Published On: Sun, Jan 21st, 2024

ಬ್ರಿಟಿಷರಿಂದ ಮುಕ್ತಿ ಪಡೆದಿರುವ ಭಾರತ: ಕೊಲ್ನಾಡುಗುತ್ತು ವಿದ್ಯಾಧರ ಶೆಟ್ಟಿ

ಕೈಕಂಬ: ಬ್ರಿಟಿಷರಿಂದ ಮುಕ್ತಿ ಪಡೆದಿರುವ ಭಾರತ ಇಂದಿಗೂ ಸದೃಢವಾಗಿರಲು ಈ ದೇಶದ ಕುಟುಂಬ ವ್ಯವಸ್ಥೆ ಮತ್ತು ನ್ಯಾಯಾಂಗ ವ್ಯವಸ್ಥೆ ಕಾರಣವಾಗಿದೆ. ಪ್ರಸಕ್ತ ಕಾಲಘಟ್ಟದಲ್ಲಿ ನಮ್ಮ ದೇಶಕ್ಕೆ ಅಗತ್ಯವಲ್ಲದ ಬ್ರಿಟಿಷ್ ಕಾನೂನು-ಕಟ್ಟಳೆಗಳ ಪಡಿಯಚ್ಚು ಕಂಡು ಬರುತ್ತಿದ್ದು, ಮುಂದೆ ಇದು ಪೂರ್ಣ ಪ್ರಮಾಣದಲ್ಲಿ ಭಾರತೀಯತೆಯಲ್ಲಿ ಹಾಸುಹೊಕ್ಕಾಗಬೇಕು. ಅಂದರೆ, ಭಾರತದ ಮೂಲ ತತ್ವ-ಸಿದ್ಧಾಂತದಲ್ಲಿ ಅಡಕವಾಗಿರುವ ಧರ್ಮಾಡಳಿತ ಅನುಷ್ಠಾನಗೊಳ್ಳಬೇಕು ಎಂದು ಮೂಲ್ಕಿ ಕೊಲ್ನಾಡುಗುತ್ತು ವಿದ್ಯಾಧರ ಶೆಟ್ಟಿ ಅವರು ಹೇಳಿದರು.

ಗುರುಪುರ ಗೋಳಿದಡಿಗುತ್ತಿನಲ್ಲಿ ನಡೆಯುತ್ತಿರುವ `ಗುತ್ತುದ ವರ್ಸೊದ ಪರ್ಬೊ’ದ ೨ನೇ ದಿನವಾದ ಜ. ೨೦ರಂದು ಶ್ರೀ ವೈದ್ಯನಾಥೇಶ್ವರ ವೇದಿಕೆಯಲ್ಲಿ ಚಿಕ್ಕಮಗಳೂರು ವೇದವಿಜ್ಞಾನ ಮಂದಿರದ ಬ್ರಹ್ಮಋಷಿ ಶ್ರೀ ಕೆ. ಎಸ್. ನಿತ್ಯಾನಂದ ಗುರುಗಳ ಮಾರ್ಗದರ್ಶನದಲ್ಲಿ ಆಯೋಜಿಸಲಾದ ಗುತ್ತಿನ ವರ್ಷದ ಒಡ್ಡೋಲಗದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಬ್ರಿಟಿಷ್ ನ್ಯಾಯ ಪದ್ಧತಿಗೆ ಪರ್ಯಾಯವಾಗಿ ಈ ದೇಶದಲ್ಲಿ, ನಿಧಾನಗತಿಯಲ್ಲಾದರೂ ಧರ್ಮಾಡಳಿತ ಜಾರಿಗೆ ಬರುತ್ತದೆ ಎಂಬುದು ಇಂತಹ ಕಾರ್ಯಕ್ರಮಗಳಿಂದ ವೇದ್ಯವಾಗುತ್ತದೆ. ಖಂಡಿತವಾಗಿಯೂ, ಮುಂದೊಂದು ದಿನ ಗುತ್ತಿನ ಮನೆಗಳಲ್ಲಿ ನ್ಯಾಯದಾನ ಯಥಾವತ್ತಾಗಿ ಕಾರ್ಯಗತಗೊಳ್ಳುತ್ತದೆ ಎಂಬ ವಿಶ್ವಾಸವಿದೆ ಎಂದರು.

ತಿಂಗಳೆಬೀಡಿನವರಾದ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ ದಿಕ್ಸೂಚಿ ಭಾಷಣಗೈಯುತ್ತ ವೃತ್ತಿ ಧರ್ಮ, ವ್ಯವಹಾರ ಧರ್ಮ ಮತ್ತು ನ್ಯಾಯಶಾಸ್ತçದಲ್ಲಿ ಧರ್ಮ ಅಡಕವಾಗಿದ್ದರೆ ಅದುವೇ ಹಿಂದೂ ಧರ್ಮವಾಗುತ್ತದೆ. ಧರ್ಮಾಡಳಿತ ಪುನರುತ್ಥಾನದಲ್ಲಿ ವರ್ಧಮಾನರ ಪ್ರಯತ್ನ ಶ್ಲಾಘನೀಯವಾಗಿದೆ. ಧರ್ಮಾಡಳಿತದಿಂದ ಗ್ರಾಮ, ದೇಶದಲ್ಲಿ ಸುಭಿಕ್ಷೆ ನೆಲೆಸಲಿದೆ. ಈ ನಿಟ್ಟಿನಲ್ಲಿ ಗೋಳಿದಡಿ ಗುತ್ತಿನವರ ಪ್ರಯತ್ನಕ್ಕೆ ದೇಶೀಯ ನ್ಯಾಯಾಡಳಿತಲ್ಲಿ ವಿಶ್ವಾಸವಿರುವ ಸಹಕರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.

