ಪ್ರಧಾನಿ ಮೋದಿಯವರಿಂದ ಜನಪರವಾದ ಆಡಳಿತ : ಪ್ರತಾಪ್ ಸಿಂಹ ನಾಯಕ್
ಬಂಟ್ವಾಳ: ಪ್ರಧಾನಿ ನರೇಂದ್ರ ಮೋದಿಯವರು ಜನಪರವಾದ ಆಡಳಿತ ನೀಡಿ ಆತ್ಮನಿರ್ಭರ ಭಾರತವನ್ನು ನಿರ್ಮಾಣ ಮಾಡಿದ್ದು, ಬಿಜೆಪಿಯ ಕಾರ್ಯಕರ್ತರು ಈ ಚುನಾವಣೆಯ ಪ್ರಚಾರವನ್ನು ಅತ್ಯಂತ ಧೈರ್ಯದಿಂದ ಮಾಡಬಹುದಲ್ಲದೆ ಮತವನ್ನು ಕೇಳಬಹುದು ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹೇಳಿದ್ದಾರೆ.

ಮಂಗಳವಾರ ಸಂಜೆ ಬಿ.ಸಿ.ರೋಡಿನ ಅಜ್ಜಿಬೆಟ್ಟು ಶಿಶು ಮಂದಿರದಲ್ಲಿ ನಡೆದ ಬಂಟ್ವಾಳ ಪುರ ಸಭಾವ್ಯಾಪ್ತಿಯ ಬಿಜೆಪಿ ಮಹಾ ಶಕ್ತಿಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ಅನುಷ್ಠಾನಕ್ಕೆ ತಂದಿರುವ ಯೋಜನೆಯನ್ನು ಪ್ರತಿಯೊಬ್ಬ ನಾಗರಿಕ ಪಡೆದಿರುತ್ತಾರೆ ಅಲ್ಲದೆ ಬಿಜೆಪಿ ಆಡಳಿತದಲ್ಲಾಗಿರುವ ಅಭಿವೃದ್ಧಿ, ಕಾರ್ಯ ಸಾಧನೆಯನ್ನು ಜನರ ಮುಂದಿಟ್ಟುಕೊಂಡು ಮತಯಾಚಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.
ಹಿಂದುತ್ವ ಮತ್ತು ಅಭಿವೃದ್ಧಿ ಆದ್ಯತೆ:
ಮಂಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, ಹಿಂದುತ್ವ ಮತ್ತು ಅಭಿವೃದ್ಧಿ ನನ್ನ ಆದ್ಯತೆಯಾಗಿದ್ದು, ಕಾರ್ಯಕರ್ತರು ಮೈಮರೆತು ಕುಳಿತುಕೊಳ್ಳದೆ, ಮುಂದಿನ ಒಂದು ತಿಂಗಳನ್ನು ಗಂಭೀರವಾಗಿ ಪರಿಗಣಿಸಿ ಚುನಾವಣೆಯಲ್ಲಿ ಗೆಲುವಿಗೆ ಬೇಕಾದ ಸಿದ್ದತೆಯನ್ನು ಶೃದ್ದೆಯಿಂದ ಮಾಡಬೇಕೆಂದರು.
ಬಿಜೆಪಿಯ ವಿಚಾರಗಳಿಗೆ ಪೂರಕವಾಗಿ ಕಾರ್ಯ ನಿರ್ವಹಿಸುವುದಲ್ಲದೆ, ಜಿಲ್ಲೆಯ ಗೌರವಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡುವುದಾಗಿ ಭರವಸೆಯಿತ್ತರಲ್ಲದೆ, ಒಬ್ಬ ಸಾಮಾನ್ಯ ಕಾರ್ಯಕರ್ತನಾದ ನನ್ನನ್ನು ಹಿರಿಯರು ಗುರುತಿಸಿ ಪ್ರತಿಷ್ಠಿತ ದ.ಕ.ಜಿಲ್ಲೆಯನ್ನು ಪ್ರತಿನಿಧಿಸಲು ಅವಕಾಶ ನೀಡಿರುವುದು ನನ್ನ ಪೂರ್ವಜನ್ಮದ ಫಲವಾಗಿದೆ.
ಚುನಾವಣೆವರೆಗೆ ವಿರಮಿಸದಿರಿ
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವ ನಿಟ್ಟಿನಲ್ಲಿ ಮತ್ತು ಯುವಜನತೆಯ ಕಲ್ಪನೆಯ ಜಿಲ್ಲೆಯ ಕನಸುಗಳು ಸಾಕಾರಗೊಳ್ಳಲು ಅಭ್ಯರ್ಥಿ ಬ್ರಿಜೇಶ್ ಚೌಟ ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕಾಗಿದೆ, ಇದಕ್ಕಾಗಿ ಕಾರ್ಯಕರ್ತರು ಚುನಾವಣೆಯವರೆಗೆ ವಿರಮಿಸದೆ ಕೆಲಸ ಮಾಡುವಂತೆ ಕರೆ ನೀಡಿದರು.
ಬಂಟ್ವಾಳ ಮಂಡಲದ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಪಕ್ಷದ ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ದೇವಪ್ಪ ಪೂಜಾರಿ, ವಿಕಾಸ್ ಪುತ್ತೂರು, ರಾಮದಾಸ್ ಬಂಟ್ವಾಳ, ಗಣೇಶ್ ದಾಸ್, ಡೊಂಬಯ್ಯ ಅರಳ, ಮೀನಾಕ್ಷಿ ಗೌಡ, ಹರಿಪ್ರಸಾದ್, ಪ್ರಸಾದ್ ಕುಮಾರ್ ರೈ ಮತ್ತಿತರರು ಉಪಸ್ಥಿತರಿದ್ದರು.