ಬಂಟ್ವಾಳ ವಿದ್ಯಾಗಿರಿ ಶ್ರೀ ವೆಂಕಟರಮಣ ಸ್ವಾಮೀ ಇಂಗ್ಲೀಷ್ ಶಾಲಾ ವಾರ್ಷಿಕೋತ್ಸವ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ
ಬಂಟ್ವಾಳ: ಇಂದಿನ ಮಕ್ಕಳು ನಿದ್ರಾಹೀನತೆಯಿಂದಾಗಿ ಹಲವಾರು ರೀತಿಯ ಮಾನಸಿಕ ಹಾಗೂ ದೈಹಿಕ ಅನಾರೋಗ್ಯಕ್ಕೆ ಒಳಗಾಗುತ್ತಿದ್ದು, ಮಕ್ಖಳು ಸರಿಯಾದ ಸಮಯಕ್ಕೆ ಮಲಗಿ ಬೆಳಗ್ಗೆ ಸರಿಯಾದ ಸಮಯಕ್ಕೆ ಏಳುವುದನ್ನು ಅಭ್ಯಾಸಮಾಡಿಕೊಳ್ಳಬೇಕು ಈ ನಿಟ್ಟಿನಲ್ಲಿ ಮಕ್ಕಳ ಹೆತ್ತವರು ಎಚ್ಚರಿಕೆ ವಹಿಸಬೇಕು ಎಂದು ನಿರ್ವಾಣ ಅಕಾಡೆಮಿ ಸಹ ಸ್ಥಾಪಕಾರಾದ ವಿಜಯಲಕ್ಷ್ಮೀ ನಿರ್ವಾಣ ಹೇಳಿದರು.
ಬಂಟ್ವಾಳ ವಿದ್ಯಾಗಿರಿಯ ಶ್ರೀ ವೆಂಕಟರಮಣಸ್ವಾಮಿ ಇಂಗ್ಲೀಷ್ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಶ್ರೀ ವೆಂಕಟರಮಣಸ್ವಾಮಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಯೋಗ ವರ್ಧನ್ ಡಿ.ಎಮ್.ರವರು ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ತನ್ನದೇ ಆದ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಬೆಳೆಸಬೇಕಾದ ಕೆಲಸವಾಗಬೇಕಾಗಿದೆ. ಕೇವಲ ಶಿಕ್ಷಕರಿಂದಲೇ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಸಾಧ್ಯವಿಲ್ಲ. ಇದಕ್ಕೆ ಪೋಷಕರೂ ಅಷ್ಟೇ ಜವಾಬ್ದಾರರಾಗಿರುತ್ತಾರೆ ಎಂದರು.
ಶ್ರೀ ವೆಂಕಟರಮಣ ಸ್ವಾಮೀ ಸಮೂಹ ವಿದ್ಯಾ ಸಂಸ್ಥೆಗಳ ಸಂಚಾಲಕರಾದ ರೇಖಾ ಕೆ ಶೆಣೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್.ವಿ.ಎಸ್. ಇಂಗ್ಲೀಷ್ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಹರಿಪ್ರಸಾದ್ ಶಾಲಾ ವಾರ್ಷಿಕ ವರದಿಯನ್ನು ವಾಚಿಸಿದರು. ನಿರ್ವಾಣಸಹ ಸ್ಥಾಪಕರಾದ ಶರತ್, ನಿರ್ವಾಣ ಅಕಾಡೆಮಿ ಹಾಗೂ ಶಾಲೆಯ ವಿದ್ಯಾರ್ಥಿ ಪ್ರತಿನಿಧಿ ಅರ್ಪಣ್ ಆರ್ ರೈ ಅವರು ಉಪಸ್ಥಿತರಿದ್ದರು. ಎಸ್.ವಿ.ಎಸ್.ಇಂಗ್ಲೀಷ್ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಸತೀಶ್ ಬಂಗೇರ ಸ್ವಾಗತಿಸಿ, ಗೌತಮಿ ವಂದಿಸಿದರು. ಶರ್ಮಿಳಾ ಬಹುಮಾನವಿಜೇತರ ಪಟ್ಟಿ ವಾಚಿಸಿದರು.