ಪ್ರಾಧ್ಯಾಪಕ ಡಾ. ಬಿ. ವಿ. ಕುಮಾರಸ್ವಾಮಿ ಮೈಸೂರು ಮಾತನಾಡಿ, ಕರಾವಳಿ ಪ್ರದೇಶವಾದ ತುಳುನಾಡಿನ ವಿಶಿಷ್ಟ ಆಚಾರ-ವಿಚಾರಗಳು ಈ ದೇಶದ ಬೇರೆಲ್ಲೂ ಕಾಣಸಿಗದು. ಇಲ್ಲಿನ ಜನಮಾನಸದ ಮೂಲ ಸಂಸ್ಕೃತಿ ಜಾಗೃತವಾದಲ್ಲಿ ದೇಶದಲ್ಲಿ ಧರ್ಮಾಡಳಿತ ಪುನರುತ್ಥಾನಗೊಳ್ಳುವಲ್ಲಿ ಯಾವುದೇ ಅಡ್ಡಿ ಆತಂಕಗಳಿಲ್ಲ. ಎಲ್ಲರಿಗೂ ಒಳ್ಳೆಯದಾಗಬೇಕು ಎಂದುಕೊಂಡು ಪರಸ್ಪರ ಪ್ರೀತಿ, ಧರ್ಮದ ತಳಹದಿಯಲ್ಲಿ ಬದುಕುವುದೇ ನಮ್ಮ ಸಂಸ್ಕೃತಿಯಾಗಿದೆ ಎಂದರು.

ಉಪನ್ಯಾಸಕಿ ಅರ್ಪಿತಾ ಪ್ರಶಾಂತ್ ಶೆಟ್ಟಿ ಉದ್ಯಾವರ ಕಟಪಾಡಿ ಮಾತನಾಡಿ, ತುಳುನಾಡಿನಲ್ಲಿ ಗುತ್ತಿನ ಮನೆಗಳು ಮತ್ತು ಮಹಿಳೆಯರಿಗೆ ವಿಶೇಷ ಸ್ಥಾನಮಾನವಿದೆ. ಮಹಿಳೆಯರಿಗೂ `ಗಡಿ’ ಉಳಿಸುವ ಜವಾಬ್ದಾರಿ ಇದೆ. ನ್ಯಾಯ ಮತ್ತು ಧರ್ಮಾಧರಿತ ವ್ಯವಸ್ಥೆಯೊಂದಿಗೆ ಊರು ಉದ್ಧಾರವಾಗಬೇಕು ಎಂದರು.

ಡಾ. ಸಮನಾ ಶೆಟ್ಟಿ ಮತ್ತು ನಿಷ್ಕಲಾ ಶೆಟ್ಟಿ ಪ್ರಾರ್ಥನೆಗೈದರು. ದಿವ್ಯಾ ಶೆಟ್ಟಿ ಸ್ವಾಗತಿಸಿದರು. ದೀಪಾ ನವೀನ್ ಶೆಟ್ಟಿ ಪೆರ್ಮಾರಗುತ್ತು ಪ್ರಾಸ್ತಾವಿಸಿದರು. ಬೆಳ್ಳಿಬೆಟ್ಟುಗುತ್ತು ಸತೀಶ ಕಾವ, ಯಾದವ ಕೋಟ್ಯಾನ್ ಪೆರ್ಮುದೆ, ಗೋಳಿದಡಿ ಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಮತ್ತು ಅವರ ಪತ್ನಿ ಉಷಾ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಉಪಸ್ಥಿತರಿದ್ದರು. ನವೀನ್ ಶೆಟ್ಟಿ ಎಡ್ಮೆಮಾರ್ ಕಾರ್ಯಕ್ರಮ ನಿರೂಪಿಸಿದರು. ಸುನೀಲಾ ಪ್ರಭಾಕರ ಶೆಟ್ಟಿ ವಂದಿಸಿದರು. ಗುತ್ತಿನ ಚಾವಡಿ ಮಿತ್ರರು ಸಹಕರಿಸಿದರು. ಬಳಿಕ ಮಂಗಳೂರು ಸನಾತನ ನಾಟ್ಯಾಲಯ ನೃತ್ಯಗುರು ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ ಮತ್ತು ವಿದುಷಿ ಶ್ರೀಲತಾ ನಾಗರಾಜ ಇವರ ಶಿಷ್ಯ ವೃಂದದಿAದ ಭರತನಾಟ್ಯ ಜರುಗಿತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter