ಮುಚ್ಚುವ ಸ್ಥಿತಿಗೆ ಬಂದಿದ್ದ ಓಜಾಲ ಶಾಲೆಗೆ “ಸಾಹಿತ್ಯ ತಾರೆ” ಪ್ರಶಸ್ತಿ

ಬಂಟ್ವಾಳ : ನ.19ರಂದು ಮಕ್ಕಳ ಕಲಾ ಲೋಕ ವತಿಯಿಂದ 18ನೇ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಬಂಟ್ವಾಳ ತಾಲೂಕಿನ ಶಂಭೂರು ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಸಮ್ಮೇಳ ನಡೆಯಲಿದೆ. ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ತಾಲೂಕಿನಲ್ಲಿ ಮಕ್ಕಳ ಸಾಹಿತ್ಯಾದಿ ಕಲೆಗಳಲ್ಲಿ ತೊಡಗಿಸಿಕೊಂಡಿರುವ ಶಾಲೆಗೆ ನೀಡಲಾಗುವ “ಸಾಹಿತ್ಯ ತಾರೆ” ಪ್ರಶಸ್ತಿಯನ್ನು ಈ ಬಾರಿ ಓಜಾಲ ದ.ಕ.ಜಿ.ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ನೀಡಲಾಗುವುದು.
ಈ ಬಗ್ಗೆ ಮಕ್ಕಳ ಕಲಾ ಲೋಕದ ಅಧ್ಯಕ್ಷರಾದ ರಮೇಶ ಎಂ ಬಾಯಾರು ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಶಾಲೆಯು ಸಾಹಿತ್ಯಾದಿ ಚಟುವಟಿಕೆಗಳನ್ನು ನಿರಂತರ ಮತ್ತು ವ್ಯವಸ್ಥಿತವಾಗಿ ನಡೆಸುತ್ತಿರುವುದನ್ನು ಗಮನಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ದಾಖಲಾತಿ ಕುಸಿದು ಹದಿನೇಳು ಮಕ್ಕಳನ್ನು ಹೊಂದಿದ್ದು ಮುಚ್ಚುವ ಸ್ಥಿತಿಗೆ ಬಂದಿದ್ದ ಓಜಾಲ ಶಾಲೆಯಲ್ಲಿ ಪ್ರಸ್ತುತ 131 ವಿದ್ಯಾರ್ಥಿಗಳನ್ನು ಹೊಂದಿದೆ. ಇದು ಕುಗ್ರಾಮವಾದರೂ ಶಾಲಾ ಶಿಕ್ಷಕರಲ್ಲದೆ, ಹೊರ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಮಕ್ಕಳಿಗೆ ಕಲೆ ಮತ್ತು ಸಾಹಿತ್ಯ ರಚನೆಯಲ್ಲಿ ತರಬೇತಿ ನೀಡಲಾಗುತ್ತಿದೆ.ಪ್ರತಿಭಾ ದರ್ಪಣದ ಮೂಲಕ ಮಕ್ಕಳ ಸ್ವರಚಿತ ಸಾಹಿತ್ಯ, ಚಿತ್ರಗಳು ಪ್ರಕಟಗೊಳ್ಳುತ್ತಿವೆ ಎಂದು ಅವರು ತಿಳಿಸಿದ್ದಾರೆ.