕೀರ್ತಿ ತಂದಿದ್ದಾರೆ.

ಕಠಿಣ ಹವಾಮಾನ, ಕಡಿದಾದ ಪರ್ವತ ಮಾರ್ಗ ಹಾಗೂ ಹಲವು ಸವಾಲುಗಳನ್ನು ಎದುರಿಸಿದ ಅವರು, ಛಲ, ಆತ್ಮವಿಶ್ವಾಸ ಮತ್ತು ಸಾಹಸದಿಂದ ಮೌಂಟ್ ಫುಜಿಯ ಶಿಖರವನ್ನು ತಲುಪಿ, ಶಿಖರದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿ ದೇಶಪ್ರೇಮ ಮೆರೆದಿದ್ದಾರೆ.
ಜಪಾನ್‌ನ ನೆಲದಲ್ಲಿ, ಅಲ್ಲಿನ ಅತ್ಯುನ್ನತ ಶಿಖರದ ಮೇಲೆ ಭಾರತದ ರಾಷ್ಟ್ರಧ್ವಜ ಹಾರಿಸಿದ ಕ್ಷಣ ಕಾರ್ತಿಕ್ ಕುಮಾರ್ ಹಾಗೂ ಅವರ ಗೆಳೆಯರಿಗೆ ಅವಿಸ್ಮರಣೀಯ ಹೆಮ್ಮೆಯ ಕ್ಷಣವಾಗಿ ಪರಿಣಮಿಸಿದೆ. ಸಾಹಸಪ್ರಿಯತೆ, ದೇಶಾಭಿಮಾನ ಹಾಗೂ ಸಾಧನೆಯ ಪ್ರಯತ್ನಕ್ಕೆ ಸಾಕ್ಷಿಯಾಗಿದೆ.
ಕಾರ್ತಿಕ್ ಕುಮಾರ್ ವೈ.ಎಸ್. ಅವರು ಬಂಟ್ವಾಳದ ಬಡ್ಡಕಟ್ಟೆಯ ಶಂಕರ್ ಮತ್ತು ಯಶೋದ ದಂಪತಿಯ ಪುತ್ರ. ಉದ್ಯೋಗ ನಿಮಿತ್ತ ಜಪಾನ್‌ಗೆ ತೆರಳಿರುವ ಅವರು, ಅಲ್ಲಿನ ಪರ್ವತಾರೋಹಣದ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಗೆಳೆಯರೊಂದಿಗೆ ಮೌಂಟ್ ಫುಜಿ ಶಿಖರಾರೋಹಣ ಮಾಡಿದ್ದಾರೆ.
ಮೌಂಟ್ ಫುಜಿ ಶಿಖರದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ತಾಯ್ನಾಡಿನ ಹೆಮ್ಮೆಯನ್ನು ವಿದೇಶದ ನೆಲದಲ್ಲೂ ಎತ್ತಿಹಿಡಿದಿರುವ ಕಾರ್ತಿಕ್ ಕುಮಾರ್ ಅವರ ಸಾಹಸಕ್ಕೆ ಸಾರ್ವತ್ರಿಕ ಶ್ಲಾಘನೆಗೊಳಗಾಗಿದೆ.

By Suddi9

Leave a Reply

Your email address will not be published. Required fields are marked *