ಗಂಜಿಮಠ ಸುಟ್ಟು ಭಸ್ಮವಾದ ಕಾರು : ಚಾಲಕ ಪ್ರಾಣಾಪಯದಿಂದ ಪಾರು
ಕೈಕಂಬ: ಎರ್ಟಿಗಾ ಕಾರೊಂದು ಸುಟ್ಟು ಭಸ್ಮವಾದ ಘಟನೆಯೊಂದು ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಗಂಜಿಮಠ ಕೈಗಾರಿಕಾ ವಲಯದ ಸಮೀಪ ನಾರ್ಲಪದವು ಎಂಬಲ್ಲಿ ಭಾನುವಾರ ರಾತ್ರಿ ನಡೆದಿದೆ.
ಮೊಗರು ಕುಕ್ಕಟ್ಟೆ ಕಡೆಯಿಂದ ಗಂಜಿಮಠದತ್ತ ಸಾಗುತ್ತಿದ ಕಾರು ಭಾನುವಾರ ತಡರಾತ್ರಿ 2ಗಂಟೆಯ ಸುಮಾರಿಗೆ ನಾರ್ಲಪದವು ಬಳಿ ವಿದ್ಯುತ್ ಕಂಬಕ್ಕೆ ಗುದ್ದಿದ ಬಳಿಕ ಕಾರಿನ ಎಸಿ ಸ್ಫೋಟಗೊಂಡು ಇಡೀ ಕಾರು ಸುಟ್ಟು ಭಸ್ಮವಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಕೊಳಂಬೆ ಮೂಲದ ಟೂರಿಸ್ಟ್ ಕಾರಿಗೆ ನಾಯಿಯೊಂದು ಅಡ್ಡ ಬಂದಿದ್ದು, ನಾಯಿಯನ್ನು ತಪ್ಪಿಸುವ ಪ್ರಯತ್ನದಲ್ಲಿ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಗುದ್ದಿದ ಪರಿಣಾಮ ವಿದ್ಯುತ್ ಕಂಬ ತುಂಡಾಗಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತ್ತು. ಬಳಿಕ ಕಾರಿನ ಎಸಿಯಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಎಸಿಸ್ಫೋಟಗೊಂಡಿತ್ತು ಎನ್ನಲಾಗಿದೆ.
ಕಾರಿನಲ್ಲಿ ಚಾಲಕ ಮಾತ್ರ ಇದ್ದು, ಯಾವುದೇ ಅಪಾಯವಾಗಿಲ್ಲ ಎಂದು ಬಜಪೆ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಸಂದೀಪ್ ಮಾಹಿತಿ ನೀಡಿದ್ದಾರೆ.ಕಾರು ಸಂಪೂರ್ಣ ಭಸ್ಮವಾಗಿದ್ದು, ಭಾರೀ ಪ್ರಮಾಣದ ಬೆಂಕಿ ದೂರದವೆರೆಗೂ ಕಾಣಿಸಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಕೆಎ 19ಎಇ 8803 ನೋಂದಣಿ ಸಂಖ್ಯೆಯ ಕಾರಿನಲ್ಲಿ ಇದ್ದ ಯಕ್ಷಗಾನದ ಪರಿಕರಗಳು ಸುಟ್ಟು ಹೋಗಿವೆ. ಕಾರಿನ ಹಿಂಭಾಗದಲ್ಲಿ ಕೆಲವು ಪುಸ್ತಕಗಳು ಅರ್ಧ ಸುಟ್ಟು ಉಳಿದಿವೆ



